ಬೆಂಗಳೂರು: ಇಂದಿನ ಕೆಲಸ ಇಂದೇ ಮಾಡುತ್ತೇನೆ. ನಾಳೆ ನನಗೆ ಅವಕಾಶ ಸಿಗದಿರಬಹುದು. ಈ ತತ್ವಕ್ಕೆ ಬದ್ಧನಾಗಿರುವುದರಿಂದಲೇ 8 ಬಾರಿ ಎಂಎಲ್ಸಿಯಾಗಿ ಆಯ್ಕೆಯಾಗಲು ಸಾಧ್ಯವಾಯಿತು ಎಂದು ವಿಧಾನ ಪರಿಷತ್ತಿನ ಅಧ್ಯಕ್ಷ ಬಸವರಾಜ ಹೊರಟ್ಟಿ ಅವರು ಮಂಗಳವಾರ ಹೇಳಿದರು.
ವಿಧಾನ ಪರಿಷತ್ತಿಗೆ ಶಿಕ್ಷಕರ ಮತ ಕ್ಷೇತ್ರದಿಂದ ಎಂಟು ಬಾರಿ ನಿರಂತರವಾಗಿ ಆಯ್ಕೆಯಾಗಿ 45 ವರ್ಷ ಪೂರೈಸಿದ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ, ಪರಿಷತ್ತಿನ ಸದಸ್ಯರು ಕಲಾಪದ ವೇಳೆ ಮೆಚ್ಚುಗೆ ಸೂಚಿಸಿದರು.
ಮಂಗಳವಾರ ಕಲಾಪದ ಶೂನ್ಯ ವೇಳೆಯ ನಂತರ ಕಾಂಗ್ರೆಸ್ನ ಮಂಜುನಾಥ ಭಂಡಾರಿ ಅವರು ಅಭಿನಂದನಾ ನಿರ್ಣಯ ಮಂಡಿಸಿದರು. ಬಿ.ಕೆ.ಹರಿಪ್ರಸಾದ್ ಅವರು ಅದನ್ನು ಬೆಂಬಲಿಸಿದರು. ಆ ನಂತರ ಆಡಳಿ ಮತ್ತು ವಿರೋಧ ಪಕ್ಷಗಳ ಹಲವು ಸದಸ್ಯರು ಬಸವರಾಜ ಹೊರಟ್ಟಿ ಅವರ ಬಗ್ಗೆ ಸುಮಾರು ನಾಲ್ಕು ತಾಸು ಮಾತನಾಡಿದರು.
ಸಚಿವರಾದ ಎಚ್.ಕೆ.ಪಾಟೀಲ, ಎಂ.ಬಿ.ಪಾಟೀಲ, ಮಧು ಬಂಗಾರಪ್ಪ, ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮದ್, ಕಾಂಗ್ರೆಸ್ನ ಪುಟ್ಟಣ್ಣ, ಬಲ್ಕೀಸ್ ಬಾನು, ಐವನ್ ಡಿಸೋಜ, ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಎನ್.ರವಿಕುಮಾರ್, ಭಾರತಿ ಶೆಟ್ಟಿ, ಟಿ.ಎ.ಶರವಣ ಸೇರಿ ಹಲವರು ಮಾತನಾಡಿದರು.
ಸದಸ್ಯರು ತಮ್ಮ ಯಶಸ್ಸನ್ನು ಶ್ಲಾಘಿಸಿದ ನಂತರ ಮಾತನಾಡಿದ ಹೊರಟ್ಟಿ ಅವರು, 1981 ರಲ್ಲಿ ನವದೆಹಲಿಯಲ್ಲಿ ಭೇಟಿಯಾದ ಮುಖರ್ಜಿ ಎಂಬ ವ್ಯಕ್ತಿಯಿಂದ ತಾನು ಸ್ಫೂರ್ತಿ ಪಡೆದುಕೊಂಡೆ, ಮುಖರ್ಜಿಯವರು ಅವರ ಮನೆಯ ಪ್ರವೇಶದ್ವಾರದಲ್ಲಿ ಕೆಲ ಅಕ್ಷರಗಳನ್ನು ಬರೆದಿದ್ದರು. ನಾಳೆ ನನಗೆ ಅವಕಾಶ ಸಿಗದಿರಬಹುದು. ಇಂದು ಮಾತ್ರ ನಿಮ್ಮ ಕೆಲಸ ಮಾಡತ್ತೇನೆಂದು ಬರೆದಿದ್ದರು. ಅದೇ ಪದಗಳನ್ನು ಕನ್ನಡಕ್ಕೆ ಅನುವಾದಿಸಿ ನನ್ನ ಮನೆಯ ಬೋರ್ಡ್ ನಲ್ಲೂ ಹಾಕಿಸಿದ್ದೇನೆ. ಇಂದಿಗೂ ನಾನು ಅದನ್ನು ಅನುಸರಿಸುತ್ತಿದ್ದೇನೆ. ಅದೇ ನನ್ನ ಯಶಸ್ಸಿನ ಗುಟ್ಟು ಎಂದು ಹೇಳಿದರು
ಅಂದಿನಿಂದ ಇಂದಿನವರೆಗೆ ರಾಜಕೀಯವು ಬಹಳಷ್ಟು ಬದಲಾಗಿದೆ. ಪ್ರಸ್ತುತ ರಾಜಕಾರಣಿಗಳಲ್ಲಿ ತಾಳ್ಮೆ ಅಗತ್ಯ. ಮೆಚ್ಚುಗೆ ಮತ್ತು ಟೀಕೆ ಎರಡನ್ನೂ ನಾನು ನೋಡಿದ್ದೇನೆಂದು ತಿಳಿಸಿದರು.
ಈ ವೇಳೆ ಪಕ್ಷಬೇಧ ಮರೆತ ಎಂಎಲ್ಸಿಗಳು ಹೊರಟ್ಟಿ ಅವರನ್ನು ಶ್ಲಾಘಿಸಿದರು. ಅವರ ಸಾಧನೆಗಳಿಗಾಗಿ ಅವರನ್ನು ಗೌರವಿಸಲು ಕಾರ್ಯಕ್ರಮವನ್ನು ನಡೆಸಬೇಕೆಂದು ವಿನಂತಿಸಿದರು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ಅವರು ಮಾತನಾಡಿ, ಜೆಡಿಎಸ್ ಅಥವಾ ಬಿಜೆಪಿ ಯಾವುದೇ ಪಕ್ಷವೂ ತಮ್ಮ ಕಾರಣದಿಂದಲೇ ಹೊರಟ್ಟಿ ರಾಜಕೀಯದಲ್ಲಿ ಇಷ್ಟೊಂದು ಸಾಧನೆ ಮಾಡಿದ್ದಾರೆಂದು ಹೇಳಲು ಸಾಧ್ಯವಿಲ್ಲ. ಇದೆಲ್ಲವೂ ಅವರ ಸ್ವಂತ ಪ್ರಯತ್ನಗಳಿಂದಲೇ ಆಗಿದೆ ಎಂದು ಹೇಳಿದರು.
60 ವರ್ಷಗಳ ಸಾರ್ವಜನಿಕ ಜೀವನದಲ್ಲಿ, ಹೊರಟ್ಟಿ ಅವರು ತಮ್ಮ ಜಾತಿಯನ್ನು ಎಲ್ಲಿಯೂ ಬಹಿರಂಗಪಡಿಸಿಲ್ಲ. ರಾಜಕೀಯವನ್ನು ಹಣ ಮಾಡುವ ಮಾರ್ಗವೆಂದು ಸಾಕಷ್ಟು ಮಂದಿ ನೋಡುತ್ತಾರೆ. ಆದರೆ, ಹೊರಟ್ಟಿ ತಮ್ಮ ಇಡೀ ರಾಜಕೀಯ ಜೀವನದಲ್ಲಿ ರಿಯಲ್ ಎಸ್ಟೇಟ್, ಗಣಿಗಾರಿಕೆ ಅಥವಾ ಅಬಕಾರಿಯೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ. ಎಲ್ಲಾ ವರ್ಗದ ಜನರಿಗೆ ಸಹಾಯ ಮಾಡಿದ್ದಾರೆ ಎಂದು ಹೇಳಿದರು.