ರಾಜ್ಯ

ಕೋಲ್ಡ್ ಸ್ಟೋರೇಜ್ ಸೌಲಭ್ಯ ಕೊರತೆ: ರಾಜ್ಯದ 4 ಸಾವಿರ ಕೋಟಿ ರೂ. ಪ್ಯಾಪಾರ ಮಹಾರಾಷ್ಟ್ರ ಪಾಲು

Manjula VN

ಬೆಂಗಳೂರು: ರಾಜ್ಯದಲ್ಲಿ ಬೆಳೆಯುವ ದ್ರಾಕ್ಷಿಗೆ ಕೋಲ್ಡ್ ಸ್ಟೋರೇಜ್ ಸೌಲಭ್ಯಗಳಿಲ್ಲದ ಕಾರಣ, ಕರ್ನಾಟಕಕ್ಕೆ ಪ್ರತಿ ವರ್ಷ ಕೋಟಿಗಟ್ಟಲೆ ವ್ಯಾಪಾರ ನಷ್ಟವಾಗುತ್ತಿದ್ದು, ಮಹಾರಾಷ್ಟ್ರ ರಾಜ್ಯಕ್ಕೆ ಲಾಭವಾಗುತ್ತಿದೆ ಎಂದು ಸ್ವತಃ ತೋಟಗಾರಿಕಾ ಸಚಿವ ಮುನಿರತ್ನ ಅವರು ವಿಧಾನಸಭೆಗೆ ತಿಳಿಸಿದರು.

ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯರ ಪ್ರಸ್ತಾಪಗಳಿಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಶೇ.73 ರಷ್ಟು ದ್ರಾಕ್ಷಿಯನ್ನು ವಿಜಯಪುರದಲ್ಲಿ ಬೆಳೆಯಲಾಗುತ್ತಿದೆ. ಆದರೆ, ಇವುಗಳಿಗೆ ಕೋಲ್ಡ್ ಸ್ಟೋರೇಜ್ ಸೌಲಭ್ಯಗಳಿಲ್ಲ. ಈ ಕಾರಣದಿಂದ ಬೆಳೆಗಾರರು 150 ಕಿಲೋಮೀಟರ್ ದೂರದ ಮಹಾರಾಷ್ಟ್ರಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಇದರಿಂದ ರಾಜ್ಯಕ್ಕೆ ರೂ.4 ಸಾವಿರ ಕೋಟಿ ಆದಾಯ ನಷ್ಟವಾಗುತ್ತಿದ್ದು, ಮಹಾರಾಷ್ಟ್ರಕ್ಕೆ ಲಾಭವಾಗುತ್ತಿದೆ ಎಂದು ಹೇಳಿದರು.

ಈ ವೇಳೆ ರಾಜ್ಯ ಸರ್ಕಾರ ಕೂಡಲೇ ಕೋಲ್ಡ್ ಸ್ಟೋರೇಜ್ ಸೌಲಭ್ಯ ಒದಗಿಸಿ ರೈತರಿಗೆ ನೆರವಾಗಬೇಕೆಂದು ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ಮುನಿರತ್ನ ಹಾಗೂ ಸಿಎಂ ಬೊಮಮಾಯಿ, ಈ ಬಜೆಟ್ ನಲ್ಲಿ ರೂ.100 ಕೋಟಿಗಳನ್ನು ಕೋಲ್ಡ್ ಸ್ಟೋರೇಡ್ ಸೌಲಭ್ಯ ಒದಗಿಸಲು ಘೋಷಿಸಲಾಗಿದೆ. ನಬಾರ್ಡ್ ಮೂಲಕವೂ 40 ಕೋಟಿ ರೂ.ಗಳನ್ನು ಪಡೆಯುತ್ತಿದ್ದಾರೆ. ಈ ಸಂಬಂಧ ವಿವರವಾದ ಯೋಜನಾ ವರದಿ (ಡಿಆರ್‌ಪಿ) ಸಿದ್ಧವಾಗುತ್ತಿದೆ. ಒಮ್ಮೆ ಈ ಕೋಲ್ಡ್ ಸ್ಟೋರೇಜ್ ಘಟಕಗಳು ಸ್ಥಾಪನಗೊಂಡರೆ, 40,000 ಟನ್‌ ದ್ರಾಕ್ಷಿಯನ್ನು ಸಂಗ್ರಹಿಸಬಹುದು. ಪ್ರಸ್ತುತ ವಿಜಯಪುರ, ಬೆಳಗಾವಿ ಮತ್ತು ಬಾಗಲಕೋಟೆಯ ದ್ರಾಕ್ಷಿ ಬೆಳೆಗಾರರಿಂದ ರೂ. 4000 ಕೋಟಿ ವ್ಯವಹಾರ ಮಹಾರಾಷ್ಟ್ರಕ್ಕೆ ಹೋಗುತ್ತಿದೆ ಎಂದು ತಿಳಿಸಿದರು.

ಇದಕ್ಕೆ ಪೂರಕವಾಗಿ ವಿಜಯಪುರ ಶಾಸಕ ಬಸನಗೌಡ ಯತ್ನಾಳ್ ಮಾತನಾಡಿ, 4000 ಕೋಟಿ ಉಳಿಸಿಕೊಳ್ಳುವ ಅವಶ್ಯಕತೆ ಇದ್ದು, ಪ್ರಸ್ತುತ ಮಹಾರಾಷ್ಟ್ರಕ್ಕೂ ತೆರಿಗೆ ಪಾವತಿಸಲಾಗುತ್ತಿದೆ. ಕೋಲ್ಡ್ ಸ್ಟೋರೇಜ್ ಘಟಕಗಳ ಸ್ಥಾಪನೆಯಿಂದ ರಾಜ್ಯಕ್ಕೂ ತೆರಿಗೆ ಬರಲಿದೆ ಎಂದರು.

ಬಳಿಕ ಮಾತನಾಡಿದ ಮುನಿರತ್ನ ಅವರು, ಸ್ಥಳೀಯ ದ್ರಾಕ್ಷಿ ಬೆಳೆಗಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ವಿಜಯಪುರ ನಗರದಲ್ಲಿ 141 ಎಕರೆ ವಿಸ್ತೀರ್ಣದಲ್ಲಿ ವೈನ್​ ಪಾರ್ಕ್​ ನಿರ್ಮಿಸಲಾಗುವುದು. ನಮ್ಮ ರಾಜ್ಯಕ್ಕೆ ವರಮಾನ ಹೆಚ್ಚಿಸುವುದು ಹಾಗೂ ಸ್ಥಳೀಯರಿಗೆ ಪ್ರೋತ್ಸಾಹ ನೀಡಲು ವೈನ್ ಪಾರ್ಕ್ ನಿರ್ಮಾಣ ಮಾಡಲಾಗುವುದು. ವಿದೇಶಿ ಬ್ರಾಂಡ್ ಮಾದರಿ ವೈನ್ ಉತ್ಪಾದಿಸಬೇಕು ಎಂಬುದು ಬಹುತೇಕರ ಬೇಡಿಕೆ. ಸರ್ಕಾರ ಇದನ್ನು ಪರಿಗಣಿಸಲಿದೆ ಎಂದು ತಿಳಿಸಿದರು.

SCROLL FOR NEXT