ಬೆಂಗಳೂರು: ಬ್ರೈನ್ ಸ್ಟ್ರೋಕ್ನಿಂದ ಮೃತಪಟ್ಟ ಕೋಲಾರದ 29 ವರ್ಷದ ಮಹಿಳೆಯೊಬ್ಬರು ತಮ್ಮ ಮರಣದ ನಂತರ ಅವರ ಪ್ರಮುಖ ಅಂಗಗಳನ್ನು ದಾನ ಮಾಡಿ ಎಂಟು ಜನರಿಗೆ ಬಾಳಿಗೆ ಬೆಳಕಾಗಿದ್ದಾರೆ.
ಕಳೆದ ಆಗಸ್ಟ್ 27 ರಂದು ಕೋಲಾರ ಮೂಲದ ಶ್ವೇತಾ ಬ್ರೈನ್ ಸ್ಟ್ರೋಕ್ಗೆ ಒಳಗಾದರು. ಅವರನ್ನು ಉಳಿಸಲು ಕುಟುಂಬಸ್ಥರು ಸಾಕಷ್ಟು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಮರುದಿನ ಆಗಸ್ಟ್ 28 ರಂದು ಬೆಂಗಳೂರಿನ ಬಿಜಿಎಸ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಗೆ ಕರೆತರಲಾಯಿತು. ಆಗಸ್ಟ್ 31 ರಂದು ಅವರ ಬ್ರೈನ್ ಸ್ಟೆಮ್ ಡೆಡ್ ಆಗಿತ್ತು, ಆದ ಆಕೆಯ ಮನೆಯವರು ಮುಂದೆ ಬಂದು ಶ್ವೇತಾರ ಯಕೃತ್ತು, ಮೂತ್ರಪಿಂಡಗಳು, ಹೃದಯ ಕವಾಟ, ಚರ್ಮ ಮತ್ತು ಕಾರ್ನಿಯಾಗಳನ್ನು ಕಸಿ ಮಾಡಲು ನೀಡಿದರು.
ಶ್ವೇತಾರ ಹೃದಯ ಕವಾಟ ಮತ್ತು ಚರ್ಮವನ್ನು ಜಯದೇವ ಆಸ್ಪತ್ರೆಯ ಹೃದಯ ಕವಾಟ ಬ್ಯಾಂಕ್ಗೆ ಮತ್ತು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸ್ಕಿನ್ ಬ್ಯಾಂಕ್ಗೆ ಕಳುಹಿಸಲಾಗಿದ್ದು, ಕಾರ್ನಿಯಾಗಳನ್ನು ಪ್ರಭಾ ನೇತ್ರ ಚಿಕಿತ್ಸಾಲಯಕ್ಕೆ ದಾನ ಮಾಡಲಾಗಿದೆ. ಯಕೃತ್ತು ಮತ್ತು ಒಂದು ಮೂತ್ರಪಿಂಡವನ್ನು ಬಿಜಿಎಸ್ ಗ್ಲೆನೆಗಲ್ಸ್ ಆಸ್ಪತ್ರೆಯಲ್ಲಿ ಕಸಿ ಮಾಡಲಾಗಿದೆ. ಇನ್ನೊಂದು ಮೂತ್ರಪಿಂಡವನ್ನು ಎನ್ಯು ಆಸ್ಪತ್ರೆಯಲ್ಲಿ ರೋಗಿಗೆ ಕಸಿ ಮಾಡಲಾಗಿದೆ ಎಂದು ಬಿಜಿಎಸ್ ಆಸ್ಪತ್ರೆಯ ವಕ್ತಾರರು ತಿಳಿಸಿದ್ದಾರೆ.
ಇದನ್ನೂ ಓದಿ: ಮೆದುಳು ನಿಷ್ಕ್ರಿಯಗೊಂಡ ಬಾಲಕನ ಅಂಗಾಂಗ ದಾನ ಮಾಡಿದ ಕುಟುಂಬ, ಆಸ್ಪತ್ರೆ ಶುಲ್ಕ ಮನ್ನಾ ಮಾಡಿದ ಆರೋಗ್ಯ ಇಲಾಖೆ!
ತಮ್ಮವರನ್ನು ಕಳೆದುಕೊಂಡ ದುಃಖದ ಸಮಯದಲ್ಲಿ, ದಾನಿಗಳ ಕುಟುಂಬಗಳು ಈ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಲು ಧೈರ್ಯ ಮತ್ತು ಸಹಾನುಭೂತಿಯನ್ನು ತೋರಿಸಿರುವುದು ಪ್ರಶಂಸೆಗೆ ಪಾತ್ರವಾಗಿದೆ. ಈ ರೀತಿ ಅಂಗಾಂಗ ಮಾಡಲು ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬಂದರೆ ಅನೇಕ ಜೀವಗಳಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯ ಮುಖ್ಯ ಸಲಹೆಗಾರ ಮತ್ತು ಕಸಿ ಸಂಯೋಜಕಿ ಸರಳಾ ಅನಂತರಾಜ್ ಹೇಳುತ್ತಾರೆ.
ವ್ಯಕ್ತಿ ಸತ್ತ ನಂತರ ಪ್ರತಿಯೊಂದು ನಿಮಿಷವೂ ಅಂಗಾಂಗ ದಾನದಲ್ಲಿ (Organ donation) ಮುಖ್ಯವಾಗುತ್ತದೆ. ಶ್ವೇತಾ ಅವರು ಪತಿ, ತಾಯಿ ಹಾಗೂ ಇಬ್ಬರು ಸಹೋದರರನ್ನು ಅಗಲಿದ್ದಾರೆ.