ರಾಜ್ಯ

28ರಿಂದ 8ಕ್ಕೆ ಇಳಿದ ಸಚಿವರ ಪಟ್ಟಿ: ಸಿದ್ದು ವಿರುದ್ಧ ಮಂತ್ರಿಗಿರಿ ವಂಚಿತರ ಅಸಮಾಧಾನ, ಪ್ರಮಾಣವಚನ ಸಮಾರಂಭದಲ್ಲಿ ಗೈರಾದ ಹಲವು ನಾಯಕರು!

Manjula VN

ಬೆಂಗಳೂರು: ನೂತನ ಸಚಿವ ಸಂಪುಟಕ್ಕೆ ಯಾವ ಯಾವ ನಾಯಕರನ್ನು ಸೇರ್ಪಡೆ ಮಾಡಬೇಕು ಎಂಬುದನ್ನು ನಿರ್ಧರಿಸಲು ಶನಿವಾರ ಬೆಳಗಿನ ಜಾವದವರೆಗೂ ತೀವ್ರ ಚರ್ಚೆಗಳು ನಡೆಸಿದರೂ ಜಾತಿ ಹಾಗೂ ಪ್ರಾದೇಶಿಕ ಸಮೀಕರಣ ರೂಪಿಸುವ ಪ್ರಕ್ರಿಯೆ ಅಪೂರ್ಣಗೊಂಡ ಹಿನ್ನೆಲೆಯಲ್ಲಿ 28 ಮಂದಿಯ ಬದಲಾಗಿ ಕೇಲವ 8 ಮಂದಿ ಹಿರಿಯರನ್ನು ಮಾತ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟಕ್ಕೆ ಸೇರ್ಪಡೆಗೊಳಿಸಲಾಯಿತು.

ದೆಹಲಿಯಲ್ಲಿ ಶುಕ್ರವಾರ ದಿನವಿಡೀ ಹಾಗೂ ಶನಿವಾರ ಬೆಳಗಿನ ಜಾವ ಮೂರರವರೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ,ಕೆ.ಶಿವಕುಮಾರ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಸರಣಿ ಸಬೆ ನಡೆಸಿದರೂ ಜಾತಿ ಸಮೀಕರಣ ಹಾಗೂ ಪ್ರಾದೇಶಿಕ ಲೆಕ್ಕಚಾರವನ್ನು ಸಮಪರ್ಕವಾಗಿ ಮಾಡಲು ಸಾಧ್ಯವಾಗಲಿಲ್ಲ.

ಗ್ಯಾರಂಟಿಗಳ ಬಲದ ಮೇಲೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಆದರೆ, ಸಂಪುಟ ರಚನೆಯ ವಿಚಾರದಲ್ಲಿ ಸರ್ಕಾರದ ವಿರುದ್ಧ ಅಸಮಾಧಾನಗಳು ವ್ಯಕ್ತವಾಗುವ ಸಾಧ್ಯತೆಗಳು ಹೆಚ್ಚಾಗಿವೆ.

ಸಂಪುಟ ರಚನೆ ವಿಚಾರದಲ್ಲಿ ಈಗಾಗಲೇ ಸಿದ್ದರಾಮಯ್ಯ ಅವರ ವಿರುದ್ಧ ಅಸಮಾಧಾನಗಳು ಆರಂಭವಾಗುತ್ತಿವೆ. ಈ ಅಸಮಾಧಾನ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿಯೇ ಕಾಣಿಸತೊಡಗಿತ್ತು. ಹಲವು ನಾಯಕರು ಸಮಾರಂಭಕ್ಕೆ ಗೈರು ಹಾಜರಾಗಿರುವುದು ಕಂಡು ಬಂದಿತ್ತು.

ಸಿದ್ದರಾಮಯ್ಯ ಕ್ಯಾಂಪ್​​ನಲ್ಲಿ ಗುರುತಿಸಿಕೊಂಡಿದ್ದ ಮಾಜಿ ಸಚಿವ ದಿನೇಶ್ ಗುಂಡೂರಾವ್, ಬಸವರಾಜ ರಾಯರೆಡ್ಡಿ, ಸಂತೋಷ್ ಲಾಡ್, ಶಿವರಾಜ್ ತಂಗಡಗಿ ಕಾರ್ಯಕ್ರಮದಲ್ಲಿ ಎಲ್ಲಿಯೂ ಕಾಣಲಿಲ್ಲ.

ಇನ್ನು ಸಿದ್ದು ಆಪ್ತರಾದ ಕೆ.ಎನ್ ರಾಜಣ್ಣ, ಸಿದ್ದು ಶಿಷ್ಯ ಭೈರತಿ ಸುರೇಶ್, ರಾಘವೇಂದ್ರ ಹಿಟ್ನಾಳ್, ತುಕಾರಾಮ್, ರಿಜ್ವಾನ್ ಅರ್ಷದ್ ಸೇರಿ ಹಲವು ಶಾಸಕರು ಕಾರ್ಯಕ್ರಮ ವೇದಿಕೆಯಲ್ಲಿ ಕಂಡು ಬರಲಿಲ್ಲ. ಸಂಪುಟದಲ್ಲಿ ಸ್ಥಾನ ಸಿಗದ ಹಿನ್ನೆಲೆ ಬೇಸರಗೊಂಡ ಮಧು ಬಂಗಾರಪ್ಪ ಕೂಡ ಕಾರ್ಯಕ್ರಮದಿಂದ ದೂರ ಉಳಿದಿರುವುದು ಕಂಡು ಬಂದಿತ್ತು.

ಈ ಮಧ್ಯೆ, ಸಚಿವ ಸಂಪುಟ ರಚನೆಯ ಎಲ್ಲ ಗೊಂದಲಗಳಿಗೂ ಕೆಲ ದಿನಗಳಲ್ಲೇ ತೆರೆ ಎಳೆಯಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ.

ಬುಧವಾರದ ಬಳಿಕ ಅಂದರೆ ಮೂರ ದಿನಗಳ ವಿಶೇಷ ಅಧಿವೇಶನದ ಬಳಿಕ ದೆಹಲಿಗೆ ಬರುವಂತೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿಗೆ ಹೈಕಮಾಂಡ್ ಬುಲಾವ್ ನೀಡಿದ್ದು, ಈ ಸಂದರ್ಭದಲ್ಲಿ ಸಂಪುಟ ರಚನೆ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ವರದಿಗಳಿಂದ ತಿಳಿದುಬಂದಿದೆ.

SCROLL FOR NEXT