ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಒಂದು ವಾರ ಸಾಧಾರಣದಿಂದ ಭಾರೀ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಆಂಧ್ರಪ್ರದೇಶದ ಕರಾವಳಿಯ ಮಧ್ಯಭಾಗಗಳು ಸೇರಿ ವಿವಿಧೆಡೆ ಚಂಡಮಾರುತದ ಪರಿಚಲನೆ ಸರಾಸರಿ ಸಮುದ್ರಮಟ್ಟದಿಂದ 0.9 ಕಿ.ಮೀ. ಎತ್ತರದಲ್ಲಿದೆ. ಪಶ್ಚಿಮ ರಾಜಸ್ಥಾನದಿಂದ ಮನ್ನಾರ್ ಕೊಲ್ಲಿಯವರೆಗೆ ಪೂರ್ವ ರಾಜಸ್ಥಾನ, ಪಶ್ಚಿಮ ಮಧ್ಯಪ್ರದೇಶ, ವಿದರ್ಭ, ಮರಾಠವಾಡ ಮತ್ತು ಕರ್ನಾಟಕದ ಒಳನಾಡು ಮತ್ತು ತಮಿಳುನಾಡಿನಾದ್ಯಂತ ಚಂಡಮಾರುತದ ಪರಿಚಲನೆ ಸರಾಸರಿ ಸಮುದ್ರ ಮಟ್ಟದಿಂದ 0.9 ಕಿ.ಮೀ ಎತ್ತರದಲ್ಲಿದೆ.
ಆಗ್ನೇಯ ಮಧ್ಯಪ್ರದೇಶದಿಂದ ವಿದರ್ಭದಾದ್ಯಂತ ತೆಲಂಗಾಣದ ಮಧ್ಯ ಭಾಗಗಳವರೆಗೆ 0.9 ಕಿ.ಮೀ ಎತ್ತರದಲ್ಲಿ ಒಂದು ತಗ್ಗು ನಿರ್ಮಾಣವಾಗಿದೆ. ಕರಾವಳಿ ಆಂಧ್ರಪ್ರದೇಶ, ಯಾಣಂ ಮತ್ತು ನೆರೆಯ ಪ್ರದೇಶಗಳ ಮಧ್ಯ ಭಾಗಗಳಲ್ಲಿ ಮೇಲ್ಭಾಗದ ಮೇಲಿನ ವಾಯು ಚಂಡಮಾರುತದ ಪ್ರಸರಣವಿದೆ. ಇದರಿಂದಾಗಿ ರಾಜ್ಯದ ವಿವಿಧೆಡೆ ಮಳೆ ಮುಂದುವರಿಯಲಿದೆ ಎಂದು ಇಲಾಖೆ ತಿಳಿಸಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಹಾವೇರಿ, ಚಿಕ್ಕಮಗಳೂರು, ಕೊಡಗು, ಕೋಲಾರ, ವಿಜಯನಗರ, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ತುಮಕೂರು, ಹಾಸನ, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ರಾಯಚೂರು. ಕೊಪ್ಪಳ, ಕಲಬುರಗಿ, ಯಾದಗಿರಿ, ಧಾರವಾಡ ಮತ್ತು ಬೆಳಗಾವಿಯಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.
ಇನ್ನು ಬಿಸಿಲ ಬೇಗೆಯಿಂದ ಬಳಲುತ್ತಿದ್ದ ಬೆಂಗಳೂರಿಗೆ ಸೋಮವಾರ ಧಾರಾಕಾರ ಮಳೆ ಸುರಿದು ತಂಪೆರೆಯಿತು. ಮಧ್ಯಾಹ್ನದಿಂದಲೇ ನಗರದಾದ್ಯಂತ ಮೋಡ ಕವಿದ ವಾತಾವರಣವಿತ್ತು. ಸಂಜೆ 5ರ ಹೊತ್ತಿಗೆ ಏಕಾಏಕಿ ಆರಂಭವಾದ ಮಳೆ ಕೆಲವೆಡೆ ಅರ್ಧ ಗಂಟೆ, ಕೆಲವೆಡೆ ಒಂದು ಗಂಟೆ ಕಾಲ ಧೋ ಎಂದು ಸುರಿಯಿತು.
ಧಾನಸೌಧ, ಕೆ.ಆರ್. ಸರ್ಕಲ್, ಕಾರ್ಪೊರೇಷನ್, ಶಾಂತಿನಗರ, ಮೆಜೆಸ್ಟಿಕ್, ಮೈಸೂರು ಬ್ಯಾಂಕ್ ವೃತ್ತದ ಸುತ್ತಮುತ್ತ ಹದಿನೈದು ನಿಮಿಷಕ್ಕೂ ಹೆಚ್ಚು ಕಾಲ ಧಾರಾಕಾರ ಮಳೆ ಸುರಿಯಿತು. ಮಳೆಯಿಂದಾಗಿ ಯಾವುದೇ ಅಹಿತಕರ ಘಟನೆಗಳು ನಗರದಲ್ಲಿ ವರದಿಯಾಗಿಲ್ಲ. ಆದರೆ ಸಂಪಂಗಿರಾಮ್ ನಗರದಲ್ಲಿ ಮರವೊಂದು ಧರೆಗುರುಳಿ ಬಿದ್ದಿದ್ದು ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಜೆ 7.30 ರವರೆಗೆ, ನಗರದಲ್ಲಿ 3.4 ಮಿಮೀ ಮಳೆಯನ್ನು ದಾಖಲಿಸಿದ್ದರೆ, ಎಚ್ಎಎಲ್ ವಿಮಾನ ನಿಲ್ದಾಣದ ವೀಕ್ಷಣಾಲಯದಲ್ಲಿ 0.2 ಮಿಮೀ ಮಳೆ ದಾಖಲಾಗಿದೆ. ಕೆಐಎಯಲ್ಲಿ 0.1 ಮಿಮೀ ಮಳೆ ದಾಖಲಾಗಿದೆ