ಸೋಲದೇವನಹಳ್ಳಿ ಪಂಪಿಂಗ್ ಸ್ಟೇಷನ್ ಅನ್ನು ಪರಿಶೀಲಿಸಿದ BWSSB ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್.
ಸೋಲದೇವನಹಳ್ಳಿ ಪಂಪಿಂಗ್ ಸ್ಟೇಷನ್ ಅನ್ನು ಪರಿಶೀಲಿಸಿದ BWSSB ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್. 
ರಾಜ್ಯ

ಬೆಂಗಳೂರು: ಸೋಲದೇವನಹಳ್ಳಿ ಪಂಪಿಂಗ್ ಸ್ಟೇಷನ್ ಪುನಶ್ಚೇತನ, ನಗರಕ್ಕೆ ನೀರು ಪೂರೈಕೆಗೆ BWSSB ಮುಂದು

Ramyashree GN

ಬೆಂಗಳೂರು: ನಗರದಲ್ಲಿನ ನೀರಿನ ಕೊರತೆ ನೀಗಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ನೀರನ್ನು ಪಂಪ್ ಮಾಡಲು ಐತಿಹಾಸಿಕ ಸೋಲದೇವನಹಳ್ಳಿ ಪಂಪಿಂಗ್ ಸ್ಟೇಷನ್ ಅನ್ನು ಪುನರುಜ್ಜೀವನಗೊಳಿಸಲು ಸಿದ್ಧವಾಗಿದೆ.

ಸೋಲದೇವನಹಳ್ಳಿ ಪಂಪಿಂಗ್ ಸ್ಟೇಷನ್ ಅರ್ಕಾವತಿ ನದಿಗೆ ಅಡ್ಡಲಾಗಿ ಹೆಸರಘಟ್ಟ ಕೆರೆಯಿಂದ ನೀರನ್ನು ಪಂಪ್ ಮಾಡುತ್ತಿತ್ತು. ಇದು 1896ರಲ್ಲಿ ಬೆಂಗಳೂರಿನ ಹಲವಾರು ಭಾಗಗಳಿಗೆ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿತ್ತು. 450 ಹೆಕ್ಟೇರ್‌ಗಳಲ್ಲಿ ಹರಡಿರುವ ಹೆಸರಘಟ್ಟ ಕೆರೆಯನ್ನು ಅರ್ಕಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿ ನಗರಕ್ಕೆ ನೀರು ಸರಬರಾಜು ಮಾಡಲಾಗುತ್ತಿತ್ತು. 1998 ರಿಂದ, ನೀರಿನ ಕಳಪೆ ಒಳಹರಿವು ಮತ್ತು ನಗರೀಕರಣದಿಂದಾಗಿ ಕೆರೆಯು ಬತ್ತಿಹೋಯಿತು ಮತ್ತು ಗ್ರಾಮಸ್ಥರು ಕೆರೆಯನ್ನು ಗೋಮಾಳವನ್ನಾಗಿ ಬಳಸಲು ಪ್ರಾರಂಭಿಸಿದರು.

ಸದ್ಯ ನಗರದಿಂದ 25 ಕಿ.ಮೀ ದೂರದಲ್ಲಿರುವ ಹೆಸರಘಟ್ಟ ಕೆರೆಯಲ್ಲಿ 0.3 ಟಿಎಂಸಿ ಅಡಿ ನೀರಿದೆ. ಬಿಡಬ್ಲ್ಯುಎಸ್‌ಎಸ್‌ಬಿ ಕೆರೆಯಿಂದ ನೀರನ್ನು ಪಂಪ್ ಮಾಡಿ, ಸೋಲದೇವನಹಳ್ಳಿ ಪಂಪಿಂಗ್ ಸ್ಟೇಷನ್‌ನಲ್ಲಿ ಸಂಸ್ಕರಿಸಿ ನಂತರ ಎಂಇಐ ಲೇಔಟ್‌ನಲ್ಲಿರುವ ನೀರಿನ ಸಂಗ್ರಹಾಗಾರಕ್ಕೆ ಪಂಪ್ ಮಾಡಲು ಸಜ್ಜಾಗಿದೆ. ಅಲ್ಲಿಂದ ಟ್ಯಾಂಕರ್‌ಗಳ ಮೂಲಕ ಬೆಂಗಳೂರಿನ ಅಗತ್ಯವಿರುವ ಪ್ರದೇಶಗಳಿಗೆ ನೀರು ಸರಬರಾಜು ಮಾಡಲಾಗುತ್ತದೆ.

ಇತ್ತೀಚೆಗೆ ಪಂಪಿಂಗ್ ಸ್ಟೇಷನ್‌ಗೆ ಭೇಟಿ ನೀಡಿದ್ದ ಬಿಡಬ್ಲ್ಯುಎಸ್‌ಎಸ್‌ಬಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್, 'ಸುಮಾರು 128 ವರ್ಷಗಳ ಹಿಂದೆ ಬೆಂಗಳೂರು ದೇಶದಲ್ಲಿ ವ್ಯವಸ್ಥಿತ ನೀರು ಸರಬರಾಜು ಮಾಡಿದ ಮೊದಲ ನಗರವಾಗಿತ್ತು. 1873 ರಲ್ಲಿ, ಮಿಲ್ಲರ್ಸ್ ಟ್ಯಾಂಕ್ಸ್ ಎಂದೇ ಕರೆಯಲಾಗುತ್ತಿದ್ದ ಸರಣಿ ಜಲಾಶಯಗಳ ಮೂಲಕ ಬೆಂಗಳೂರಿಗೆ ನೀರು ಸರಬರಾಜು ಮಾಡಲಾಗಿತ್ತು. 1875-1877ರ ನಡುವೆ ನಗರದಲ್ಲಿ ಸಂಭವಿಸಿದ ಮಹಾ ಕ್ಷಾಮದ ನಂತರ, ಜಲಮೂಲಗಳು ಬತ್ತಿದವು. ಇದು ಅರ್ಕಾವತಿ ನದಿಯಿಂದ ಹೆಸರಘಟ್ಟ ಕೆರೆ ​​ಮೂಲಕ ನೀರನ್ನು ಹರಿಸುವಂತೆ ಮೈಸೂರಿನ ದಿವಾನ್ ಶೇಷಾದ್ರಿ ಅಯ್ಯರ್ ಅವರನ್ನು ಒತ್ತಾಯಿಸಿತು. ಇದರ ಪರಿಣಾಮವಾಗಿ ಸೋಲದೇವನಹಳ್ಳಿ ಪಂಪಿಂಗ್ ಸ್ಟೇಷನ್ 1896ರಲ್ಲಿ ಸ್ಥಾಪನೆಯಾಯಿತು' ಎಂದರು.

ಮೇ ತಿಂಗಳಲ್ಲಿ ಮಳೆ ಬಾರದೇ ಇದ್ದಲ್ಲಿ ನಗರಕ್ಕೆ ನೀರು ಪೂರೈಸಲು ಜಲಮಂಡಳಿ ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದ ಮನೋಹರ್, ಬೆಂಗಳೂರಿನಲ್ಲಿ ಕ್ಷಾಮ ಉಂಟಾಗದಂತೆ ಸೋಲದೇವನಹಳ್ಳಿ ಪಂಪಿಂಗ್ ಸ್ಟೇಷನ್‌ನಿಂದ ನೀರು ಹರಿಸಲಾಗಿತ್ತು. ಏಪ್ರಿಲ್ 20 ರೊಳಗೆ ಪಂಪಿಂಗ್ ಸ್ಟೇಷನ್ ಪುನರುಜ್ಜೀವನಗೊಳಿಸಲು ಮತ್ತು ಹೆಸರಘಟ್ಟ ಕೆರೆಯಲ್ಲಿ ಲಭ್ಯವಿರುವ 0.3 ಟಿಎಂಸಿ ಅಡಿ ನೀರು ಪೂರೈಸಲು ನಾವು ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದು ಹೇಳಿದರು.

SCROLL FOR NEXT