ಬೆಂಗಳೂರು: ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಸ್ವಾಮೀಜಿಗಳಿಗೆ ಪುರುಷತ್ವ ಪರೀಕ್ಷೆ ನಡೆಸಲಾಗಿದೆ.
ಪೊಲೀಸರು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಶ್ರೀಗಳನ್ನು ಕರೆದೊಯ್ದಿದ್ದು ಅಲ್ಲಿ ವೈದ್ಯರಾದ ವೇಣು ಅವರ ನೇತೃತ್ವದಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು ವರದಿಯಲ್ಲಿ ಪಾಸಿಟಿವ್ ಎಂದು ಬಂದಿದೆ. ಇನ್ನು ಪುರುಷತ್ವ ಪರೀಕ್ಷೆಯ ವರದಿಯನ್ನು ಸೋಮವಾರ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡುವ ಸಾಧ್ಯತೆ ಇದೆ.
ಇದನ್ನೂ ಓದಿ: ಮುರುಘಾ ಶರಣರ ಪ್ರಕರಣ ಬಗ್ಗೆ ಮಾತನಾಡಲು ನನಗೆ ವಾಕರಿಕೆ ಬರುತ್ತದೆ, ಮಾತನಾಡಿದರೆ ಅನಿಷ್ಟ: ಕೆ ಎಸ್ ಈಶ್ವರಪ್ಪ
ಶರಣರ ಡಿಎನ್ಎ, ರಕ್ತ, ಮೂತ್ರ, ಕೂದಲು ಸೇರಿದಂತೆ ಹಲವು ಸ್ಯಾಂಪಲ್ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯ ಪಡೆದಿದ್ದು ಅದರ ಪರೀಕ್ಷೆ ವರದಿ ಬರಬೇಕಿದೆ.
ಡಿವೈಎಸ್ ಪಿ ಕಚೇರಿಯಲ್ಲಿ ಇಂದು ಬೆಳಗ್ಗೆ ಶ್ರೀಗಳನ್ನು ವಿಚಾರಣೆಗೆ ಒಳಪಡಿಸಲಾಯಿತು. ಡಿವೈಎಸ್ ಪಿ ಅನಿಲ್ ಕುಮಾರ್ ಅವರು ಶ್ರೀಗಳಿಗೆ ಹತ್ತಾರು ಪ್ರಶ್ನೆಗಳನ್ನು ಕೇಳಿದ್ದಾರೆ. ಹೆಚ್ಚಿನ ಪ್ರಶ್ನೆಗಳಿಗೆ ಶ್ರೀಗಳು ಇದು ನನ್ನ ವಿರುದ್ಧದ ದೊಡ್ಡ ಷಡ್ಯಂತ್ರ ಎಂದು ಉತ್ತರಿಸಿದ್ದಾರೆ ಎಂದು ವರದಿಯಾಗಿದೆ.
ಮುರುಘಾ ಶ್ರೀಗಳ ವಿರುದ್ಧ ಕಳೆದ ವಾರ ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಮಠದ ಶಾಲೆಯಲ್ಲಿ ಓದುತ್ತಿರುವ ಇಬ್ಬರು ವಿದ್ಯಾರ್ಥಿನಿಯರು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಸಿದ್ದರು. ನಂತರ ಮೈಸೂರು ಪೊಲೀಸರು ಈ ಪ್ರಕರಣವನ್ನು ಚಿತ್ರದುರ್ಗಕ್ಕೆ ಹಸ್ತಾಂತರಿಸಿದ್ದರು.
ಇದನ್ನೂ ಓದಿ: ಪೋಕ್ಸೋ ಕೇಸಿನಡಿ ಜೈಲುಪಾಲಾಗಿರುವ ಮುರುಘಾ ಶರಣರಿಗೆ ಮತ್ತಷ್ಟು ಸಂಕಷ್ಟ: ವಂಚನೆ ಕೇಸಿನಲ್ಲಿ ಜಾಮೀನುರಹಿತ ವಾರಂಟ್
ನಿನ್ನೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶ್ರೀಗಳನ್ನು ಸೆಪ್ಟೆಂಬರ್ 5ರವರೆಗೆ ಪೊಲೀಸ್ ಕಸ್ಟಡಿಗೆ ಆದೇಶಿಸಿತ್ತು.