ರಾಜ್ಯ

ಶ್ರೀಗಂಧದ ಮರಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದು: ಶೀಘ್ರದಲ್ಲೇ ಸಿಸಿಟಿವಿ, ಭದ್ರತಾ ಸಿಬ್ಬಂದಿ ನಿಯೋಜನೆ!

Manjula VN

ಬೆಂಗಳೂರು: ರಾಜ್ಯದಲ್ಲಿನ ಶ್ರೀಗಂಧದ ಮರಗಳ ರಕ್ಷಣೆಗೆ ಸರ್ಕಾರ ಮುಂದಾಗಿದ್ದು, ಈ ಮರಗಳ ಮೇಲೆ ಕಣ್ಗಾವಲಿಡಲು ಸಿಸಿಟಿವಿ ಅಳವಡಿಕೆ ಹಾಗೂ ಭದ್ರತಾ ಸಿಬ್ಬಂದಿಗಳ ನಿಯೋಜನೆಗೆ ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಮರಗಳ ಸಂಖ್ಯೆಯನ್ನು ಹೆಚ್ಚಿಸಲು ಹಾಗೂ ಕಳ್ಳರಿಂದ ಮರಗಳ ರಕ್ಷಿಸಲು ಹಲವು ಕ್ರಮಗಳ ಕೈಗೊಳ್ಳಲು ಸರ್ಕಾರ ಮುಂದಾಗಿದೆ.

100 ಹೆಕ್ಟೇರ್ ಪ್ರದೇಶಗಳಲ್ಲಿ ಬೆಳೆಯುವ ಶ್ರೀಗಂಧದ ಮರಗಳಿಗೆ ರಕ್ಷಣೆ ಒದಗಿಸಲಾಗುತ್ತದೆ. ಈ ಪ್ರದೇಶಗಳು ಶೂನ್ಯ ಸಹಿಷ್ಣು ವಲಯಗಳಾಗಿ ಮಾರ್ಪಡಿಸಲಾಗುತ್ತದೆ. ವಿಶೇಷ ಭದ್ರತೆ, ಶ್ವಾನದಳ ಮತ್ತು ಸಿಸಿಟಿವಿಗಳೊಂದಿಗೆ 24 ಗಂಟೆಗಳ ಕಾಲ ಈ ಪ್ರದೇಶಗಳಲ್ಲಿ ಕಾವಲು ಕಾಯಲಾಗುತ್ತದೆ. ಕೇರಳದ ಮರಯೂರಿನಲ್ಲಿರುವ ಶ್ರೀಗಂಧದ ಮರಗಳಿಗೆ ಅಂತಹ ರಕ್ಷಣೆ ನೀಡಲಾಗಿದೆ. ಇದೇ ರೀತಿಯ ರಕ್ಷಣೆಯನ್ನು ಇಲ್ಲಿಯ ಮರಗಳಿಗೂ ನೀಡುವ ಕುರಿತು ಚಿಂತನೆಗಳು ನಡೆದಿವೆ ಎಂದು ಹಿರಿಯ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಹೊಸ ನಿಯಮಗಳ ಪ್ರಕಾರ ಇಂತಹ ಪ್ರಕರಣಗಳಲ್ಲಿ ಸಿಕ್ಕಿ ಬಿದ್ದವರು, ತಪ್ಪಿತಸ್ಥರಿಗೆ 7-10 ವರ್ಷಗಳ ಕಠಿಣ ಜೈಲು ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ಪ್ರತಿ ಮರ ಮತ್ತು ಕ್ಲಸ್ಟರ್ ಅನ್ನು ಜಿಪಿಎಸ್ ಮೂಲಕ ಟ್ರ್ಯಾಕ್ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ರಾಜ್ಯದ ಮರ ಶ್ರೀಗಂಧದ ಮರವಾಗಿದೆ. ಆದರೆ, ಹಲವಾರು ಕಾರಣಗಳಿಂದ ಸಂಖ್ಯೆಯು ಕ್ಷೀಣಿಸುತ್ತಿದೆ. ಮರಗಳ ಕಡಿಯಲು ಅನುಮತಿ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಮರಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಶ್ರೀಗಂಧವನ್ನು ರಾಜ್ಯ ವೃಕ್ಷವೆಂದು ಘೋಷಿಸಿದ್ದರೂ ಮರಗಳನ್ನು ಕಾಪಾಡುವುದು ಮತ್ತು ರಕ್ಷಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದೀಗ ರಾಜ್ಯ ಸರ್ಕಾರ ಕ್ಲಸ್ಟರ್ ಗುರುತಿಸುವಿಕೆ ಮತ್ತು ರಕ್ಷಣೆ ಮಾಡಲು ಮುಂದಾಗಿರುವುದರಿಂದ ಮರಗಳ ಸಂಖ್ಯೆ ಹೆಚ್ಚಾಗವ ಸಾಧ್ಯತೆಗಳಿವೆ ಎಂದಿದ್ದಾರೆ.

ಇಲ್ಲಿಯವರೆಗೆ, ಅಂತಹ 20-30 ಬ್ಲಾಕ್ಗಳನ್ನು ಗುರುತಿಸಲಾಗಿದೆ. ಈ ಮರಗಳು ಸುಮಾರು 30 ವರ್ಷಗಳಷ್ಟು ಹಳೆಯವುಗಳಾಗಿವೆ. ಕೆಲವು 45 ಸೆಂ.ಮೀ ಸುತ್ತಳತೆ ಹೊಂದಿರುತ್ತವೆ. ರಾಜ್ಯ ಅರಣ್ಯ ಇಲಾಖೆಯ ಅಂಕಿಅಂಶಗಳ ಪ್ರಕಾರ, ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಎರಡು ಮರಗಳಿವೆ. ಕ್ಲಸ್ಟರ್ ಘೋಷಿಸಲು, ಕೇವಲ ವಿಸ್ತೀರ್ಣ ಮಾತ್ರವಲ್ಲದೆ ಮರಗಳ ಸಂಖ್ಯೆಯನ್ನು ಕೂಡ ಪರಿಗಣಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

SCROLL FOR NEXT