ರಾಜ್ಯ

'ಜನಸ್ಪಂದನ'ಕ್ಕೆ ಬಿಜೆಪಿ ಸಜ್ಜು: ದೊಡ್ಡಬಳ್ಳಾಪುರದಲ್ಲಿ ಸಮಾವೇಶಕ್ಕೆ ಭಾರೀ ಸಿದ್ಧತೆ, ಬಿಗಿ ಪೊಲೀಸ್ ಭದ್ರತೆ

Sumana Upadhyaya

ಬೆಂಗಳೂರು: ಈಗಾಗಲೇ ಎರಡು ಬಾರಿ ಮುಂದೂಡಿಕೆಯಾಗಿದ್ದ ಬಿಜೆಪಿ ಸರ್ಕಾರದ ಜನಸ್ಪಂದನ ಜನೋತ್ಸವ ಸಮಾವೇಶ ಇಂದು ಶನಿವಾರ ನಡೆಯುತ್ತಿದೆ. ಇದಕ್ಕೆ ಬೆಂಗಳೂರು ಗ್ರಾಮಾಂತರ ತಾಲ್ಲೂಕು ದೊಡ್ಡಬಳ್ಳಾಪುರದಲ್ಲಿ ಭರ್ಜರಿ ಸಿದ್ಧತೆ ಏರ್ಪಾಡಾಗಿದೆ. 

ಸರ್ಕಾರದ ಮೂರು ವರ್ಷಗಳ ಸಾಧನೆಯನ್ನು ಮುಂದಿಟ್ಟುಕೊಂಡು ಶಕ್ತಿ ಪ್ರದಶರ್ನಕ್ಕೆ ಆಡಳಿತ ಪಕ್ಷ ಬಿಜೆಪಿ ಮುಂದಾಗಿದ್ದು, ಈ ಮೂಲಕ ಮುಂಬರುವ ವಿಧಾನಸಭಾ ಚುಣಾವಣೆ ಗೆಲುವಿಗೆ ಸಜ್ಜಾಗಿದೆ. ಸುಮಾರು 40 ಎಕರೆ ವಿಸ್ತೀರ್ಣದಲ್ಲಿ ಜನಸ್ಪಂದನ ಸಮಾವೇಶ ಆಯೋಜನೆ ಮಾಡಿದ್ದು, 3 ಲಕ್ಷ ಜನರಿಗೆ ಊಟದ ವ್ಯವಸ್ಥೆ, ಸುಮಾರು 200 ಎಕರೆ ಪ್ರದೇಶದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ, ಸರ್ಕಾರಿ ಹಾಗೂ ಖಾಸಗಿ ಸೇರಿದಂತೆ 5 ಸಾವಿರ ಬಸ್​ಗಳ ವ್ಯವಸ್ಥೆ ಮಾಡಲಾಗಿದೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಸೇರಿ ಹಲವು ಗಣ್ಯರು ಭಾಗಿ ಸಾಧ್ಯತೆ ಇದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಪೂರ್ವ ನಿಗದಿತ ಕಾರ್ಯಕ್ರಮಗಳಿಂದಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಬರುತ್ತಿಲ್ಲ. ಬದಲಿಗೆ ಕೇಂದ್ರದಿಂದ ಸಚಿವೆ ಸ್ಮೃತಿ ಇರಾನಿ ಬರುತ್ತಾರೆ. ಅವರ ಜೊತೆ ವೇದಿಕೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ,  ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸೇರಿದಂತೆ ಸಚಿವರು, ಶಾಸಕರು ಹಾಗೂ ಮುಖಂಡರು ಪಾಲ್ಗೊಳ್ಳಲಿದ್ದಾರೆ.

ಊಟ, ತಿಂಡಿ ವ್ಯವಸ್ಥೆ: ಸಮಾವೇಶ ಅಂದ ಮೇಲೆ ಲಕ್ಷಾಂತರ ಜನ ಬರುವವರಿಗೆ ಊಟ-ತಿಂಡಿ ವ್ಯವಸ್ಥೆ ಮಾಡಬೇಕು. ಬೆಳಗಿನ ಉಪಾಹಾರಕ್ಕೆ ರೈಸ್​ಬಾತ್​, ಮೊಸರನ್ನ ಹಾಗೂ ಬಾದುಷಾ ತಯಾರಿಸಲಾಗಿದೆ. 900 ಬಾಣಸಿಗರು ಹಾಗೂ ಭಟ್ಟರಿಂದ ಅಡುಗೆ ತಯಾರಿ ಮಾಡಲಾಗುತ್ತಿದ್ದು, ಜನಸ್ಪಂದನ ಸಮಾವೇಶದಲ್ಲಿ 200 ಊಟದ ಕೌಂಟರ್​​ಗಳು, 20 ಕೌಂಟರ್ ವಿಶೇಷ ಚೇತನರಿಗೆ, 40 ಮಹಿಳೆಯರಿಗೆ, ಪುರುಷರಿಗೆ 140 ಊಟದ ಕೌಂಟರ್​ಗಳನ್ನ ತೆರೆಯಲಾಗಿದೆ. ನೀರಿನ ಬಳಕೆಗೆ 200 ತಾತ್ಕಾಲಿಕ ಕೊಳಾಯಿಗಳ ಸ್ಥಾಪನೆ ಮಾಡಲಾಗಿದೆ.

ಬಿಗಿ ಪೊಲೀಸ್ ಭದ್ರತೆ: ಬೆಂಗಳೂರು ಗ್ರಾಮಾಂತರ ಎಸ್​ಪಿ ಬಾಲದಂಡಿ ನೇತೃತ್ವದಲ್ಲಿ ಭದ್ರತೆಗೆ 4 ಜಿಲ್ಲೆಗಳ ಪೊಲೀಸರ ನಿಯೋಜನೆ ಮಾಡಲಾಗಿದೆ. ಇಬ್ಬರು ಎಎಸ್​​ಪಿ, 11 ಡಿವೈಎಸ್​​ಪಿ, 35 ಇನ್ಸ್​ಪೆಕ್ಟರ್​ಗಳು, 100 PSI, 150 ಎಎಸ್​​ಐ, 1200 ಕಾನ್ಸ್​​ಟೇಬಲ್​ಗಳು, ಹೆಚ್ಚುವರಿಯಾಗಿ 400 ಗೃಹ ರಕ್ಷಕ ದಳ ಸಿಬ್ಬಂದಿ, 4 KSRP ತುಕಡಿ, 6 ಡಿಆರ್ ತುಕಡಿ ಭದ್ರತೆಗೆ ನಿಯೋಜನೆ ಮಾಡಲಾಗಿದೆ.

SCROLL FOR NEXT