ಬೆಂಗಳೂರು: ಬೆಂಗಳೂರಿನಲ್ಲಿ ಆಯೋಜಿಸಿದ್ದ 16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಅಂಗವಾಗಿ ಹಿರಿಯ ನಟಿ ಶಬಾನಾ ಆಜ್ಮಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಆಜ್ಮಿ ಅವರಿಗೆ ಪ್ರಶಸ್ತಿ ಪತ್ರ ಹಾಗೂ ರೂ.10 ಲಕ್ಷದ ಚೆಕ್ ನ್ನು ನೀಡಿ ಸನ್ಮಾನಿಸಿದರು. ಮಿಲೇಸುರ್ ಮೇರಾ ತುಮಾರಾ" ದೃಶ್ಯಕಾವ್ಯ ನಮಗೆ ತುಂಬಾ ಇಷ್ಟ. ಇದರಲ್ಲಿ ನಿಮ್ಮನ್ನು ನೋಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶಬಾನಾ ಆಜ್ಮಿಯವರನ್ನು ಸ್ಮರಿಸಿದರು. ಈ ವೇಳೆ ಗೀತೆ ರಚನೆಕಾರ ಜಾವೇದ್ ಅಖ್ತರ್ ಜೊತೆಗಿದ್ದರು.
ಕರ್ನಾಟಕ ರಾಜ್ಯ ಸಾಂಸ್ಕೃತಿಕವಾಗಿ ಮತ್ತು ಸಂಗೀತಕ್ಕೆ ಅತ್ಯಂತ ಪ್ರಸಿದ್ಧಿ ಎಂದು ಶಬಾನಾ ಮತ್ತು ಜಾವೇದ್ ಅವರು ಮೆಚ್ಚುಗೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ಭೀಮ್ ಸೇನ್ ಜೋಶಿ, ಕುಮಾರ ಗಂಧರ್ವ, ಗಂಗೂಬಾಯಿ ಹಾನಗಲ್ ಇವರೆಲ್ಲಾ ಹಿಂದೂಸ್ತಾನಿ ಸಂಗೀತದ ದಿಗ್ಗಜರು, ನಮ್ಮ ರಾಜ್ಯದ ಹೆಮ್ಮೆ ಇವರೆಲ್ಲಾ ಧಾರವಾಡದವರು ಎನ್ನುವುದು ಮತ್ತೊಂದು ವಿಶೇಷ ಎಂದು ಹೇಳಿದ್ದಾಗಿ ಮುಖ್ಯಮಂತ್ರಿ ಕಾರ್ಯಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕಾಪಿ ರೈಟ್ಸ್ ಕಾಯ್ದೆಯಲ್ಲಿ ಕಲಾವಿದರಿಗೆ, ಸಂಗೀತಗಾರರಿಗೆ ಅನುಕೂಲ ಆಗಿರುವ ರೀತಿಯಲ್ಲೇ, GST ಯಲ್ಲೂ ಅನುಕೂಲ ಆಗುವ ರೀತಿಯಲ್ಲಿ GST ಕೌನ್ಸಿಲ್ ನಲ್ಲಿ ಅಭಿಪ್ರಾಯ ವ್ಯಕ್ತಪಡಿಸುವ ಬಗ್ಗೆಯೂ ಮುಖ್ಯಮಂತ್ರಿಗಳು ತಿಳಿಸಿದರು.
ಸರ್ಕಾರದ ಕಾರ್ಯದರ್ಶಿ ಕಾವೇರಿ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್, ವಾರ್ತಾ ಮತ್ತು ಪ್ರಚಾರ ಇಲಾಖೆ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರು ಶಬಾನಾ ಆಜ್ಮಿ ಮತ್ತು ಜಾವೇದ್ ಅಖ್ತರ್ ಅವರನ್ನು ಸ್ವಾಗತಿಸಿದರು.
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಸಾದು ಕೋಕಿಲ, 16 ನೇ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದ ಕಲಾ ನಿರ್ದೇಶಕ ವಿದ್ಯಾಶಂಕರ್ ಅವರು ಉಪಸ್ಥಿತರಿದ್ದರು.