ಗಂಗಾವತಿ: ಪ್ರಿ ವೆಡ್ಡಿಂಗ್ ಫೋಟೋಶೂಟ್ ಮುಗಿಸಿ ಮನೆಗೆ ಮರಳುತ್ತಿದ್ದ ಜೋಡಿಯೊಂದು ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಭಾನುವಾರ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಬೆಣಕಲ್ ಬಳಿ ಈ ಭೀಕರ ಅಪಘಾತ ಸಂಭವಿಸಿದ್ದು, ಮೃತ ಜೋಡಿಯನ್ನು ಕರಿಯಪ್ಪ ಮಡಿವಾಳ್ ಹನುಮನಹಟ್ಟಿ(26) ಹಾಗೂ ಕವಿತಾ ಪವಾಡೆಪ್ಪ ಮಡಿವಾಳ (19) ಎಂದು ಗುರುತಿಸಲಾಗಿದೆ.
ಇನ್ನೆರಡು ವಾರದಲ್ಲಿ ಹಸೆಮಣೆ ಏರಿ ದಾಂಪತ್ಯ ಜೀವನಕ್ಕೆ ಕಾಲಿಡಬೇಕಿದ್ದ ಈ ಜೋಡಿ ಪ್ರಿ ವೆಡ್ಡಿಂಗ್ ಫೋಟೋಶೂಟಿಂಗ್ಗೆ ಹೋಗಿ ಬರುವಾಗ ರಸ್ತೆ ಅಪಘಾತದಲ್ಲಿ ಮೃತಪಟ್ಟಿದೆ.
5 ತಿಂಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿಗೆ ಡಿಸೆಂಬರ್ 21ರಂದು ಮದುವೆ ನಿಶ್ಚಯವಾಗಿತ್ತು. ಅದರ ಪ್ರಯುಕ್ತ ಪ್ರೀವೆಡ್ಡಿಂಗ್ ಶೂಟಿಂಗ್ಗಾಗಿ ಹೊಸಪೇಟೆಯ ಪಂಪಾವನ, ಮುನಿರಾಬಾದಿನ ಜಲಾಶಯಕ್ಕೆ ಹೋಗಿ, ವಾಪಸ್ ಬರುತ್ತಿದ್ದರು. ಈ ವೇಳೆ ಕ್ವಾರಿಯ ಲಾರಿಯೊಂದು ಬೈಕ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕವಿತಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಕರಿಯಪ್ಪ ಗಂಗಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.