ರಾಜ್ಯ

ಭ್ರಷ್ಟಾಚಾರ ತಡೆಗಟ್ಟಲು ಕಂದಾಯ ಇಲಾಖೆಯಲ್ಲಿ ಕಾಗದರಹಿತ ಇ-ಫೈಲ್ ವ್ಯವಸ್ಥೆ ಜಾರಿಗೆ ತರಲು ಕ್ರಮ: ಕೃಷ್ಣ ಭೈರೇಗೌಡ

Sumana Upadhyaya

ಹುಬ್ಬಳ್ಳಿ: ಕಂದಾಯ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಒಪ್ಪಿಕೊಂಡಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, ಕಾಗದ ರಹಿತ ವ್ಯವಹಾರ ಮೂಲಕ ಭ್ರಷ್ಟಾಚಾರವನ್ನು ತೊಲಗಿಸುವ ಪ್ರಯತ್ನ ಮುಂದುವರಿದಿದೆ ಎಂದು ಹೇಳಿದ್ದಾರೆ. 

ಹಿಂದಿನ ಬಿಜೆಪಿ ಸರ್ಕಾರ ಇ-ಫೈಲ್ ಪರಿಕಲ್ಪನೆಯನ್ನು ಜಾರಿಗೆ ತರಲು ಸಾಕಷ್ಟು ಮುತುವರ್ಜಿ ವಹಿಸಿಲ್ಲ ಎಂದು ಹೇಳಿದ ಅವರು, ಸಾರ್ವಜನಿಕರಿಗೆ ತೊಂದರೆಯಿಲ್ಲದ ಸೇವೆಯನ್ನು ಖಾತ್ರಿಪಡಿಸಲು ಕಾಂಗ್ರೆಸ್ ಸರ್ಕಾರ ಇದನ್ನು ಜಾರಿಗೊಳಿಸುತ್ತದೆ ಎಂದು ಭರವಸೆ ನೀಡಿದರು. ಹೆಚ್ಚಿನ ಕಡತಗಳು ಆನ್‌ಲೈನ್‌ನಲ್ಲಿ ಕ್ಲಿಯರ್ ಆಗುತ್ತವೆ ಎಂದು ಕೂಡ ತಿಳಿಸಿದರು. 

ಪ್ರತಿ ಕಡತವನ್ನು ಆನ್‌ಲೈನ್‌ನಲ್ಲಿ ಬೆಂಗಳೂರಿಗೆ ಕಳುಹಿಸಲು ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು ಮತ್ತು ತಹಶೀಲ್ದಾರ್‌ಗಳಿಗೆ ಸೂಚಿಸಲಾಗಿದೆ. ಜನರು ಇನ್ನೂ ಸಾಕಷ್ಟು ಕುಂದುಕೊರತೆಗಳನ್ನು ಹೊಂದಿದ್ದಾರೆ ಎಂದರು. ವಿವಾದಿತ ಆಸ್ತಿಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಲೇವಾರಿ ವಿಳಂಬವಾಗಿದ್ದರೂ, ಸಕಾಲದಡಿ ಹೆಚ್ಚಿನ ಅರ್ಜಿಗಳನ್ನು ಪರಿಹರಿಸಲಾಗಿದೆ ಎಂದು ಸಚಿವರು ಹೇಳಿದರು. 

ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಸಂಬಂಧಿಸಿದಂತೆ ಸುಮಾರು 180 ಕಡತಗಳು ಬಾಕಿ ಉಳಿದಿದ್ದು, ಅವುಗಳಲ್ಲಿ ಹೆಚ್ಚಿನವು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡ ನಂತರ ವಿಲೇವಾರಿ ಮಾಡಲಾಗಿದೆ ಎಂದರು.

ಅಧಿಕಾರಿಗಳ ಕಾರ್ಯವೈಖರಿ ಆಧರಿಸಿ ಸನ್ಮಾನಿಸುವ ಯೋಜನೆ ಇದೆ ಎಂದರು. ಇದಕ್ಕೂ ಮುನ್ನ ಕಲಘಟಗಿ ತಾಲೂಕಿನ ದುಮ್ಮವಾಡ ಗ್ರಾಮ ಮತ್ತು ಹಿರೇಹೊನ್ನಳ್ಳಿ ಗ್ರಾಮದಲ್ಲಿರುವ ಉಪ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ಸಿಬ್ಬಂದಿ ಕಾರ್ಯವೈಖರಿ ಹಾಗೂ ಸಾರ್ವಜನಿಕ ಸೇವೆಗಳ ಪರಿಶೀಲನೆ ನಡೆಸಿದರು. ಹುಬ್ಬಳ್ಳಿ ತಹಶೀಲ್ದಾರ್ ಕಚೇರಿಗೆ ದಿಢೀರ್ ಭೇಟಿ ನೀಡಿದ ಅವರು, ವಿವಿಧ ವಿಭಾಗಗಳ ಕಾರ್ಯವೈಖರಿ ಕುರಿತು ಮಾಹಿತಿ ಸಂಗ್ರಹಿಸಿ ಇ-ಫೈಲ್ ವ್ಯವಸ್ಥೆ ಅಳವಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

SCROLL FOR NEXT