ಬೆಂಗಳೂರು: ರಾಜ್ಯದಲ್ಲಿ ಸಚಿವರ ಹಾಗೂ ಇತರ ಪ್ರಭಾವಿ ರಾಜಕಾರಣಿಗಳ ಹನಿಟ್ರ್ಯಾಪ್ ಗೆ ಯತ್ನ ಪ್ರಕರಣ ದೇಶಾದ್ಯಂತ ಬಾರಿ ಸದ್ದು ಮಾಡುತ್ತಿರುವ ಹೊತ್ತಲ್ಲಿ ಬೆಂಗಳೂರು ಪೊಲೀಸರು ಖಾಸಗಿ ಪ್ರೀಸ್ಕೂಲ್ ಶಿಕ್ಷಕಿ ಸೇರಿದಂತೆ ಹನಿಟ್ರ್ಯಾಪ್ ಗ್ಯಾಂಗ್ ಒಂದನ್ನು ಅರೆಸ್ಟ್ ಮಾಡಿದ್ದಾರೆ.
ಶಿಕ್ಷಕಿ ತನ್ನ ಪ್ರೀಸ್ಕೂಲ್ ಗೆ ಬರುತ್ತಿದ್ದ ಮಗುವಿನ ತಂದೆಗೆ ಮುತ್ತು ಕೊಟ್ಟು ಹನಿಟ್ರ್ಯಾಪ್ ಮಾಡಿದ್ದಲ್ಲದೆ, ಲಕ್ಷಾಂತರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ. ಒಂದು ಕಿಸ್ಗೆ 50 ಸಾವಿರ ರೂ. ಕೇಳಿದರೆ, ಅದರ ಜೊತೆಗೆ ಫುಲ್ ಕೋ ಆಪರೇಷನ್ಗೆ 15 ಲಕ್ಷ ರೂ. ಬೇಡಿಕೆಯಿಟ್ಟಿದ್ದಳು ಎನ್ನುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.
2023ರಲ್ಲಿ ಪ್ಲೇ ಹೋಮ್ಗೆ ಬರುತ್ತಿದ್ದ ಮಗುವಿನ ತಂದೆಯಾಗಿರುವ ಉದ್ಯಮಿಯನ್ನು ಆರೋಪಿ ಶಿಕ್ಷಕಿ ಪರಿಚಯ ಮಾಡಿಕೊಂಡಿದ್ದು, ಬಳಿಕ ಅವರ ಬಳಿ ಶಾಲೆ ನಿರ್ವಹಣೆಗಾಗಿ 2 ಲಕ್ಷ ರೂ. ಸಾಲ ಪಡೆದಿದ್ದಾರೆ. ಅಲ್ಲದೆ ಸಾಲದ ಹಣವನ್ನು 2024ರಲ್ಲಿ ವಾಪಸ್ ಕೊಡುವುದಾಗಿ ತಿಳಿಸಿದ್ದಳು. ಹಣ ವಾಪಸ್ ಕೇಳಿದಾಗ ಶಾಲೆಗೆ ಪಾರ್ಟ್ನರ್ ಆಗು ಎಂದು ಹೇಳಿದ್ದು, ಬಳಿಕ ಇಬ್ಬರ ನಡುವೆ ಸಲುಗೆ ಬೆಳೆದು ಸುತ್ತಾಟ ಆರಂಭವಾಗಿತ್ತು. ಈ ಶಿಕ್ಷಕಿ ಜೊತೆ ಮಾತನಾಡಲು ಉದ್ಯಮಿ ಹೊಸ ಸಿಮ್ ಹಾಗೂ ಪೋನ್ ಅನ್ನು ಸಹ ಖರೀದಿಸಿದ್ದರು.
ಜನವರಿ ಮೊದಲ ವಾರದಲ್ಲಿ ಉದ್ಯಮಿ, ಶಿಕ್ಷಕಿ ಬಳಿ ಹಣ ವಾಪಸ್ ಕೇಳಿದ್ದಕ್ಕೆ ನಿನಗೆ ಏನು ಬೇಕು ಕೇಳು ಕೊಡುತ್ತೇನೆ. ಹಣಕಾಸಿನ ವ್ಯವಹಾರ ಒಂದೇ ಸಲ ಮುಗಿಸಿಬಿಡೋಣ ಎಂದಿದ್ದಾಳೆ. ಬಳಿಕ ಒಂದು ದಿನ ಉದ್ಯಮಿ ಮನೆಗೆ ತೆರಳಿದ ಆರೋಪಿ ಶಿಕ್ಷಕಿ ಒಂದು ಮುತ್ತು ಕೊಟ್ಟು 50 ಸಾವಿರ ರೂ. ಪಡೆದಿದ್ದಳು. ಜೊತೆಗೆ ನಿನ್ನ ಜೊತೆ ರಿಲೇಷನ್ ಶಿಪ್ನಲ್ಲಿ ಇರುತ್ತೇನೆ ಎಂದು ಆಫರ್ ನೀಡಿ, 15 ಲಕ್ಷ ರೂ.ಗೆ ಡಿಮ್ಯಾಂಡ್ ಇಟ್ಟಿದ್ದಾಳೆ. ಆದರೆ ಇದಕ್ಕೆ ರಾಕೇಶ್ ಒಪ್ಪಿರಲಿಲ್ಲ. ಆದರೂ ಪದೇ ಪದೇ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದರಿಂದ ರೋಸಿ ಹೋಗಿದ್ದ ಉದ್ಯಮಿ ಸಿಮ್ ಮುರಿದು ಶಿಕ್ಷಕಿಯಿಂದ ಅಂತರ ಕಾಯ್ದುಕೊಂಡಿದ್ದಾರೆ.
ಮಾರ್ಚ್ 12 ರಂದು ಉದ್ಯಮಿ ಪತ್ನಿಗೆ ಕರೆ ಮಾಡಿದ್ದ ಶಿಕ್ಷಕಿ, ಮಕ್ಕಳ ಸ್ಕೂಲ್ ಟಿಸಿ ಕಳುಹಿಸಿಕೊಡುತ್ತೇನೆ, ನಿಮ್ಮ ಪತಿಯನ್ನು ಕಳುಹಿಸಿ ಎಂದಿದ್ದಳು. ಅದರಂತೆ ಪ್ರೀ ಸ್ಕೂಲ್ಗೆ ರಾಕೇಶ್ ತೆರಳಿದ್ದರು. ಆಗ ಅಲ್ಲಿ ಶಿಕ್ಷಕಿ ಜೊತೆ ಹಾಜರಿದ್ದ ಇತರೆ ಆರೋಪಿಗಳಾದ ಸಾಗರ್ ಹಾಗೂ ಗಣೇಶ್ ಬೆದರಿಕೆ ಹಾಕಿದ್ದಾರೆ.
ಸಾಗರ್ ಜೊತೆ ಶಿಕ್ಷಕಿಗೆ ನಿಶ್ಚಿತಾರ್ಥ ಆಗಿದೆ. ಆದರೆ ನೀನು ಆಕೆ ಜೊತೆ ಮಜಾ ಮಾಡುತ್ತಿದ್ದಿ ಎಂದು ಆರೋಪಿ ಗಣೇಶ್ ಬೆದರಿಕೆ ಹಾಕಿದ್ದ. ಬಳಿಕ ಕಾರಿನಲ್ಲಿ ಕೂರಿಸಿಕೊಂಡು. ಯಾರಿಗೂ ವಿಚಾರ ಹೇಳಬಾರದು ಎಂದರೆ 1 ಕೋಟಿ ರೂ. ಕೊಡು ಎಂದು ಬ್ಲ್ಯಾಕ್ಮೇಲ್ ಮಾಡಿದ್ದಾರೆ. ಕೊನೆಗೆ ಆರೋಪಿಗಳು 20 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ನಂತರ 1.90 ಲಕ್ಷ ರೂ. ಹಣ ಪಡೆದು ಬಿಟ್ಟು ಕಳುಹಿಸಿದ್ದರು. ಆದರೆ, ಉಳಿದ ಹಣ ನೀಡುವಂತೆ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಉದ್ಯಮಿ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ.
ಮಾ.17 ರಂದು ಮತ್ತೆ ಉದ್ಯಮಿಗೆ ಆರೋಪಿತೆ ಕರೆ ಮಾಡಿದ್ದಳು. ಮತ್ತೆ ಉದ್ಯಮಿಗೆ 15 ಲಕ್ಷ ಹಣ ಕೊಡುವಂತೆ ಡಿಮ್ಯಾಂಡ್ ಮಾಡಿದ್ದರು. ಹಣ ಕೊಟ್ಟರೆ ಅಶ್ಲೀಲ ವೀಡಿಯೋ, ಚಾಟಿಂಗ್ ಡಿಲೀಟ್ ಮಾಡ್ತೀನಿ. ಇಲ್ಲವಾದರೆ ನಿನ್ನ ಪತ್ನಿಗೆ ತೋರಿಸಿ ನಿನ್ನ ಸಂಸಾರವನ್ನೇ ಹಾಳು ಮಾಡ್ತೀವೆಂದು ಬ್ಲ್ಯಾಕ್ಮೇಲ್ ಮಾಡಿದ್ದಾಳೆ ಎಂದು ಉದ್ಯಮಿ ಆರೋಪಿಸಿದ್ದಾರೆ.
ಸದ್ಯ ದೂರಿನನ್ವಯ ಪೊಲೀಸರು ಶಿಕ್ಷಕಿ, ಸಾಗರ್ ಮೋರೆ, ಗಣೇಶ್ ಕಾಳೆಯನ್ನು ಬಂಧಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಮೂವರನ್ನು ಕಸ್ಟಡಿಗೆ ಪಡೆದಿದ್ದಾರೆ.
ವಿಚಾರಣೆ ವೇಳೆ ಗಣೇಶ್ ಕಾಳೆ ಬಿಜಾಪುರ ರೌಡಿಶೀಟರ್ ಎಂಬ ವಿಚಾರ ಗೊತ್ತಾಗಿದೆ. ಈತನ ವಿರುದ್ಧ 9 ಪ್ರಕರಣಗಳಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.