ರಾಜ್ಯ

ರೈಲ್ವೆ ಹಳಿ ಪಕ್ಕ ನಕಲಿ 3 ಮಿಲಿಯನ್ ಡಾಲರ್ ಕರೆನ್ಸಿ ಪತ್ತೆ ಪ್ರಕರಣ: ಚಿಂದಿ ಆಯುವವನ ಮೇಲೆ ಹಲ್ಲೆ ಮಾಡಿ ಅಪಹರಣ

Sumana Upadhyaya

ಬೆಂಗಳೂರು: ನಕಲಿ ಎಂದು ಹೇಳಲಾದ 3 ಮಿಲಿಯನ್ ಡಾಲರ್ ಮೌಲ್ಯದ 23 ನೋಟುಗಳ ಕಟ್ಟುಗಳ ಪ್ಲಾಸ್ಟಿಕ್ ಚೀಲ, ವಿಶ್ವಸಂಸ್ಥೆಯ (United Nations) ಪತ್ರವು ಸ್ಕ್ರ್ಯಾಪ್ ಡೀಲರ್ ನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ದುಷ್ಕರ್ಮಿಗಳು ಆತನನ್ನು ಅಪಹರಿಸಿ ಅಮಾನುಷವಾಗಿ ಥಳಿಸಿ ರೈಲ್ವೆ ಹಳಿಯಲ್ಲಿ ಸಿಕ್ಕ ಹಣವನ್ನು ತಮಗೆ ನೀಡುವಂತೆ ಒತ್ತಡ ಹಾಕಿದರು. 

ನಡೆದ ಪ್ರಕರಣವೇನು?: ಕಳೆದ ಶುಕ್ರವಾರ, ಸ್ಕ್ರ್ಯಾಪ್ ಡೀಲರ್ ಬಪ್ಪಾ ಜೊತೆ ಚಿಂದಿ ಆಯುವವ ಸಲೇಮನ್, ನಾಗವಾರ ರೈಲ್ವೆ ಹಳಿಯಲ್ಲಿ ಚಿಂದಿ ಆಯುತ್ತಿದ್ದಾಗ 3 ಮಿಲಿಯನ್ ಡಾಲರ್ ನೋಟಿನ ಕಂತೆ ಸಿಕ್ಕಿತ್ತು. ಸಲೇಮಾನ್ ಬಪ್ಪನಿಗೆ ಹಣದ ಬಗ್ಗೆ ತಿಳಿಸಿದನು. ಬೇರೆ ಕಡೆ ಸಂಚಾರ ಮಾಡುತ್ತಿದ್ದ ಬಪ್ಪ ಹಣವನ್ನು ತನ್ನ ಬಳಿ ಇಟ್ಟುಕೊಳ್ಳುವಂತೆ ಸೂಚಿಸಿದನು. 

ಆದರೆ, ಸಲೇಮಾನ್ ಸಾಮಾಜಿಕ ಕಾರ್ಯಕರ್ತ ಕಲೀಮುಲ್ಲಾ ಸಂಪರ್ಕಿಸಿದನು, ಅವರು ಭಾನುವಾರ ಸಲೇಮಾನ್ ನನ್ನು ಪೊಲೀಸ್ ಕಮಿಷನರ್ ಬಳಿಗೆ ಕರೆದೊಯ್ದರು. ಅಲ್ಲಿ ಹಣವನ್ನು ಹಸ್ತಾಂತರಿಸಿದರು, ನಂತರ ಅದನ್ನು ಪರಿಶೀಲನೆಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಗೆ ಕಳುಹಿಸಲಾಯಿತು.

ಮಂಗಳವಾರ ತಡರಾತ್ರಿ ಆರೋಪಿಗಳು ಕೆಂಪಾಪುರ ಸಮೀಪದ ಚಿರಂಜೀವಿ ಲೇಔಟ್‌ನಲ್ಲಿರುವ ಬಪ್ಪ ಮನೆಗೆ ತೆರಳಿ ಹಣ ನೀಡುವಂತೆ ಒತ್ತಾಯಿಸಿ ಹಲ್ಲೆ ನಡೆಸಿದ್ದಾರೆ. ಶಬ್ಧವನ್ನು ಕೇಳಿದ ಇತರ ಚಿಂದಿ ಆಯುವವರು ಬಪ್ಪನನ್ನು ರಕ್ಷಿಸಲು ಬಂದರು ಆದರೆ ದುಷ್ಕರ್ಮಿಗಳು ಅವರಿಗೆ ಬೆದರಿಕೆ ಹಾಕಿ ಹತ್ತಿರಕ್ಕೆ ಬಾರದಂತೆ ಸೂಚಿಸಿದರು. 

ಚಿಂದಿ ಆಯುವವರು ಕಲೀಮುಲ್ಲಾ ಅವರನ್ನು ಎಚ್ಚರಿಸಿದರು. ಆರೋಪಿಗಳು ಹಣಕ್ಕಾಗಿ ಬಪ್ಪಾ ಅವರ ಮನೆಯನ್ನು ಶೋಧಿಸಿದ್ದಾರೆ ಎಂದು ಕಲೀಮುಲ್ಲಾ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು. ಹಣ ಸಿಗದಿದ್ದಾಗ, ಅವರು ಕಣ್ಣುಮುಚ್ಚಿ ಅಪರಿಚಿತ ಅಪಾರ್ಟ್ ಮೆಂಟ್ ಗೆ ಅವನನ್ನು ಅಪಹರಿಸಿದರು. ಅವರ ಫೋನ್ ಪರಿಶೀಲಿಸಿದ ನಂತರ, ಆರೋಪಿಗಳು ನಿನ್ನೆ ಬುಧವಾರ ಬೆಳಗ್ಗೆ 9:30 ರ ಸುಮಾರಿಗೆ ಮಾನ್ಯತಾ ಟೆಕ್ ಪಾರ್ಕ್ ಬಳಿ ಬಪ್ಪನನ್ನು ಬಿಡುಗಡೆ ಮಾಡಿದರು ಎಂದು ಕಲೀಮುಲ್ಲಾ ಇಡೀ ಪ್ರಕರಣ ಬಗ್ಗೆ ವಿವರಿಸುತ್ತಾರೆ.

ದುಷ್ಕರ್ಮಿಗಳು ಬಪ್ಪಾ ವಾಸಿಸುವ ಅದೇ ಪ್ರದೇಶದವರು ಎಂದು ಶಂಕಿಸಿರುವ ಕಲೀಮುಲ್ಲಾ ಅವರು ಸುದ್ದಿ ವರದಿಗಳ ಮೂಲಕ ಹಣದ ಬಗ್ಗೆ ತಿಳಿದುಕೊಳ್ಳಬಹುದು ಎಂದು ಹೇಳಿದರು. "ಪೊಲೀಸ್ ದೂರು ನೀಡಿದರೆ ದುಷ್ಕರ್ಮಿಗಳು ಬಪ್ಪನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಅವರು ಹೇಳಿದರು. ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರೂ ಯಾವುದೇ ದೂರು ದಾಖಲಾಗಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ.

SCROLL FOR NEXT