ಬೆಂಗಳೂರು: ಮಾಜಿ ಸಂಸದ ಡಿ.ಕೆ.ಸುರೇಶ್ ಸಹೋದರಿ ಎಂದು ಸುಳ್ಳು ಹೇಳಿಕೊಂಡು ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪ ಎದುರಿಸುತ್ತಿರುವ ಐಶ್ವರ್ಯಾ ಗೌಡ ವಿರುದ್ಧ ಹೊಸದಾಗಿ ಮತ್ತೊಂದು ಎಫ್ಐಆರ್ ದಾಖಲಾಗಿದೆ.
ಅಕ್ರಮವಾಗಿ ಹಲವು ವ್ಯಕ್ತಿಗಳ ಮೊಬೈಲ್ ಕರೆಗಳ ವಿವರ (ಸಿಡಿಆರ್) ಪಡೆದುಕೊಂಡಿರುವ ಆರೋಪದ ಮೇಲೆ ಪ್ರಕರಣದ ತನಿಖಾಧಿಕಾರಿಯಾಗಿರುವ ಎಸಿಪಿ ಭರತ್ ರೆಡ್ಡಿ ಅವರು ನೀಡಿರುವ ದೂರಿನ ಮೇರೆಗೆ ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಂಚನೆ ಪ್ರಕರಣ ದಾಖಲಾಗುತ್ತಿದ್ದಂತೆ ಐಶ್ವರ್ಯಾ ಗೌಡ ಅವರ 5 ಹಾಗೂ ಅವರ ಪತಿಯ 2 ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆದಿದ್ದ ಪೊಲೀಸರು, ಅವುಗಳಲ್ಲಿದ್ದ ದತ್ತಾಂಶ ಸಂಗ್ರಹಿಸಲು ನ್ಯಾಯಾಲಯದ ಅನುಮತಿ ಪಡೆದು ಪಶ್ಚಿಮ ವಿಭಾಗದ ಸಿಇಎನ್ ಠಾಣೆಗೆ ರವಾನಿಸಿದ್ದರು.
ಮೊಬೈಲ್ ಫೋನ್ಗಳಲ್ಲಿರುವ ದತ್ತಾಂಶವನ್ನು ಸಂಗ್ರಹಿಸಿದಾಗ ಅದರಲ್ಲಿ ಹಲವು ವ್ಯಕ್ತಿಗಳ ಸಿಡಿಆರ್ ಪತ್ತೆಯಾಗಿವೆ. ಫೋನ್ ಕರೆ ದಾಖಲೆಗಳು ಖಾಸಗಿಯಾಗಿದ್ದು, ಸಾಮಾನ್ಯವಾಗಿ ಅಪರಾಧ ಪ್ರಕರಣಗಳ ತನಿಖೆ ನಡೆಸುವಾಗ ತನಿಖಾ ಸಂಸ್ಥೆ ಅಥವಾ ತನಿಖಾಧಿಕಾರಿಗಳು ಮಾತ್ರವೇ ಅಗತ್ಯಕ್ಕೆ ಅನುಸಾರ ಅವುಗಳನ್ನು ಪಡೆದುಕೊಳ್ಳುವ ಅವಕಾಶ ಹೊಂದಿರುತ್ತಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆದರೆ ಐಶ್ವರ್ಯಾ ಗೌಡ ಅಕ್ರಮವಾಗಿ ಅನೇಕ ವ್ಯಕ್ತಿಗಳ ಸಿಡಿಆರ್ ಪಡೆದುಕೊಂಡಿದ್ದಾರೆ. ಆದ್ದರಿಂದ ಐಶ್ವರ್ಯಾ ಗೌಡ ಹಾಗೂ ಆಕೆಗೆ ಸಿಡಿಆರ್ ನೀಡಿರುವ ತನಿಖಾ ಸಂಸ್ಥೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಐಶ್ವರ್ಯಾ ಗೌಡ ಅವರು ಈ ದಾಖಲೆಗಳನ್ನು ಪಡೆಯಲು ಯಾವುದೇ ಅಧಿಕಾರ ಹೊಂದಿಲ್ಲ, ಅಧಿಕಾರಿಗಳ ಸಹಾಯದಿಂದ ಬೆದರಿಕೆ ಮತ್ತು ಹಣ ವಸೂಲಿ ಮಾಡಲು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.