ಧಾರವಾಡ: ಅಮೃತ್ ಕ್ರೀಡಾ ಯೋಜನೆಯಡಿ ಸುಮಾರು 75 ಕ್ರೀಡಾಪಟುಗಳಿಗೆ ಒಲಿಂಪಿಕ್ಸ್ನಂತಹ ಅಂತರರಾಷ್ಟ್ರೀಯ ಕ್ರೀಡಾಕೂಟಗಳಿಗೆ ತರಬೇತಿ ನೀಡಿದ ಮೊದಲ ರಾಜ್ಯ ಕರ್ನಾಟಕವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ಹೇಳಿದರು.
26ನೇ ರಾಷ್ಟ್ರೀಯ ಯುವಜನೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕ್ರೀಡೆಯಲ್ಲಿ ಯುವಕರನ್ನು ಪ್ರೋತ್ಸಾಹಿಸುವುದರ ಜೊತೆಗೆ ಆರ್ಥಿಕ ನೆರವು ನೀಡಲು ಹಾಗೂ ಮಾರುಕಟ್ಟೆ ನಡೆಸಲು ರಾಜ್ಯ ಸರ್ಕಾರ ಸ್ವಾಮಿ ವಿವೇಕಾನಂದ ಯುವಶಕ್ತಿ ಸಂಘವನ್ನು ರೂಪಿಸಿದ್ದು, ಇದರಿಂದ 5 ಲಕ್ಷ ಯುವಕರಿಗೆ ಸ್ವಯಂ ಉದ್ಯೋಗ ದೊರೆಯಲಿದೆ ಎಂದು ಹೇಳಿದರು.
ಇದೇ ವೇಳೆ ಸಾಧನೆಯಲ್ಲಿ ಎತ್ತರಕ್ಕೆ ಯಾವ ರೀತಿ ಹೋಗಬಹುದು ಎಂಬುದಕ್ಕೆ ಕೆಲವು ಕಥೆಗಳನ್ನು ಯುವಕರೊಂದಿಗೆ ಹಂಚಿಕೊಂಡರು.
ಇದನ್ನೂ ಓದಿ: ಯುವಜನತೆಗೆ ಸರ್ಕಾರ ಆದ್ಯತೆ; ಕನ್ನಡದಲ್ಲಿ ಶಬ್ದ ಕಲಿತು ಸಂದೇಶ ನೀಡಬೇಕು: ಯುವಜನೋತ್ಸವ ಸಮಾರೋಪದಲ್ಲಿ ಸಿಎಂ ಬೊಮ್ಮಾಯಿ ಸಲಹೆ
ರಾಷ್ಟ್ರೀಯ ಯುವ ಉತ್ಸವದಂತಹ ಕಾರ್ಯಕ್ರಮಗಳು ಒಗ್ಗಟ್ಟಿನ ಪರಿಕಲ್ಪನೆಯೊಂದಿಗೆ ದೊಡ್ಡದನ್ನು ಸಾಧಿಸುವ ಗುರಿಯನ್ನು ಹೊಂದಿವೆ. ಯುವಕರು ತಮ್ಮ ಅಭಿಪ್ರಾಯಗಳನ್ನು ಮತ್ತು ಆಲೋಚನೆಗಳನ್ನು ಹಂಚಿಕೊಳ್ಳಲು ಇಂತಹ ಬೃಹತ್ ವೇದಿಕೆಯನ್ನು ಒದಗಿಸುವ ಯಾವುದೇ ಕಾರ್ಯಕ್ರಮವಿಲ್ಲ ಎಂದು ತಿಳಿಸಿದರು.
ಕೇಂದ್ರ ಯುವ ವ್ಯವಹಾರಗಳು, ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರು ಮಾತನಾಡಿ, ಯುವಜನೋತ್ಸವವು ವಿವಿಧ ಭಾಗಗಳ ಜನರನ್ನು ಒಟ್ಟಿಗೆ ಸೇರಿಸುತ್ತದೆ. ಯುವಜನರನ್ನು ಪ್ರೇರೇಪಿಸುವ ಪ್ರಯತ್ನದಲ್ಲಿ, ಮುಂಬರುವ ಜಿ20 ಶೃಂಗಸಭೆಯಲ್ಲಿ, ಯುವಜನರ ಆಲೋಚನೆಗಳು ಮತ್ತು ಚಿಂತನೆಗಳನ್ನು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪ್ರಸ್ತುತಪಡಿಸುವ ಯೂತ್-20 ಕುರಿತು ಶೀಘ್ರದಲ್ಲಿಯೇ ಅಧಿವೇಶನ ನಡೆಸಲಾಗುತ್ತದೆ. ಬಹುಪಾಲು ಯುವಕರನ್ನು ಹೇಗೆ ತಲುಪಬೇಕು ಎಂಬುದರ ಕುರಿತು ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ಹೇಳಿದರು.
ಈ ಹಿಂದೆ ಯುವ ದಿವಸವನ್ನು ಒಂದು ದಿನದ ಮಟ್ಟಿಗೆ ಆಚರಿಸಲಾಗುತ್ತಿತ್ತು, ಆದರೆ ಪ್ರಧಾನಿ ಮೋದಿ ಇದನ್ನು ಐದು ದಿನಗಳವರೆಗೆ ವಿಸ್ತರಿಸಲು ನಿರ್ಧರಿಸಿದ್ದಾರೆ ಎಂದು ತಿಳಿಸಿದರು.