ರಾಜ್ಯ

ನಮ್ಮ ಬೇಡಿಕೆಗಳ ಈಡೇರಿಸಿ ಇಲ್ಲವೇ ಅನಿರ್ದಿಷ್ಟಾವಧಿ ಧರಣಿ ಎದುರಿಸಿ: ರಾಜ್ಯ ಸರ್ಕಾರಕ್ಕೆ ಸಾರಿಗೆ ಸಿಬ್ಬಂದಿಗಳ ಎಚ್ಚರಿಕೆ

Manjula VN

ಬೆಂಗಳೂರು: ಸಾರಿಗೆ ನಿಗಮಗಳ ನೌಕರರು ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು, ಬೇಡಿಕೆಗಳು ಈಡೇರದೇ ಹೋದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ), ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯುಕೆಆರ್‌ಟಿಸಿ) ಮತ್ತು ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಕೆಎಸ್‌ಆರ್‌ಟಿಸಿ) ನೂರಾರು ಸಾರಿಗೆ ನೌಕರರು ಮಂಗಳವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದರು.

ಎಐಟಿಯುಸಿ ಸಂಯೋಜಿತ ಕೆಎಸ್‌ಆರ್‌ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಶನ್, ಇತರ ಐದು ಸಾರಿಗೆ ಒಕ್ಕೂಟಗಳು ಜಂಟಿ ಕ್ರಿಯಾ ಸಮಿತಿಯಡಿ ಪ್ರತಿಭಟನೆಯ ನೇತೃತ್ವ ವಹಿಸಿ 16 ಬೇಡಿಕೆಗಳ ಪಟ್ಟಿಯೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿತು.

ಕೆಎಸ್‌ಆರ್‌ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಶನ್ ಅಧ್ಯಕ್ಷ ಎಚ್ ವಿ ಅನಂತ ಸುಬ್ಬರಾವ್ ಮಾತನಾಡಿ, ಕೋವಿಡ್ ಸಾಂಕ್ರಾಮಿಕ ರೋಗ ಮತ್ತು ನಗದು ಕೊರತೆಯನ್ನು ಉಲ್ಲೇಖಿಸಿ 2020 ರಲ್ಲಿ ಜಾರಿಗೆ ಬರಬೇಕಿದ್ದ ಕೊನೆಯ ವೇತನ ಪರಿಷ್ಕರಣೆ ಈವರೆಗೂ ಈಡೇರಿಲ್ಲ. ಬೆಲೆ ಏರಿಕೆಯಿಂದಾಗಿ ಸಾರಿಗೆ ನೌಕರರು ಯೋಗ್ಯ ಜೀವನ ನಡೆಸಲು ಹೆಣಗಾಡುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸಾರಿಗೆ ನೌಕರರ ಪ್ರಮುಖ ಬೇಡಿಕೆಗಳೆಂದರೆ:

  • ಎಲ್ಲಾ ವರ್ಗಗಳಿಗೆ ಮೂಲ ವೇತನವನ್ನು ಶೇಕಡಾ 25 ರಷ್ಟು ಹೆಚ್ಚಿಸುವುದು,
  • 2021 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ವಜಾಗೊಂಡ ನೌಕರರನ್ನು ಮರುಸೇರ್ಪಡೆಗೊಳಿಸುವುದು,
  • ನೌಕರರ ವಿರುದ್ಧದ ಎಫ್‌ಐಆರ್ ಹಿಂಪಡೆಯುವುದು,
  • ಪಾಳಿ ವ್ಯವಸ್ಥೆಯೊಂದಿಗೆ ಕೆಲಸದ ಸಮಯವನ್ನು ಎಂಟು ಗಂಟೆಗೆ ಇಳಿಸುವುದು,
  • ಉಚಿತ ವೈದ್ಯಕೀಯ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿನ ಉದ್ಯೋಗಿಗಳಿಗೆ ಚಿಕಿತ್ಸೆ,
  • ಮಹಿಳೆಯರಿಗೆ ಕೆಲಸದ ಸ್ಥಿತಿಯನ್ನು ಸುಧಾರಿಸುವುದು.
  • ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಕಾತಿಯನ್ನು ನಿಲ್ಲಿಸುವುದು.
SCROLL FOR NEXT