ಕೊಪ್ಪಳ: ಕರ್ನಾಟಕ ರಾಜ್ಯದ ರೈತರ ಚಿಂತಿಗೆ ಕಾರಣವಾಗಿದ್ದ ತುಂಗಭದ್ರಾ ಜಲಾಶಯದ ಕ್ರೆಸ್ಟ್ ಗೇಟ್ ದುರಸ್ತಿ ಕಾರ್ಯದಲ್ಲಿ ಇಂದು ಮೊದಲ ಯಶಸ್ಸು ಲಭಿಸಿದ್ದು, ತುಂಡರಿಸಿ ಕೊಚ್ಚಿ ಹೋಗಿದ್ದ ಕ್ರೆಸ್ಟ್ ಗೇಟ್ 19 ಬದಲಿಗೆ ಸ್ಟಾಪ್ ಲಾಗ್ ಗೇಟ್ ನ ಮೊದಲ ಎಲಿಮೆಂಟ್ ಅಳವಡಿಕೆ ಯಶಸ್ವಿಯಾಗಿದೆ.
ಹೌದು... ಸತತ ಎರಡು ದಿನಗಳಿಂದ ಈ ಕಾರ್ಯಾಚರಣೆ ಬಳಿಕ ತುಂಗಭದ್ರಾ ಜಲಾಶಯದ ಕ್ರೆಸ್ಟ್ ಗೇಟ್ 19 ಬದಲಿಗೆ ಸ್ಟಾಪ್ ಲಾಗ್ ಗೇಟ್ ನ ಮೊದಲ ಎಲಿಮೆಂಟ್ ಅನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ. ಈ ಎಲೆಮೆಂಟ್ ಅಳವಡಿಕೆ ಪ್ರಕ್ರಿಯೆಯಲ್ಲಿ ಅಡ್ಡಿಯಾಗಿದ್ದ ಸ್ಕೈವಾಕ್ ತೆರವು ಮಾಡಿದ ಬೆನ್ನಲ್ಲೇ ಮೊದಲ ಹಂತದ ಸ್ಟಾಪ್ ಗೇಟ್ ಅಳವಡಿಕೆ ಯಶಸ್ವಿಯಾಗಿದೆ.
4 ಗೇಟ್ ಗಳ ಅಳವಡಿಕೆ ಬಾಕಿ
ಸ್ಟಾಪ್ ಲಾಗ್ ಗೇಟ್ ನ ಒಟ್ಟು ಐದು ಎಲಿಮೆಂಟ್ ಗಳ ಪೈಕಿ ಒಂದು ಎಲಿಮೆಂಟ್ ಅನ್ನು ಇಂದು ಅಳವಡಿಸಲಾಗಿದ್ದು, ಇನ್ನೂ 4 ಎಲಿಮೆಂಟ್ ಗಳನ್ನು ಅಳವಡಿಸಬೇಕಿದೆ. ನಾಳೆ ಬಾಕಿ ಇರುವ ಎಲಿಮೆಂಟ್ ಗಳನ್ನು ಅಳವಡಿಸಲಾಗುತ್ತದೆ ಎಂದು ಹೇಳಲಾಗಿದೆ. ಈ ಕಾರ್ಯಕ್ಕೆ ಅಡ್ಡಿಯಾಗಿದ್ದ ಸ್ಕೈವಾಕ್ ತೆರವುಗೊಳಿಸಿ ಬಳಿಕ ಸ್ಟಾಪ್ ಲಾಗ್ ಗೇಟ್ ಅನ್ನು ಯಶಸ್ವಿಯಾಗಿ ಅವಳಡಿಸಲಾಗಿದೆ.
ಸಿಹಿ ಹಂಚಿ ಸಂಭ್ರಮ
ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ 19 ಬದಲಿಗೆ ಸ್ಟಾಪ್ ಲಾಗ್ ಗೇಟ್ ನ ಮೊದಲ ಎಲಿಮೆಂಟ್ ಅಳವಡಿಕೆ ಸಕ್ಸಸ್ ಆಗಿದ್ದರಿಂದ ಇದರಿಂದ ಅಧಿಕಾರಿಗಳು, ಸಿಬ್ಬಂದಿ, ಜನಪ್ರತಿನಿಧಿಗಳು ಹೆಚ್ಚಾಗಿ ರೈತರು ನಿಟ್ಟುಸಿರುಬಿಡುವಂತಾಗಿದೆ. ಮೊದಲ ಗೇಟ್ ಅಳವಡಿಕೆ ಯಶಸ್ವಿಗೆ ಶ್ರಮಿಸಿದ ತಜ್ಞರು, ಇಂಜಿನಿಯರ್ ಹಾಗೂ ಸಿಬ್ಬಂದಿಗೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಿಗೆ ಸಂಸದ ರಾಜಶೇಖರ್ ಹಿಟ್ನಾಳ ಅವರು ಸಿಹಿ ತಿನಿಸಿ ಸಂಭ್ರಮಿಸಿದರು.
ಸತತ ಎರಡು ದಿನಗಳಿಂದ ಅಳವಡಿಕೆ ಹರಸಾಹಸ ಮಾಡಿಲಾಗಿತ್ತು. ಇಂದು(ಆಗಸ್ಟ್ 16) ಕತ್ತಲಾದರೂ ಸಹ ಸಿಬ್ಬಂದಿ ಲೈಟ್ ಹಾಕಿಕೊಂಡೇ ಮೊದಲ ಹಂತದ ಸ್ಟಾಪ್ ಲಾಗ್ ಗೇಟ್ನ ಮೊದಲ ಎಲಿಮೆಂಟ್ ಅಳವಡಿಕೆಗೆ ಮುಂದಾಗಿದ್ದರು. ಇದೀಗ ಅದು ಯಶಸ್ವಿಯಾಗಿದೆ.
ಶಿವರಾಜ್ ತಂಗಡಗಿ ಸಂತಸ
ಈ ಬಗ್ಗೆ ಮಾಹಿತಿ ನೀಡಿದ ಸಚಿವ ಶಿವರಾಜ್ ತಂಗಡಗಿ, ಮೊದಲ ಎಲಿಮೆಂಟ್ ಅಳವಡಿಕೆ ಸಕ್ಸಸ್ ಆಗಿದೆ. ಹರಿಯೋ ನೀರಲ್ಲಿ ಎಲಿಮೆಂಟ್ ಅಳವಡಿಸೋದು ದೊಡ್ಡ ಸವಾಲಾಗಿತ್ತು. ಆದ್ರೆ ಕಾರ್ಮಿಕರು ಯಶಸ್ವಿಯಾಗಿ ಅಳವಡಿಸಲು ಯಶಸ್ವಿಯಾಗಿದ್ದಾರೆ. ಹೀಗಾಗಿ ಕನ್ನಯ್ಯ ನಾಯ್ಡು ಸೇರಿದಂತೆ ಎಲ್ಲಾ ಸಿಬ್ಬಂದಿಗೆ ಧನ್ಯವಾದಗಳು. ಅಂತೆಯೇ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಕೂಡಾ ಕಾರ್ಯಾಚರಣೆಯನ್ನು ಲೈವ್ ಆಗಿ ನೋಡಿದ್ದಾರೆ. ನಾಳೆ( ಆಗಸ್ಟ್ 17) ಸಂಜೆವರಗೆ ಉಳಿದ ಎಲಿಮೆಂಟ್ ಗಳನ್ನು ಅಳವಡಿಸಲಾಗುತ್ತದೆ. ರೈತರ ಬೆಳೆಗೆ ನೀರು ಕೊಡುವ ಕೆಲಸ ಮಾಡುತ್ತೇವೆ ಎಂದು ಸಂತಸ ವ್ಯಕ್ತಪಡಿಸಿದರು.