ತುಮಕೂರು: ನಿವಾಸಿಗಳ ಬಹುದಿನಗಳ ಬೇಡಿಕೆಯಾದ ಬೆಂಗಳೂರು-ತುಮಕೂರು ನಡುವೆ ಮೆಮು ದೈನಂದಿನ ರೈಲು ಸೇವೆಯನ್ನು ಶೀಘ್ರದಲ್ಲೇ ಪರಿಚಯಿಸಲಾಗುವುದು ಎಂದು ರೈಲ್ವೆ ರಾಜ್ಯ ಸಚಿವ ವಿ ಸೋಮಣ್ಣ ಹೇಳಿದ್ದಾರೆ. ಈ ರೈಲು ಸಂಚಾರದಿಂದ ವಿಶೇಷವಾಗಿ ಸಾವಿರಾರು ವಿದ್ಯಾರ್ಥಿಗಳು, ಕಚೇರಿಗೆ ಹೋಗುವವರು ಮತ್ತು ಕಾರ್ಖಾನೆಯ ಉದ್ಯೋಗಿಗಳಿಗೆ ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.
ಧಾರವಾಡ-ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ತುಮಕೂರು ರೈಲ್ವೆ ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ತುಮಕೂರು ನಿಲ್ದಾಣವನ್ನು ವಿಶ್ವ ದರ್ಜೆಯ ಟರ್ಮಿನಲ್ ಆಗಿ ಮೇಲ್ದರ್ಜೆಗೇರಿಸಲು ಸುಮಾರು 100 ಕೋಟಿ ರೂಪಾಯಿ ವೆಚ್ಚದಲ್ಲಿ ನೀಲನಕ್ಷೆ ಸಿದ್ಧಪಡಿಸಲಾಗುತ್ತಿದೆ ಎಂದರು. ರಸ್ತೆ ಮತ್ತು ರೈಲು ಬಳಕೆದಾರರ ಸುರಕ್ಷತೆಯನ್ನು ಹೆಚ್ಚಿಸಲು ತುಮಕೂರು ನಗರದಲ್ಲಿ ಐದು ರೋಡ್ ಓವರ್ ಬ್ರಿಡ್ಜ್ಗಳನ್ನು ಅಂದಾಜು 350 ಕೋಟಿ ರೂಪಾಯಿ ವೆಚ್ಚದಲ್ಲಿ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.
ಚಿತ್ರದುರ್ಗದ ಮೂಲಕ ತುಮಕೂರು-ದಾವಣಗೆರೆ ಮಾರ್ಗ ಮತ್ತು ತುಮಕೂರು-ರಾಯದುರ್ಗ ಮಾರ್ಗ ಹಾಗೂ ಕರ್ನಾಟಕದ ಇತರ ಭಾಗಗಳಿಗೆ ನಗರದ ಸಂಪರ್ಕವನ್ನು ಸುಧಾರಿಸಲು ಪ್ರಮುಖವಾಗಿವೆ. ಇವುಗಳನ್ನು ಕ್ರಮವಾಗಿ 2,140 ಕೋಟಿ ಮತ್ತು 2,500 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಈ ಎರಡು ಯೋಜನೆಗಳಿಗೆ ರಾಜ್ಯ ಸರ್ಕಾರ ಶೀಘ್ರವಾಗಿ ಭೂಸ್ವಾಧೀನಕ್ಕೆ ಅನುಕೂಲ ಮಾಡಿಕೊಡಬೇಕು ಎಂದರು. ಕೆಎಸ್ಆರ್ ಬೆಂಗಳೂರು-ಧಾರವಾಡ ರೈಲು ಸಂಖ್ಯೆ. 20662) ತುಮಕೂರಿಗೆ ಬೆಳಗ್ಗೆ 6.32ಕ್ಕೆ ಆಗಮಿಸಿ 6.34ಕ್ಕೆ ಹೊರಡಲಿದೆ ಎಂದು ಪ್ರಕಟಣೆ ತಿಳಿಸಿದೆ. ಧಾರವಾಡ-ಕೆಎಸ್ಆರ್ ಬೆಂಗಳೂರು (ರೈಲು ಸಂಖ್ಯೆ 20662) ಸಂಜೆ 6.18ಕ್ಕೆ ಆಗಮಿಸಿ 6.20ಕ್ಕೆ ಹೊರಡಲಿದೆ.