ಬೆಂಗಳೂರು: ರಾಜ್ಯ ಸರ್ಕಾರವು ನಗರದಲ್ಲಿನ ಗುಂಡಿಗಳನ್ನು ಸರಿಪಡಿಸಲು ಮತ್ತು ಮೂಲಸೌಕರ್ಯಗಳನ್ನು ಸುಧಾರಿಸಲು ಬದ್ಧವಾಗಿದೆ. ಸದ್ಯ ನಡೆಯುತ್ತಿರುವ ರಸ್ತೆ ದುರಸ್ತಿ ಕಾರ್ಯಗಳ ಗುಣಮಟ್ಟದ ಬಗ್ಗೆ ಇರುವ ಕಳವಳಗಳನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬುಧವಾರ ತಳ್ಳಿಹಾಕಿದರು.
ನಗರದಲ್ಲಿನ ಗುಂಡಿಗಳನ್ನು ಮುಚ್ಚಲು ಮತ್ತು ರಸ್ತೆ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು ಕೈಗೊಂಡ ಕೆಲಸದ ಗುಣಮಟ್ಟದ ಬಗೆಗಿನ ದೂರುಗಳಿಗೆ ಪ್ರತಿಕ್ರಿಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಎಲ್ಲವೂ ಚೆನ್ನಾಗಿ ಆಗುತ್ತಿದೆ. ಬೆಂಗಳೂರು ನಗರದ ಬಗ್ಗೆ ಮಾಧ್ಯಮಗಳು ಮತ್ತು ವಿರೋಧ ಪಕ್ಷಗಳು ಸೃಷ್ಟಿಸಿರುವ ಗ್ರಹಿಕೆಯನ್ನು ನಾವು ಬದಲಾಯಿಸಲಿದ್ದೇವೆ. ನಾವು ಅದೇ ಕಾರ್ಯದಲ್ಲಿದ್ದೇವೆ. ನಾವು ನಮ್ಮ ಕೆಲಸ ಮಾಡುತ್ತಿದ್ದೇವೆ' ಎಂದು ತಿಳಿಸಿದರು.
ದೇಶದ ಯಾವುದೇ ರಾಜ್ಯಗಳಲ್ಲಿ ರಸ್ತೆಯಲ್ಲಿ ಗುಂಡಿ ಕಂಡರೆ ಮಾಹಿತಿ ನೀಡಿ ಎಂದು ಯಾವುದೇ ಸಚಿವರು ಸಾರ್ವಜನಿಕರಿಗೆ ಕರೆ ನೀಡಿರಲಿಲ್ಲ. ಆದರೆ ನಾನು ಇದಕ್ಕಾಗಿ ಪ್ರತ್ಯೇಕ ಆಪ್ ಸಿದ್ಧಪಡಿಸಿ, ಪೊಲೀಸರ ಸಹಕಾರದಲ್ಲಿ ರಸ್ತೆಗುಂಡಿ ಮುಚ್ಚಲಾಗುತ್ತಿದೆ. ಇಂತಹ ಪ್ರಯತ್ನ ನಡೆದಿರುವುದು ಕರ್ನಾಟಕದಲ್ಲಿ ಮಾತ್ರ. ಬೆಂಗಳೂರು ಜಾಗತಿಕ ನಗರ ಹೀಗಾಗಿ ಎಲ್ಲರೂ ಬೆಂಗಳೂರು ರಸ್ತೆ ಗುಂಡಿಗಳ ಬಗ್ಗೆ ಮಾತ್ರ ಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದರು.
ಮಂಗಳವಾರ, ಶಿವಕುಮಾರ್ ನಗರದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಗುಂಡಿಗಳ ದುರಸ್ತಿ ಮತ್ತು ರಸ್ತೆ ಕಾಮಗಾರಿಗಳನ್ನು ಪರಿಶೀಲಿಸಿದ ಅವರು, 'ಗುಣಮಟ್ಟದ ಕೆಲಸ' ನಡೆಯುತ್ತಿದ್ದು, ಪ್ಯಾಚ್ವರ್ಕ್, ಸಿಂಗಲ್-ಲೇಯರ್ ರಿಲೇಯಿಂಗ್, ಕಾಂಕ್ರೀಟ್ ರಸ್ತೆಗಳು ಮತ್ತು ವೈಟ್-ಟಾಪಿಂಗ್ ಅನ್ನು ಏಕಕಾಲದಲ್ಲಿ ಕೈಗೊಳ್ಳಲಾಗುತ್ತಿದೆ' ಎಂದರು.
ನಮ್ಮಲ್ಲಿ ಪ್ರತಿದಿನ ಬೆಂಗಳೂರಿನ ಮೂಲಕ 1.2 ಕೋಟಿಗೂ ಹೆಚ್ಚು ವಾಹನಗಳು ಹಾದು ಹೋಗುತ್ತವೆ ಮತ್ತು 50 ಲಕ್ಷಕ್ಕೂ ಹೆಚ್ಚು ವಾಹನಗಳು ಹೊರಗಿನಿಂದ ಬರುತ್ತವೆ. ಆದರೂ, ಸದ್ಯ ನಾವು ಗುಂಡಿ ಮುಚ್ಚುವ ಕೆಲಸದಲ್ಲಿ ತೊಡಗಿಕೊಂಡಿದ್ದೇವೆ ಮತ್ತು ಅದು ನಮ್ಮ ಕೆಲಸ' ಎಂದು ಅವರು ಹೇಳಿದರು.
ಜನದಟ್ಟಣೆ ತೆರಿಗೆ (ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಸಂಚಾರವನ್ನು ಕಡಿಮೆ ಮಾಡಲು ವಾಹನಗಳಿಗೆ ವಿಧಿಸುವ ಶುಲ್ಕ) ಜಾರಿಗೆ ತರಲಾಗುತ್ತಿದೆ ಎಂಬ ವರದಿಗಳನ್ನು ಅವರು ನಿರಾಕರಿಸಿದರು. ಈ ವಿಚಾರವನ್ನು ಚರ್ಚಿಸಲಾಗಿದೆ ಮತ್ತು ಕೆಲವು ಅಭಿಪ್ರಾಯಗಳನ್ನು ಹಂಚಿಕೊಳ್ಳಲಾಗಿದೆ. ಆದರೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ. ಈ ಹಂತದಲ್ಲಿ ಸರ್ಕಾರವು ಅದನ್ನು ಮುಂದುವರಿಸಲು ಸಿದ್ಧವಿಲ್ಲ ಎಂದು ಅವರು ವಿವರಿಸಿದರು.
ಇಲ್ಲಿಯವರೆಗೆ ಸುಮಾರು 13,000 ಗುಂಡಿಗಳನ್ನು ಮುಚ್ಚಲಾಗಿದೆ ಮತ್ತು ಗುರುತಿಸಲಾದ ಇನ್ನೂ 4,000-5,000 ಗುಂಡಿಗಳನ್ನು ಹಂತ ಹಂತವಾಗಿ ದುರಸ್ತಿ ಮಾಡಲಾಗುವುದು. ನಗರದಲ್ಲಿ 550 ಕಿಮೀ ಮುಖ್ಯ ರಸ್ತೆಗಳನ್ನು ಅಭಿವೃದ್ಧಿಪಡಿಸಲು 1,100 ಕೋಟಿ ರೂ.ಗಳ ಕ್ರಿಯಾ ಯೋಜನೆಯನ್ನು ರೂಪಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಅವರು ಹೇಳಿದರು.
ಕಳೆದ ವಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 30 ದಿನಗಳ ಒಳಗೆ ಎಲ್ಲ ನಗರದ ರಸ್ತೆಗಳು ವಾಹನ ಸಂಚಾರಕ್ಕೆ ಯೋಗ್ಯವಾಗುವಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.