ಶಿವಮೊಗ್ಗ: ಉತ್ತರ ಪ್ರದೇಶದ ಆಗ್ರಾದಲ್ಲಿರುವ ವಾಯುಪಡೆಯ ಪಿಟಿಎಸ್ ತರಬೇತಿ ಕೇಂದ್ರದಲ್ಲಿ ತರಬೇತಿ ವೇಳೆ ಸಮಯಕ್ಕೆ ಸರಿಯಾಗಿ ಪ್ಯಾರಾಚೂಟ್ ತರೆದುಕೊಳ್ಳದೇ ಜಿಲ್ಲೆಯ ಭಾರತೀಯ ವಾಯುಪಡೆಯ ತರಬೇತುದಾರರೊಬ್ಬರು ಶುಕ್ರವಾರ ಬೆಳಿಗ್ಗೆ ಸಾವನ್ನಪ್ಪಿದ್ದಾರೆ.
ಮೃತರನ್ನು ಹೊಸನಗರ ತಾಲೂಕಿನ ಸಂಕೂರು ಸಮೀಪದ ಗೊರನಗದ್ದೆ ನಿವಾಸಿ ಜಿ ಎಂ ಸುರೇಶ್ ಅವರ ಪುತ್ರ ಜಿ ಎಸ್ ಮಂಜುನಾಥ್ (36) ಎಂದು ಗುರುತಿಸಲಾಗಿದೆ.
ಮಂಜುನಾಥ್ ಅವರು 2023 ರಲ್ಲಿ ಭಾರತೀಯ ವಾಯುಪಡೆಗೆ ಜೂನಿಯರ್ ವಾರಂಟ್ ಅಧಿಕಾರಿಯಾಗಿ ಸೇರ್ಪಡೆಯಾಗಿದ್ದರು. ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ, ಗಾಜಿಯಾಬಾದ್ ಮತ್ತು ದೆಹಲಿಯಲ್ಲಿ ಸೇವೆ ಸಲ್ಲಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಪ್ಯಾರಾ ಜಂಪ್ ವಿಭಾಗದಲ್ಲಿ ಕಳೆದ ಒಂದೂವರೆ ತಿಂಗಳಿಂದ ಆಗ್ರಾದ ತರಬೇತಿ ಕೇಂದ್ರದಲ್ಲಿದ್ದರು. ಕೃಷಿಕ ಕುಟುಂಬದ ಮಂಜುನಾಥ್ 2019 ರಲ್ಲಿ ಅಸ್ಸಾಂನ ಮಹಿಳೆಯನ್ನು ವಿವಾಹವಾಗಿದ್ದರು. ದಂಪತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದರು. ಅವರು 16 ವರ್ಷಗಳ ಕಾಲ ವಾಯುಪಡೆಯಲ್ಲಿ ಸೇವೆ ಸಲ್ಲಿಸಿದ್ದರು.
ಬೆಳಿಗ್ಗೆ 7 ಮತ್ತು 8 ರ ನಡುವೆ ಕಾರ್ಗೋ ವಿಮಾನದಿಂದ ಸುಮಾರು 18,000 ಅಡಿಗಳಷ್ಟು ಪ್ಯಾರಾ ಜಂಪ್ ತರಬೇತಿ ಅವಧಿಯಲ್ಲಿ ಈ ದುರಂತ ಸಂಭವಿಸಿದೆ. 11 ಜಿಗಿತಗಾರರು ತಮ್ಮ ಸುರಕ್ಷಿತವಾಗಿ ಜಂಪ್ ಮಾಡಿದ್ದರೆ, ಮಂಜುನಾಥ್ ಅವರ ಪ್ಯಾರಾಚೂಟ್ ಸರಿಯಾಗಿ ಕಾರ್ಯನಿರ್ವಹಿಸಲಿಲ್ಲ. ಇದರಿಂದಾಗಿ ಅವರು ಸಾವನ್ನಪ್ಪಿದ್ದರು ಎನ್ನಲಾಗಿದೆ.
ಮಂಜುನಾಥ್ ಅವರ ಗ್ರಾಮದಲ್ಲಿ ದುರಂತದ ಛಾಯೆ ಆವರಿಸಿದ್ದು, ಸಂಬಂಧಿಕರು ಹಾಗೂ ಸಮಾಜದ ಬಾಂಧವರು ಸಂತಾಪ ಸೂಚಿಸಿದ್ದಾರೆ. ಭಾನುವಾರ ಬೆಳಗ್ಗೆ ಅವರ ಪಾರ್ಥಿವ ಶರೀರ ಗ್ರಾಮಕ್ಕೆ ಆಗಮಿಸುವ ನಿರೀಕ್ಷೆಯಿದೆ.