ರಾಜ್ಯ

ಕಿರುಕುಳ ಆರೋಪ: ಇಡಿ ಅಧಿಕಾರಿಗಳ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ 

Nagaraja AB

ಬೆಂಗಳೂರು: ಕೋಲಾರ-ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಒಕ್ಕೂಟದ (ಕೋಮುಲ್) ನಿರ್ದೇಶಕ ವೈ ಬಿ ಅಶ್ವತ್ಥ ನಾರಾಯಣ ಅವರು ದಾಖಲಿಸಿರುವ ಪ್ರಕರಣದ ಆಧಾರದ ಮೇಲೆ ಜಾರಿ ನಿರ್ದೇಶನಾಲಯದ (ಇಡಿ) ಉಪ ನಿರ್ದೇಶಕ ಮನೋಜ್ ಮಿತ್ತಲ್ ಮತ್ತು ಸಹಾಯಕ ನಿರ್ದೇಶಕ ಅಜಯ್ ಕುಮಾರ್ ವೈದ್ಯ ವಿರುದ್ಧದ ಮುಂದಿನ ತನಿಖೆಗೆ  ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ವಿಚಾರಣೆ ಸಂದರ್ಭದಲ್ಲಿ ಇವರಿಬ್ಬರೂ ತನಗೆ ಚಿತ್ರಹಿಂಸೆ ನೀಡುವುದರೊಂದಿಗೆ ಹಲ್ಲೆ ಮಾಡಿದ್ದಾರೆ ಎಂದು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಅಶ್ವತ್ಥ ನಾರಾಯಣ ದೂರು ದಾಖಲಿಸಿದ್ದರು.

ದೂರುದಾರರು ದಾಖಲಿಸಿರುವ ಎಫ್ ಐಆರ್ ಪ್ರಶ್ನಿಸಿ ಇಡಿ ಅಧಿಕಾರಿಗಳಾದ ಮಿತ್ತಲ್ ಮತ್ತು ವೈದ್ಯ ಅವರು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಕೆ ನಟರಾಜನ್, ಇದು ಇಡಿ ಕಾರ್ಯಾಚರಣೆಗೆ ಅಡ್ಡಿಪಡಿಸುವ ಪ್ರಯತ್ನವಾಗಿದೆ ಎಂಬ ಕಾರಣಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿದರು. 

ಅರ್ಜಿದಾರರು ಮಾರಣಾಂತಿಕ ಅಸ್ತ್ರವಲ್ಲದ PVC ಪೈಪ್‌ಗಳನ್ನು ಹಲ್ಲೆ ಮಾಡಲು ಬಳಸಿದ್ದಾರೆಂದು ಹೇಳಲಾಗುತ್ತದೆ. ಅದು ಸೆಕ್ಷನ್ 324 ರ ಅಡಿಯಲ್ಲಿ ಬರುತ್ತದೆ. ಉಳಿದ ಅಪರಾಧಗಳು ಅರಿಯಲಾಗದ ಅಪರಾಧಗಳಾಗಿದ್ದು, ಎಫ್‌ಐಆರ್ ದಾಖಲಿಸಲು ಬರುವುದಿಲ್ಲ ಎಂದು ಸಾಲಿಸಿಟರ್ ಜನರಲ್ ವಾದಿಸಿದರು. ಇದನ್ನು ಪರಿಗಣಿಸಿದ ನ್ಯಾಯಾಲಯ ಮುಂದಿನ ವಿಚಾರಣೆಯ ತನಕ ಅರ್ಜಿದಾರರ ವಿರುದ್ಧದ ಮುಂದಿನ ತನಿಖೆಗೆ ತಡೆ ನೀಡಿ, ಅಶ್ವತ್ಥ ನಾರಾಯಣ ಅವರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತು.

SCROLL FOR NEXT