ಬೆಂಗಳೂರು: ಅರಣ್ಯ ಪ್ರದೇಶದಲ್ಲಿ ಹಲವು ದಶಕಗಳಿಂದ ಇರುವ ಜನವಸತಿ ಪ್ರದೇಶಗಳಿಗೆ ಪರಿಹಾರಾತ್ಮಕವಾಗಿ ಪರ್ಯಾಯ ಭೂಮಿ ಪಡೆದು, ಬಡ ಜನರ ಸಂಕಷ್ಟಗಳನ್ನು ಪರಿಹರಿಸಲು ಕೇಂದ್ರ ಸರ್ಕಾರ ಮತ್ತು ಸುಪ್ರೀಂಕೋರ್ಟ್ ಮೊರೆ ಹೋಗಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಇಂಧನ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಕಂದಾಯ ಸಚಿವ ಕೃಷ್ಣಬೈರೇಗೌಡ ಮತ್ತು ಜನಪ್ರತಿನಿಧಿಗಳ ಜೊತೆ ಗುರುವಾರ ಸಭೆ ನಡೆಸಿದ ಬಳಿಕ ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ಅವರು ಮಾತನಾಡಿದರು.
ಸೆಕ್ಷನ್ 4 ಮತ್ತು ಪರಿಭಾವಿತ ಅರಣ್ಯಕ್ಕೆ ಸಂಬಂಧಿಸಿ ರಾಜ್ಯಾದ್ಯಂತ ಸಮಸ್ಯೆ ಇದ್ದು, ಶಾಶ್ವತ ಪರಿಹಾರ ಕಲ್ಪಿಸಲು ಸರಕಾರ ಕಂದಾಯ ಇಲಾಖೆ ಸಹಕಾರದೊಂದಿಗೆ ಮಾರ್ಗೋಪಾಯ ಹುಡುಕುತ್ತಿದೆ ಎಂದು ಹೇಳಿದರು.
ಜನವಸತಿ ಪ್ರದೇಶ, ಸರಕಾರಿ ಕಟ್ಟಡ, ಅಂಗನವಾಡಿ, ಖಾಸಗಿ ಪಟ್ಟಾ ಭೂಮಿಯನ್ನೂ ಡೀಮ್ಡ್ ಅರಣ್ಯದ ಪಟ್ಟಿಯಲ್ಲಿ ಸೇರಿಸಿ 2022ರಲ್ಲಿ ಎರಡನೇ ಬಾರಿ ಸುಪ್ರೀಂ ಕೋರ್ಟ್ಗೆ ಪ್ರಮಾಣಪತ್ರ ಸಲ್ಲಿಸಲಾಗಿದೆ. ಈಗ ಕೊನೆಯ ಅವಕಾಶವನ್ನು ನ್ಯಾಯಾಲಯ ನೀಡಿದ್ದು, ಸಮರ್ಪಕವಾಗಿ ಜಂಟಿ ಸರ್ವೆ ನಡೆಸಿ ಪ್ರಮಾಣಪತ್ರ ಸಲ್ಲಿಸಿದರೆ ಸಮಸ್ಯೆಗೆ ಪರಿಹಾರ ದೊರಕುತ್ತದೆ. ಕಂದಾಯ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿದರು.
ಸೆಕ್ಷನ್ 4 ಅಧಿಸೂಚನೆ ಆಗಿದ್ದರೂ ಸೆಕ್ಷನ್ 17 ಆಗದೆ ಇರುವ ಪ್ರಕರಣಗಳು ದಶಕಗಳಿಂದ ಬಾಕಿ ಉಳಿದಿದ್ದು, ಎಫ್.ಎಸ್.ಒ.ಗಳು ತ್ವರಿತವಾಗಿ ಇದನ್ನು ಇತ್ಯರ್ಥ ಮಾಡ ಬೇಕು. ಜನವಸತಿ, ಕೃಷಿ ಜಮೀನು ಇಲ್ಲದ ವಿಭಾಗಗಳನ್ನು ಕೂಡಲೇ ಸೆಕ್ಷನ್ 17ಕ್ಕೆ ಪರಿವರ್ತಿಸಿ ಅರಣ್ಯ ಎಂದು ಘೋಷಿಸಬೇಕು ಎಂದು ಸಲಹೆ ನೀಡಿದರು.