ಸಂಗ್ರಹ ಚಿತ್ರ 
ರಾಜ್ಯ

ಅಂಜನಾದ್ರಿ, ಪಂಪಾ ಸರೋವರ ಬಳಿ ಚಿರತೆ-ಕರಡಿ ಪ್ರತ್ಯಕ್ಷ: ಪ್ರವಾಸಿಗರು ಆತಂಕ

ವಿಜಯಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ ಕಳೆದ ಎರಡು ದಿನಗಳಿಂದ ಚಿರತೆಯೊಂದು ಕಾಣಿಸಿಕೊಳ್ಳುತ್ತಿದ್ದು, ಕೆಲ ದಿನಗಳ ಹಿಂದೆ ಗ್ರಾಮಕ್ಕೆ ಕರಡಿಗಳೂ ನುಗ್ಗಿವೆ ಎನ್ನಲಾಗಿದೆ.

ಕೊಪ್ಪಳ: ಅಂಜನಾದ್ರಿ ಹಾಗೂ ಪಂಪಾಸರೋವರದ ಬಳಿ ಆಗಾಗ್ಗೆ ಚಿರತೆ ಹಾಗೂ ಕರಡಿ ಕಾಣಿಸಿಕೊಳ್ಳುತ್ತಿದ್ದು, ಪ್ರವಾಸಿಗರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ವಿಜಯಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ ಕಳೆದ ಎರಡು ದಿನಗಳಿಂದ ಚಿರತೆಯೊಂದು ಕಾಣಿಸಿಕೊಳ್ಳುತ್ತಿದ್ದು, ಕೆಲ ದಿನಗಳ ಹಿಂದೆ ಗ್ರಾಮಕ್ಕೆ ಕರಡಿಗಳು ನುಗ್ಗಿವೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಭಕ್ತರು ಹಾಗೂ ಪ್ರವಾಸಿಗರ ಆಗ್ರಹಿಸುತ್ತಿದ್ದಾರೆ.

ಉತ್ತರ ಭಾರತದಿಂದ ಬರುವ ಅನೇಕ ಪ್ರವಾಸಿಗರು ಇಲ್ಲಿ ರಾತ್ರಿ ವೇಳೆ ಸಮಯ ಕಳೆಯಲು ಬಯಸುತ್ತಾರೆ. ಆದರೆ, ಚಿರತೆ ಹಾಗೂ ಕರಡಿ ಕಾಣಿಸಿಕೊಳ್ಳುತ್ತಿರುವುದು ಪ್ರವಾಸಿಗರಲ್ಲಿ ಭಯ ಹುಟ್ಟಿಸಿದೆ. ಭಯದಿಂದಾಗಿ ಪ್ರವಾಸಿಗರು ಹೊಸಪೇಟೆಗೆ ತೆರಳುತ್ತಿದ್ದಾರೆಂದು ವರದಿಗಳು ತಿಳಿಸಿವೆ.

ಹಂಪಿಗೆ ಭೇಟಿ ನೀಡುವ ಪ್ರವಾಸಿಗರು ಸಾಮಾನ್ಯವಾಗಿ ಆನೆಗುಂದಿ ಮತ್ತು ಪಂಪಾ ಸರೋವರಕ್ಕೂ ಭೇಟಿ ನೀಡುತ್ತಾರೆ. ಈ ಸ್ಥಳಗಳು ಪ್ರಸಿದ್ಧವಾಗಿದ್ದು, ಅನೇಕ ಪ್ರವಾಸಿಗರು ರಾತ್ರಿಯಿಡೀ ಇಲ್ಲಿ ತಂಗುತ್ತಾರೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಅಂಜನಾದ್ರಿ ಬೆಟ್ಟಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಇಲ್ಲಿಗೆ ಹೊಸದಾಗಿ ಬರುವ ಪ್ರವಾಸಿಗರು ಕಾಡು ಪ್ರಾಣಿಗಳ ಬಗ್ಗೆ ತಿಳಿಯದೆ ಅಲ್ಲಲ್ಲಿ ಸುತ್ತಾಡುತ್ತಿರುತ್ತಾರೆ. ಹೀಗಾಗಿ ಅಹಿತಕರ ಘಟನೆಗಳ ತಪ್ಪಿಸಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಆನೆಗುಂದಿ, ಅಂಜನಾದ್ರಿ ಗ್ರಾಮಸ್ಥರು ಹಾಗೂ ನಿವಾಸಿಗಳು ಒತ್ತಾಯಿಸಿದ್ದಾರೆ.

ಅಂಜನಾದ್ರಿ ನಿವಾಸಿ ವೀರಮಲ್ಲಯ್ಯ ಪೂಜಾರ್ ಎಂಬುವವರು ಮಾತನಾಡಿ, ಮಂಗಳವಾರ ತಡರಾತ್ರಿ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಸಿಸಿಟಿವಿ ದೃಶ್ಯಾವಳಿಯಲ್ಲಿ ಚಿರತೆ ಓಡಾಡಿರುವ ದೃಶ್ಯ ಕಂಡು ಬಂದಿತ್ತು. ಅದೇ ರಾತ್ರಿ ವಿಜಯಲಕ್ಷ್ಮಿ ದೇವಸ್ಥಾನದ ಮುಂಭಾಗದಲ್ಲಿ ಎರಡು ಕರಡಿಗಳನ್ನು ನೋಡಿದ್ದವು. ಅದೇ ದಿನ ರಾತ್ರಿ ಚಿರತೆಯೊಂದು ನಾಯಿಯನ್ನು ಕೊಂದು ದೇವಸ್ಥಾನದೊಳಗೆ ಕೆಲ ನಿಮಿಷಗಳ ಕಾಲ ಮಲಗಿ ಹೋಗಿದೆ. ಈ ಸುದ್ದಿ ಎಲ್ಲೆಡೆ ಹರಡಿದ್ದು, ಆತಂಕಗೊಂಡ ಪ್ರವಾಸಿಗರು ಇಲ್ಲಿ ಉಳಿಯದೆ ಕೊಪ್ಪಳ ಮತ್ತು ಹೊಸಪೇಟೆಗೆ ತೆರಳುತ್ತಿದ್ದಾರೆ. ಕೆಲವು ಪ್ರವಾಸಿಗರು ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿ ಚಿರತೆ ಮತ್ತು ಕರಡಿಗಳನ್ನು ಹಿಡಿಯುವಂತೆ ಒತ್ತಾಯಿಸಿದ್ದಾರೆಂದು ಹೇಳಿದ್ದಾರೆ.

ಗಂಗಾವತಿ ತಾಲೂಕು ಆಡಳಿತದ ಅಧಿಕಾರಿಯೊಬ್ಬರು ಮಾತನಾಡಿ, ಈ ಪ್ರದೇಶದಲ್ಲಿ ಕಾಡು ಪ್ರಾಣಿಗಳು ಕಾಣಿಸುವುದು ಹೊಸದೇನಲ್ಲ. ಆದರೆ, ಪ್ರಾಣಿಗಳು ದೇವಾಲಯಗಳಿಗೆ ಪ್ರವೇಶಿಸಿರುವುದು ಪ್ರವಾಸಿಗರಲ್ಲಿ ಆತಂಕ ಹುಟ್ಟಿಸಿದೆ. ಆನೆಗುಂದಿ ಮತ್ತು ಅಂಜನಾದ್ರಿ ಕಲ್ಲಿನ ಬೆಟ್ಟಗಳನ್ನು ಹೊಂದಿರುವ ಸ್ಥಳಗಳಾಗಿವೆ. ಹೀಗಾಗಿ ಈ ಪ್ರದೇಶ ಚಿರತೆಗಳು ಮತ್ತು ಕರಡಿಗಳ ಆವಾಸಸ್ಥಾನಗಳಾಗಿವೆ. ಆದರೆ, ಈ ಬಗ್ಗೆ ಅರಣ್ಯಾಧಿಕಾರಿಗಳ ಗಮನಕ್ಕೆ ತಂದು ರಾತ್ರಿ ವೇಳೆ ಹೆಚ್ಚಿನ ನಿಗಾವಹಿಸಿ ಪ್ರವಾಸಿಗರಿಗೆ ನೆರವಾಗುವಂತೆ ತಿಳಿಸುತ್ತೇವೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT