ಹಾಸನ: ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಆಕರ್ಷಕ ಪ್ರವಾಸಿ ತಾಣಗಳಲ್ಲಿ ಒಂದಾದ ಪಟ್ಲ ಬೆಟ್ಟದಿಂದ ಹಿಂದಿರುಗುತ್ತಿದ್ದ ಪ್ರವಾಸಿಗರ ಮೇಲೆ ಚಾಲಕರ ಗುಂಪು ಹಲ್ಲೆ ನಡೆಸಿದೆ.
ಜೀಪ್ ಚಾಲಕರ ಗುಂಪು, ಪ್ರವಾಸಿಗರಿಗೆ ಬೈಕ್ಗಳಲ್ಲಿ ಹೋಗಬೇಡಿ ಎಂದಿದ್ದಾರೆ. ಬೆಟ್ಟಕ್ಕೆ ತೆರಳಬೇಕಾದರೆ ಬಾಡಿಗೆ ಜೀಪಿನಲ್ಲೇ ಹೋಗಬೇಕು. ಬೇರೆ ವಾಹನಗಳನ್ನು ಬಿಡುವುದಿಲ್ಲ ಎಂದು ಬೈಕ್ ಸವಾರರ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ.
ಈ ವೇಳೆ ಕೆಲವರು ಏಕಾಏಕಿ ಬೈಕ್ ಸವಾರ ದಕ್ಷಿಣ ಕನ್ನಡ ಜಿಲ್ಲೆಯ ಥೋಕ್ಕೊಟ್ಲು ಗ್ರಾಮದ ಭುವಿತ್ ಪೂಜಾರಿ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದ ಘಟನೆಯು ಭುವಿತ್ ಪೂಜಾರಿಯವರು ಹೆಲ್ಮೆಟ್ನಲ್ಲಿ ಧರಿಸಿದ್ದ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲೂ ಕೂಡ ವೈರಲಾಗಿದೆ.
ಜೂನ್ 23 ರಂದು ಈ ಘಟನೆ ನಡೆದಿದ್ದು, ಭುವಿತ್ ಪೂಜಾರಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಸೋಮವಾರ ಚಾಲಕರಾದ ಗಗನ್, ಕಿರಣ್, ನಿಶಾಂತ್, ಮದನ್ ಎಂಬುವವರ ವಿರುದ್ಧ ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪ್ರವಾಸಿಗರ ಪ್ರಕಾರ ಜೀಪ್ನ ಚಾಲಕರು ಸಂಘವನ್ನು ಮಾಡಿಕೊಂಡಿದ್ದು, ಹಿಲ್ ಟಾಪ್ಗಾಗಿ ಖಾಸಗಿ ವಾಹನಗಳು ಅಥವಾ ದ್ವಿಚಕ್ರ ವಾಹನಗಳಿಗೆ ಅನುಮತಿ ನೀಡುವುದಿಲ್ಲ. ಪ್ರವಾಸಿಗರು ಬೆಟ್ಟದ ಮೇಲಕ್ಕೆ ಹೋಗಲು ಸ್ಥಳೀಯವಾಗಿ ಲಭ್ಯವಿರುವ ಫೋರ್-ವೀಲ್ ಡ್ರೈವ್ ಜೀಪ್ಗಳನ್ನು ಬಳಸಬೇಕು. ಆದರೆ ಅವರು ಅತಿಯಾದ ಶುಲ್ಕವನ್ನು ವಿಧಿಸುತ್ತಾರೆ ಎಂದು ಆರೋಪಿಸಿದ್ದಾರೆ.
ಪಟ್ಲ ಬೆಟ್ಟ ಇರುವ ವನಗೂರು ಗ್ರಾಮ ಪಂಚಾಯಿತಿಯ ಅಧಿಕಾರಿಗಳು, ಪ್ರತಿನಿತ್ಯ ಭೇಟಿ ನೀಡುವ ಪ್ರವಾಸಿಗರಿಗೆ ಕಿರುಕುಳ ಮತ್ತು ದುಬಾರಿ ಶುಲ್ಕಕ್ಕೆ ಬೇಡಿಕೆಯಿಟ್ಟರೂ ಕಣ್ಣು ಮುಚ್ಚಿ ಕುಳಿತಿದ್ದಾರೆ. ಪ್ರವಾಸಿಗರು ಮತ್ತು ಸ್ಥಳೀಯ ಜನರು ಚಾಲಕರ ವಿರುದ್ಧ ಕ್ರಮ ಕೈಗೊಳ್ಳಲು ಮತ್ತು ಪ್ರವಾಸಿಗರಿಗೆ ಭದ್ರತೆಯನ್ನು ಒದಗಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಒತ್ತಾಯಿಸಿದರು.
ಒಂದೂವರೆ ಕಿಲೋಮೀಟರ್ ದೂರದಲ್ಲಿರುವ ಬೆಟ್ಟಕ್ಕೆ ಪ್ರತಿ ಟ್ರಿಪ್ಗೆ ಚಾಲಕರು 1000 ರಿಂದ 1500 ರೂ. ಕೇಳುತ್ತಾರೆ. ಅನೇಕ ಸಂದರ್ಭಗಳಲ್ಲಿ ತಮ್ಮ ಸ್ವಂತ ವಾಹನಗಳನ್ನು ಬೆಟ್ಟದ ಮೇಲೆ ತೆಗೆದುಕೊಂಡು ಹೋಗಲು ಪ್ರಯತ್ನಿಸಿದಾಗ ಚಾಲಕರ ಗುಂಪು ಪ್ರವಾಸಿಗರಿಗೆ ಬೆದರಿಕೆ ಹಾಕುತ್ತದೆ ಮತ್ತು ಹಲ್ಲೆ ಮಾಡುತ್ತಾರೆ ಎಂದು ಮೂಲಗಳು ತಿಳಿಸಿವೆ.