ರಾಜ್ಯ

ಪೀಕ್ ಅವರ್‌ನಲ್ಲಿ ಮೆಟ್ರೋದಲ್ಲಿ ಮಹಿಳಾ ಟೆಕ್ಕಿಗೆ ಲೈಂಗಿಕ ಕಿರುಕುಳ: ವ್ಯಕ್ತಿಯ ಬಂಧನ

Nagaraja AB

ಬೆಂಗಳೂರು: ಪೀಕ್ ಅವರ್ ನಲ್ಲಿ ಮೆಟ್ರೋ ರೈಲಿನಲ್ಲಿ ಕಾಲಿಡಲು ಜಾಗವಿಲ್ಲದಂತೆ ಜನರು ತುಂಬಿರುತ್ತಾರೆ. ಇಂತಹುದೇ ಸಮಯಕ್ಕೆ ಕಾಯುವ ಕೆಲವು ದುಷ್ಕರ್ಮಿಗಳು, ಮಹಿಳೆಯರೊಂದಿಗೆ ಅಸಭ್ಯ ವರ್ತನೆ, ಕಿರುಕುಳ ನೀಡುವ ಘಟನೆಗಳು ನಡೆಯುತ್ತಿವೆ. ಮಹಿಳಾ ಟೆಕ್ಕಿಯೊಬ್ಬರಿಗೆ ಇಂತಹ ಕೆಲಸ ಮಾಡಿದ ಕಿಡಿಗೇಡಿಯೊಬ್ಬನನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಹೌದು. ರಾಜಾಜಿ ನಗರದಿಂದ ಗ್ರೀನ್ ಲೈನ್ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ಟೆಕ್ಕಿ, ಮಾರ್ಗ ಬದಲಾಯಿಸಲು ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ರೈಲಿನಿಂದ ಇಳಿಯುತ್ತಿದ್ದಂತೆ ವ್ಯಕ್ತಿಯೊಬ್ಬ ಕಿರುಕುಳ ನೀಡಿದ್ದಾನೆ. ನಂತರ ನಿಲ್ದಾಣದೊಳಗೆ ಹೈಡ್ರಾಮ ನಡೆದಿದ್ದು, ಮೆಟ್ರೋ ಭದ್ರತಾ ಸಿಬ್ಬಂದಿ ಬೆನ್ನಟ್ಟುವ ಮೂಲಕ ಆರೋಪಿಯನ್ನು ಬಂಧಿಸಿದ್ದಾರೆ. ಈತನ ವಿರುದ್ಧ ಮಹಿಳೆ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಆರೋಪಿ ಕಳ್ಳತನ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವುದು ನಂತರ ತಿಳಿದುಬಂದಿದೆ. ಮೆಟ್ರೋ ಮೂಲಗಳ ಪ್ರಕಾರ, ಮಾಗಡಿ ರಸ್ತೆ ಬಳಿಯಿರುವ ಕಚೇರಿಗೆ ಕೆಲಸಕ್ಕೆ ಹೋಗುತ್ತಿದ್ದ ಮಹಿಳೆಯು ಕೆಂಪೇಗೌಡ ನಿಲ್ದಾಣದ ಪ್ಲಾಟ್‌ಫಾರ್ಮ್ 4 ರಲ್ಲಿ ಬೆಳಿಗ್ಗೆ 9.40ರಲ್ಲಿ ಇಳಿಯುತ್ತಿರುವಾಗ ಈ ಘಟನೆ ನಡೆದಿದೆ.

ಲೋಕೇಶ್ ಆಚಾರ್

ಪೀಕ್ ಅವರ್ ಲಾಭ ಪಡೆದುಕೊಂಡ ಆರೋಪಿ ಲೋಕೇಶ್ ಆಚಾರ್, ಮಹಿಳೆಯನ್ನು ಅನುಚಿತವಾಗಿ ಮುಟ್ಟಿದ್ದಾನೆ. ನಂತರ ಮಹಿಳೆ ಜೋರಾಗಿ ಕಿರುಚಿದ್ದು, ಅಪರಾಧಿ ಅಲ್ಲಿಂದ ಕಾಲ್ಕಿತ್ತು, ಎಸ್ಕಲೇಟರ್‌ ಹತ್ತಿದ್ದಾನೆ. ಗದ್ದಲವನ್ನು ಕೇಳಿದ ಭದ್ರತಾ ಅಧಿಕಾರಿ ಪುಟ್ಟಮಾದಯ್ಯ ಮತ್ತು ಸಹಾಯಕ ಭದ್ರತಾ ಅಧಿಕಾರಿ ದಿವಾಕರ್, ಎಸ್ಕಲೇಟರ್ ಬಳಿ ಬಂದು ಆಚಾರ್ ಅವರನ್ನು ಬಂಧಿಸಿದ್ದಾರೆ. 

ಭದ್ರತಾ ಸಿಬ್ಬಂದಿ ಆತನನ್ನು ವಿಚಾರಣೆ ನಡೆಸಿದ್ದಾರೆ. ಲೋಕೇಶ್ ಆಚಾರ್ ಅಡುಗೆ ಉದ್ಯಮದ ನೌಕರನಾಗಿದ್ದು, ಚಲನಚಿತ್ರೋದ್ಯಮದಲ್ಲಿ ಸಂಪರ್ಕ ಹೊಂದಿದ್ದಾನೆ ಎಂಬುದು ತಿಳಿದುಬಂದಿದೆ. ಆತನ ಬಳಿ ಎರಡು ಮೆಟ್ರೋ ಕಾರ್ಡ್‌ ಸಿಕ್ಕಿರುವುದಾಗಿ ಮೂಲಗಳು ತಿಳಿಸಿವೆ. 

ಮಹಿಳೆಗೆ ಮೆಟ್ರೋ ಸಿಬ್ಬಂದಿ ಕೌನ್ಸಿಲಿಂಗ್ ಮಾಡಿದ್ದು, ಆಚಾರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ದೂರು ದಾಖಲಿಸುವಂತೆ ಸೂಚಿಸಿದ್ದಾರೆ. ಮಹಿಳೆ ಸಮೀಪದ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಭೇಟಿ ನೀಡಿ ಕಿರುಕುಳ ನೀಡಿದವರ ವಿರುದ್ಧ ದೂರು ದಾಖಲಿಸಿದ್ದಾರೆ. ಆಕೆ ಎಫ್‌ಐಆರ್ ದಾಖಲಿಸಲು ಇಷ್ಟಪಡದ ಕಾರಣ ಎನ್ ಸಿಆರ್ ದೂರು ಮಾತ್ರ ದಾಖಲಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಬಿಎಂಆರ್ ಸಿಎಲ್ ಸಿಬ್ಬಂದಿ ಆಚಾರ್ ಅವರನ್ನು ಠಾಣೆಗೆ ಕರೆತಂದರು.

2023ರ ಏಪ್ರಿಲ್‌ನಲ್ಲಿ ಬಿಎಂಟಿಸಿ ಬಸ್‌ನಲ್ಲಿ ಮಹಿಳೆಯೊಬ್ಬರ ಮೊಬೈಲ್ ಕದ್ದ ಆರೋಪದ ಮೇಲೆ ಆಚಾರ್ ವಿರುದ್ಧ ಈ ಹಿಂದೆ ಪ್ರಕರಣ ದಾಖಲಾಗಿತ್ತು. ಅವರ ನಿವಾಸದಿಂದ ಒಟ್ಟು 20 ಮೊಬೈಲ್ ಫೋನ್‌ಗಳು ಮತ್ತು ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆ ಪ್ರಕರಣದಲ್ಲಿ ಆರೋಪಿ ಜಾಮೀನಿನ ಮೇಲೆ ಹೊರಗಿದ್ದರು ಎಂದು ಇನ್ನೊಂದು ಮೂಲಗಳು ತಿಳಿಸಿವೆ.

ಕಳೆದ ತಿಂಗಳು ಕೆಂಪೇಗೌಡ ನಿಲ್ದಾಣದಲ್ಲಿ ಕಿರುಕುಳದ ಘಟನೆಯ ನಂತರ, ಯಾವುದೇ ಮರುಕಳಿಸದಂತೆ ತಡೆಯಲು ಪೀಕ್ ಅವರ್‌ಗಳಲ್ಲಿ ಮೆಟ್ರೋ ನಿಲ್ದಾಣಗಳಲ್ಲಿ ಜಾಗರೂಕತೆ ಮತ್ತು ಕಣ್ಗಾವಲು ಹೆಚ್ಚಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ಸಿಬ್ಬಂದಿ ತಿಳಿಸಿದ್ದಾರೆ. ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಹಿಂದಿನ ವರದಿಯಲ್ಲಿ ಮೆಟ್ರೋದಲ್ಲಿನ ಪೀಕ್ ಅವರ್ ಕುರಿತು ವರದಿ ಮಾಡಿತ್ತು.ಇದರೊಂದಿಗೆ  ಪ್ರಯಾಣಿಕರ ಸುರಕ್ಷಿತ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಎರಡನೇ ಮಹಿಳಾ ಕೋಚ್ ಗೆ ವ್ಯವಸ್ಥೆ ಮಾಡುವಂತೆ ಸಲಹೆ ನೀಡಲಾಗಿತ್ತು. 

SCROLL FOR NEXT