ಶಿವಮೊಗ್ಗ: ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದು, ಮೂವರು ಶಂಕಿತ ಉಗ್ರರ ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆಂದು ಬುಧವಾರ ತಿಳಿದುಬಂದಿದೆ.
5 ಕಾರುಗಳಲ್ಲಿ ಬಂದಿರುವ ಸುಮಾರು 15ಕ್ಕೂ ಹೆಚ್ಚು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮೂವರು ಶಂಕಿತ ಉಗ್ರರ ಮನೆಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.
ಮಾಜ್ ಮುನೀರ್, ಶಾರೀಕ್ ಮನೆ ಸೇರಿದಂತೆ ಅಕ್ಕಪಕ್ಕದ ಮನೆಗಳಿಗೂ ತೆರಳಿ ಮಾಹಿತಿ ಸಂಗ್ರಹಿಸುತ್ತಿದ್ದಾರೆಂದು ತಿಳಿದುಬಂದಿದೆ.
ಈ ನಡುವೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪ್ರತಿಕ್ರಿಯೆ ನೀಡಿ, ತೀರ್ಥಹಳ್ಳಿ (ಶಿವಮೊಗ್ಗ)ಯಲ್ಲಿ ಶಂಕಿತ ಭಯೋತ್ಪಾದಕರಾದ ಶಾರೀಕ್, ಮಾಜ್ ಮುನೀರ್ ಮತ್ತು ಮತೀನ್ ಅವರ ಮನೆಗಳು ಇರುವ ಪ್ರದೇಶಕ್ಕೆ ಇಡಿ ಅಧಿಕಾರಿಗಳು ಭೇಟಿ ನೀಡುತ್ತಿದ್ದು, ಅವರ ಮನೆಗಳನ್ನು ಶೋಧಿಸಲಾಗುತ್ತಿದೆ. ಅಕ್ಕಪಕ್ಕದ ಮನೆಗಳಿಗೂ ತೆರಳಿ ಮಾಹಿತಿ ಸಂಗ್ರಹಿಸುತ್ತಿದ್ದಾರೆಂದು ಹೇಳಿದ್ದಾರೆ.
ಇದನ್ನೂ ಓದಿ: ಮಂಗಳೂರು ಸ್ಫೋಟ ಪ್ರಕರಣ: 'ಜಂಗಲ್ ಸರ್ವೈವಲ್' ಶಿಬಿರದಲ್ಲಿ ತರಬೇತಿ ಪಡೆದಿದ್ದ ಶಾರೀಕ್ ಹಾಗೂ ಆತನ ಸಹಚರರು!
ಪ್ರತಿ ಮನೆಗೂ ತೆರಳಿರುವ ಅಧಿಕಾರಿಗಳ ತಂಡ, ಮೊಬೈಲ್ ಸ್ವಿಚ್ ಆಫ್ ಮಾಡುವಂತೆ ಹೇಳಿದ್ದಲ್ಲದೆ ಯಾರೂ ಫೋಟೋ ತೆಗೆಯದಂತೆ ಸೂಚನೆ ನೀಡಿದ್ದಾರೆ.
ಶಸ್ತ್ರ ಸಜ್ಜಿತ ಪೊಲೀಸರನ್ನು ತಮ್ಮೊಂದಿಗೆ ಕರೆತಂದಿರುವ ಇಡಿ ಅಧಿಕಾರಿಗಳು, ಶಂಕಿತ ಉಗ್ರರಿಗೆ ಹಣಕಾಸಿನ ಮೂಲವೇನು ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಶಂಕಿತರ ಮನೆಯವರು, ಅಕ್ಕಪಕ್ಕದವರ ಹಣಕಾಸು ವ್ಯವಹಾರಗಳನ್ನೂ ಪರಿಶೀಲನೆ ನಡೆಸುತ್ತಾರೆಂದು ವರದಿಗಳು ತಿಳಿಸಿವೆ.
ಮಂಗಳೂರು ಕುಕ್ಕರ್ ಸ್ಫೋಟ ಪ್ರಕರಣದಲ್ಲಿ ಪ್ರಧಾನ ಆರೋಪಿಯಾಗಿರುವ ಮೊಹಮ್ಮದ್ ಶಾರೀಕ್, ಈಗಾಗಲೇ ಅಂತಾರಾಷ್ಟ್ರೀಯ ಜಾಲದಲ್ಲಿ ಗುರುತಿಸಿಕೊಂಡಿರುವ ಮತೀನ್ ಖಾನ್ ಮತ್ತು ಮಂಗಳೂರಿನಲ್ಲಿದ್ದು ಗೋಡೆ ಬರಹ ಮತ್ತು ಟ್ರಯಲ್ ಬ್ಲಾಸ್ಟ್ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿನಲ್ಲಿರುವ ಮಾಜ್ ಮುನೀರ್ ಇವರೆಲ್ಲರೂ ಶಿವಮೊಗ್ಗ ತೀರ್ಥಹಳ್ಳಿಯ ಸೊಪ್ಪಿನ ಗುಡ್ಡೆ ನಿವಾಸಿಗಳಾಗಿದ್ದಾರೆ.