ರಾಜ್ಯ

ಬೆಂಗಳೂರು: ದರೋಡೆ ಮಾಡಿದ್ದ ಇಬ್ಬರ ಬಂಧನ, 57 ಲಕ್ಷ ರೂ. ಮೌಲ್ಯದ ಸ್ಮಾರ್ಟ್‌ವಾಚ್‌ಗಳ ವಶ

Ramyashree GN

ಬೆಂಗಳೂರು: ಕೊರಿಯರ್ ಏಜೆನ್ಸಿಯೊಂದರ ಸಿಬ್ಬಂದಿ ಮೇಲೆ ದಾಳಿ ನಡೆಸಿ ದರೋಡೆ ಮಾಡಿದ್ದ ಇಬ್ಬರನ್ನು ಪಶ್ಚಿಮ ವಿಭಾಗದ ಪೊಲೀಸರು ಬಂಧಿಸಿದ್ದು, ಇಬ್ಬರಿಂದ ಸುಮಾರು 57 ಲಕ್ಷ ರೂ.  ಮೌಲ್ಯದ 1,283 ಟೈಟಾನ್ ಸ್ಮಾರ್ಟ್ ವಾಚ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಕಾರು ಮತ್ತು ಮೂರು ಬೈಕ್‌ಗಳಲ್ಲಿ ಬರುತ್ತಿದ್ದ ದುಷ್ಕರ್ಮಿಗಳ ಬೈಕ್‌ವೊಂದಕ್ಕೆ ಟೆಂಪೋ ಟಚ್ ಆಗಿತ್ತು.  ಇದರಿಂದ ಅಸಮಾನಧಾನಗೊಂಡ ಆರೋಪಿಗಳು ಜಗಳ ಆರಂಭಿಸಿದ್ದರು. ಸ್ಮಾರ್ಟ್‌ವಾಚ್‌ಗಳನ್ನು ತುಂಬಿದ್ದ ವಾಹನವನ್ನು ಹಿಂಬಾಲಿಸಿ ಆರ್.ಆರ್. ನಗರದ ಜವರೇಗೌಡನ ದೊಡ್ಡಿ ರಸ್ತೆಯ ಮಹಾರಾಜ ಬಾರ್ ಬಳಿ ತಡೆದಿದ್ದಾರೆ. ಟೆಂಪೋದಲ್ಲಿದ್ದ ಸಿಬ್ಬಂದಿ ಮೇಲೆ ಹಲ್ಲೆ ನಡೆಸ, ವಾಚ್ ತುಂಬಿದ್ದ ವಾಹನದೊಂದಿಗೆ ಪರಾರಿಯಾಗಿದ್ದರು.

ಈ ಬಗ್ಗೆ ಕೊರಿಯರ್ ಏಜೆನ್ಸಿಯ ಮ್ಯಾನೇಜರ್ ಆರ್ ಆರ್ ನಗರ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿಗಳಾದ ಜಮೀರ್ ಅಹ್ಮದ್ ಅಲಿಯಾಸ್ ಜಮೀರ್ (28) ಮತ್ತು ಸೈಯದ್ ಶಾಹಿದ್ ಅಲಿಯಾಸ್ ಶಾಹಿದ್ (26) 23 ಬಾಕ್ಸ್‌ಗಳಲ್ಲಿ ತುಂಬಿದ್ದ ವಾಚ್‌ಗಳನ್ನು ತೆಗೆದುಕೊಂಡು ಪರಾರಿಯಾಗಿದ್ದರು. ಅವರ ಸಹಾಯಕರು ತಲೆಮರೆಸಿಕೊಂಡಿದ್ದಾರೆ. ಜನವರಿ 15 ರಂದು ಈ ಘಟನೆ ನಡೆದಿದೆ. ಸಂತ್ರಸ್ತರನ್ನು ಜಾನ್ (22) ಮತ್ತು ಬಿಸಲ್ ಕಿಸಾನ್ (21) ಎಂದು ಗುರುತಿಸಲಾಗಿದೆ. ಇವರಿಬ್ಬರು ಆರ್‌ಆರ್ ನಗರದ ಜೈದೀಪ್ ಎಂಟರ್‌ಪ್ರೈಸಸ್ ಕೊರಿಯರ್ ಏಜೆನ್ಸಿಯ ಉದ್ಯೋಗಿಗಳು.

ಕೋಲಾರ ಜಿಲ್ಲೆಯ ಮಾಲೂರಿನಲ್ಲಿರುವ ಇ-ಕಾಮರ್ಸ್ ಕಂಪನಿಯ ಗೋದಾಮಿನಿಂದ ವಾಚ್‌ಗಳು ಬಂದಿದ್ದವು. ಕೊರಿಯರ್ ಏಜೆನ್ಸಿಯು ವಾಚ್‌ಗಳನ್ನು ನಗರದ ಗ್ರಾಹಕರಿಗೆ ತಲುಪಿಸಬೇಕಾಗಿತ್ತು. ವಾಹನದಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಾಚ್​ಗಳನ್ನು ತೆಗೆದುಕೊಂಡು ಬೇರೆಡೆ ಸಾಗಾಟ ಮಾಡಿದ್ದರು. ಬಳಿಕ ಟೆಂಪೋವನ್ನು ಅದೇ ಜಾಗದಲ್ಲಿ ಬಿಟ್ಟು ತಲೆಮರೆಸಿಕೊಂಡಿದ್ದರು. 

ಆರ್‌ಆರ್ ನಗರ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳನ್ಯನು ಬಂಧಿಸಿ ವಾಚ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

SCROLL FOR NEXT