ರಾಜ್ಯ

ದಕ್ಷಿಣ ಕನ್ನಡ: ಅರಣ್ಯಾಧಿಕಾರಿಗಳ ಮೇಲೆ ಹಲ್ಲೆ ನಡೆಸಿದ 7 ಮಂದಿಯ ಬಂಧನ

Ramyashree GN

ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಬ್ಬರನ್ನು ಕೊಂದಿದ್ದ ಕಾಡಾನೆಯನ್ನು ಸೆರೆಹಿಡಿದ ನಂತರ ಅರಣ್ಯ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಏಳು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಗುರುವಾರ ರಾತ್ರಿ ನಡೆದ ಘಟನೆಯಲ್ಲಿ ಸ್ಥಳೀಯರು ಅಧಿಕೃತ ವಾಹನಗಳಿಗೂ ಹಾನಿ ಉಂಟು ಮಾಡಿದ್ದು, ಆ ಪ್ರದೇಶದಲ್ಲಿನ ಎಲ್ಲ ಕಾಡಾನೆಗಳನ್ನು ಹಿಡಿಯಲು ಕಾರ್ಯಾಚರಣೆ ಮುಂದುವರಿಸುವಂತೆ ಒತ್ತಾಯಿಸಿದ್ದಾರೆ.

ಮೂರು ದಿನಗಳ ಕಾರ್ಯಾಚರಣೆ ಬಳಿಕ ಮುಜೂರು ಮೀಸಲು ಅರಣ್ಯದ ಬಳಿ ಅರಣ್ಯಾಧಿಕಾರಿಗಳು ಕಾಡಾನೆಯನ್ನು ಸೆರೆಹಿಡಿದಿದ್ದರು. ಅಧಿಕಾರಿಗಳು ಕಾಡಾನೆಯನ್ನು ಸೆರೆಹಿಡಿದ ಸಂಭ್ರಮದಲ್ಲಿರುವಾಗ, ಗ್ರಾಮಸ್ಥರು ದೂರ ಉಳಿಯಲು ಮತ್ತು ಪ್ರದೇಶದಲ್ಲಿ ತೊಂದರೆ ಉಂಟುಮಾಡುತ್ತಿರುವ ಇತರ ಆನೆಗಳನ್ನು ಸಹ ಹಿಡಿಯುವಂತೆ ಒತ್ತಾಯಿಸಿದರು.

ಈ ವೇಳೆ ಎರಡೂ ಕಡೆಯವರ ನಡುವೆ ಮಾತಿನ ಚಕಮಕಿ ನಡೆದು, ಗ್ರಾಮಸ್ಥರು ಅಧಿಕಾರಿಗಳ ಮೇಲೆ ಕಲ್ಲು ತೂರಾಟ ನಡೆಸಿ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಎರಡು ಪೊಲೀಸ್ ವಾಹನಗಳು, ಅರಣ್ಯ ಇಲಾಖೆಗೆ ಸೇರಿದ ಒಂದು ಜೀಪ್ ಮತ್ತು ಅರಣ್ಯ ಅಧಿಕಾರಿ ವಾಹನಕ್ಕೆ ಹಾನಿಯಾಗಿದೆ.

ಇದೇ ವೇಳೆ ಬಂಧಿತ ಏಳು ಮಂದಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಅಧಿಕಾರಿಗಳು ಆನೆಗಳನ್ನು ಹಿಡಿಯುವ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದಾರೆ ಮತ್ತು ಮೇಲಧಿಕಾರಿಗಳ ನಿರ್ದೇಶನದ ನಂತರವೇ ಅದು ಪುನರಾರಂಭವಾಗುತ್ತದೆ ಎಂದು ಸಮರ್ಥಿಸಿಕೊಂಡಿದ್ದಾರೆ.

SCROLL FOR NEXT