ರಾಜ್ಯ

ಮನುಷ್ಯನ ಜೀವ ಉಳಿಸಬಲ್ಲ ಸಿಪಿಆರ್ ಚಿಕಿತ್ಸೆ ಬಗ್ಗೆ ಮಕ್ಕಳು, ವಯಸ್ಕರಿಗೆ ತರಬೇತಿ ನೀಡಬೇಕು: ವೈದ್ಯರು

Manjula VN

ಬೆಂಗಳೂರು: ಸಿಪಿಆರ್ (ಕಾರ್ಡಿಯೋ ಪಲ್ಮನರಿ ರಿಸಸಿಟೇಶನ್) ಚಿಕಿತ್ಸೆ ಯಾವ ರೀತಿ ನೀಡಬೇಕೆಂಬುದನ್ನು ಪ್ರತೀಯೊಬ್ಬರು ಕಲಿಯಬೇಕಿದ್ದು, ಇದು ವ್ಯಕ್ತಿಯ ಜೀವವನ್ನು ಉಳಿಸುವ ಪ್ರಮುಖ ಪ್ರಥಮ ಚಿಕಿತ್ಸಾ ಕ್ರಮವಾಗಿದೆ. ಈ ಚಿಕಿತ್ಸೆ ಬಗ್ಗೆ ಮಕ್ಕಳು ಹಾಗೂ ವಯಸ್ಕರಿಗೆ ತರಬೇತಿ ನೀಡುವುದನ್ನು ಕಡ್ಡಾಯ ಮಾಡಬೇಕು ಹಾಗೂ ಶಾಲಾ ಪಠ್ಯಕ್ರಮದ ಭಾಗವಾಗಿಸಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ.

ಇತ್ತೀಚೆಗಷ್ಟೇ ಬೆಂಗಳೂರಿನ ಐಕಿಯಾ ಮಳಿಗೆಯಲ್ಲಿ ವ್ಯಾಪಾರಿಯೊಬ್ಬರು ಹೃದಯಾಘಾತದಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಅದೃಷ್ಟವಶಾತ್, ಸಿಪಿಆರ್ ಮಾಡಲು ತರಬೇತಿ ಪಡೆದ ಮೂಳೆ ಶಸ್ತ್ರಚಿಕಿತ್ಸಕ ಕೂಡ ಅಂಗಡಿಯಲ್ಲಿದ್ದರಿಂದ, ವೈದ್ಯರು ಸಿಪಿಆರ್ ಚಿಕಿತ್ಸೆ ನೀಡಿ ಜೀವ ಉಳಿಸುವ ಕೆಲಸ ಮಾಡಿದ್ದರು. ಈ ಘಟನೆ ಬಳಿಕ ಸಿಪಿಆರ್ ಅತ್ಯಗತ್ಯತೆಯ ಮೇಲೆ ಬೆಳಕು ಚೆಲ್ಲಿದಂತಾಗಿದೆ.

ಜೀವನಶೈಲಿಯಲ್ಲಿನ ಬದಲಾವಣೆ ಮತ್ತು ಕಳಪೆ ಆಹಾರ ಪದ್ಧತಿಯಿಂದ ಜನರು ಹೃದಯ ಸಂಬಂಧಿ ಸಮಸ್ಯೆಗಳಿಗೆ ಹೆಚ್ಚು ಒಳಗಾಗುತ್ತಿದ್ದಾರೆ ಎಂದು ಆರೋಗ್ಯ ತಜ್ಞರು ವಿವರಿಸಿದ್ದಾರೆ.

ಹೃದಯರಕ್ತನಾಳದ ಕಾಯಿಲೆಗಳು ಈಗ ಭಾರತದಲ್ಲಿ ಸಾವಿಗೆ ಪ್ರಮುಖ ಕಾರಣವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಮುನ್ನೆಚ್ಚರಿಕೆ ಕ್ರಮವಾಗಿ, ನಾಗರಿಕರೂ ಕೂಡ ಸಿಪಿಆರ್ ತರಬೇತಿಯನ್ನು ಪಡೆದುಕೊಳ್ಳಬೇಕು. ಇದನ್ನು ಶಾಲಾ ಪಠ್ಯಕ್ರಮದ ಭಾಗವಾಗಿಸಬೇಕೆಂದು ತಿಳಿಸಿದ್ದಾರೆ.

ವಯಸ್ಕರಷ್ಟೇ ಅಲ್ಲದೆ, ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ಸಿಪಿಆರ್ ನಿರ್ವಹಿಸಲು ಮಕ್ಕಳಿಗೂ ತರಬೇತಿ ನೀಡಬೇಕು. 'ಗೋಲ್ಡನ್ ಅವರ್' ಸಮಯದಲ್ಲಿ ಸಿಪಿಆರ್ ಅತ್ಯಂತ ಮಹತ್ವದ್ದಾಗಿದೆ ಎಂದು ಕೆಲವು ವೈದ್ಯರು ವಿವರಿಸಿದ್ದಾರೆ.

ಒಬ್ಬ ವ್ಯಕ್ತಿಯು ಹೃದಯಾಘಾತದಿಂದ ಅಥವಾ ಹೃದಯ ಸ್ತಂಭನದಿಂದ ಬಳಲುತ್ತಿದ್ದರೆ, ಆರಂಭಿಕ 90 ನಿಮಿಷಗಳು ಅತ್ಯಂತ ನಿರ್ಣಾಯಕವಾಗಿರುತ್ತದೆ. ಈ ಸಮಯದಲ್ಲಿ ಪ್ರಥಮ ಚಿಕಿತ್ಸೆ ನೀಡಿದರೆ, ವ್ಯಕ್ತಿಯನ್ನು ಉಳಿಸುವ ಸಂಭವನೀಯತೆ ಹೆಚ್ಚಾಗುತ್ತದೆ ಎಂದಿದ್ದಾರೆ.

SCROLL FOR NEXT