ಬೆಂಗಳೂರು: ಒಳಮೀಸಲಾತಿ ಸಂಬಂಧ ಜೆ.ಸಿ.ಮಾಧುಸ್ವಾಮಿ ಸಮಿತಿಯ ವರದಿ ಅಥವಾ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಆಯೋಗದ ವರದಿಯನ್ನು ತಿದ್ದುಪಡಿ ಮಾಡದೆ ಯಥಾವತ್ತಾಗಿ ಜಾರಿಗೆ ತರುವಂತೆ ಬಿಜೆಪಿ ಸಂಸದ ಗೋವಿಂದ ಕಾರಜೋಳ ಅವರು ಮಂಗಳವಾರ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶಕ್ಕೆ ಅನುಗುಣವಾಗಿಯೇ ನಾಗಮೋಹನದಾಸ್ ಆಯೋಗವು ಶಿಫಾರಸು ಮಾಡಿತ್ತು. ಆದರೆ ಅದನ್ನು ಕಡೆಗಣಿಸಿದ ಸರ್ಕಾರವು, ತನ್ನಿಚ್ಛೆಯಂತೆ ಒಳಮೀಸಲಾತಿಯನ್ನು ಘೋಷಿಸಿದೆ. ಇದು ಸಾಮಾಜಿಕ ನ್ಯಾಯದ ತೀರ್ಮಾನವಲ್ಲ. ಬದಲಿಗೆ ರಾಜಕೀಯ ತೀರ್ಮಾನವಾಗಿದೆ ಎಂದು ಆರೋಪಿಸಿದರು.
ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಸರ್ಕಾರ ಸಂಪೂರ್ಣವಾಗಿ ಒಪ್ಪಿಕೊಳ್ಳಬೇಕು ಅಥವಾ ಬಸವರಾಜ್ ಬೊಮ್ಮಾಯಿ ನೇತೃತ್ವದ ಹಿಂದಿನ ಬಿಜೆಪಿ ಸರ್ಕಾರದ ಜೆಸಿ ಮಾಧುಸ್ವಾಮಿ ನೇತೃತ್ವದ ಸಂಪುಟ ಉಪಸಮಿತಿಯ ಶಿಫಾರಸುಗಳನ್ನು ಒಪ್ಪಿಕೊಳ್ಳಬೇಕು. ನಾಗಮೋಹನ್ ದಾಸ್ ಆಯೋಗದ ವರದಿಗೆ 150 ಕೋಟಿ ರೂಪಾಯಿ ಖರ್ಚು ಮಾಡಿದ ಸರ್ಕಾರ, ಅದರ ಶಿಫಾರಸುಗಳನ್ನು ಮಾರ್ಪಡಿಸುವ ಮೂಲಕ ಅದನ್ನು ಅವಮಾನಿಸಿದೆ. ಸಿದ್ದರಾಮಯ್ಯ ಅವರು ನಿವೃತ್ತ ಅಧಿಕಾರಿಗಳೊಂದಿಗೆ ಸರ್ವಪಕ್ಷ ಸಭೆ ನಡೆಸಿ ಈ ವಿಷಯದ ಬಗ್ಗೆ ಒಮ್ಮತ ನಿರ್ಧಾರಕ್ಕೆ ಬರಬೇಕೆಂದು ಆಗ್ರಹಿಸಿದರು.
ಸಚಿವ ಸಂಪುಟದ ಸಭೆಗೆ ಹಿಂದಿನ ದಿನ ಗೃಹ ಸಚಿವ ಡಾ.ಪರಮೇಶ್ವರ್ ಅವರ ಮನೆಯಲ್ಲಿ ಇಡೀ ರಾತ್ರಿ ಸಭೆ ಮಾಡಿ ಈ ಖಾಜಿ ನ್ಯಾಯ ಮಾಡಿದರು. ಅತ್ಯಂತ ಹಿಂದುಳಿದವರು ಎಂದು ಗುರುತಿಸಲ್ಪಟ್ಟ 59 ಅಲೆಮಾರಿ ಎಸ್ಸಿ ಸಮುದಾಯಗಳನ್ನು ಸಿ ವರ್ಗಕ್ಕೆ ಸೇರಿಸಲಾಗಿದೆ, ಇದರಲ್ಲಿ ನಾಲ್ಕು ಕಡಿಮೆ ಹಿಂದುಳಿದ ಜಾತಿಗಳಿವೆ, ಇದು ಸುಪ್ರೀಂ ಕೋರ್ಟ್ನ ನಿರ್ದೇಶನದ ಉಲ್ಲಂಘನೆಯಾಗಿದೆ, ಒಳ ಮೀಸಲಾತಿಯನ್ನು ಜಾರಿಗೆ ತರುವಾಗ ಹಿಂದುಳಿದ ಜಾತಿಗಳನ್ನ ಗಣನೆಗೆ ತೆಗೆದುಕೊಳ್ಳಬೇಕು. 59 ಅಲೆಮಾರಿಗಳಲ್ಲಿ ಮಾದಿಗ ಸಮುದಾಯಕ್ಕೆ ಸೇರಿದ 14 ಉಪಜಾತಿಗಳಿವೆ. ಸರ್ಕಾರವು ತರಾತುರಿಯಲ್ಲಿ ನೇಮಕಾತಿಯನ್ನು ಪ್ರಾರಂಭಿಸಿದೆ, ಕೆಪಿಎಸ್ಸಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಹೀಗಾಗಿ, ಸರ್ಕಾರ ಎಲ್ಲಾ ನೇಮಕಾತಿ ಪ್ರಕ್ರಿಯೆಗಳನ್ನು ನಿಲ್ಲಿಸಬೇಕು ಮತ್ತು ಶೇ.17 ಮೀಸಲಾತಿಯನ್ನು ಅನುಷ್ಠಾನಗೊಳಿಸುವ ಆದೇಶವನ್ನು ಉದ್ಯೋಗ, ಶಿಕ್ಷಣ ಮತ್ತು SCSP ಅನುದಾನಗಳಿಗೂ ಅನ್ವಯಿಸುವಂತೆ ಮಾರ್ಪಡಿಸಬೇಕು ಎಂದು ಒತ್ತಾಯಿಸಿದರು.
ಏತನ್ಮಧ್ಯೆ, ರಾಜ್ಯ ಸರ್ಕಾರವು "ಶಿಫಾರಸುಗಳನ್ನು ಮಾರ್ಪಡಿಸುವ ತನ್ನ ತಪ್ಪನ್ನು ಸರಿಪಡಿಸಿಕೊಳ್ಳದಿದ್ದರೆ, ಮಾದಿಗ ಸಮುದಾಯವು ತನ್ನ ಹೋರಾಟವನ್ನು ಮತ್ತೆ ಪ್ರಾರಂಭಿಸುತ್ತದೆ ಮತ್ತು ಸರ್ಕಾರಕ್ಕೆ ಪಾಠ ಕಲಿಸುತ್ತದೆ ಎಂದು ಮಾಜಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಅವರು ಎಚ್ಚರಿಸಿದರು.