ಬೆಂಗಳೂರು: ದಿವಂಗತ ನಟ ಸಾಹಸ ಸಿಂಹ ವಿಷ್ಣು ವರ್ಧನ್ ಅವರ ಸ್ಮಾರಕವನ್ನು ತೆರವು ಮಾಡುವ ಮೂಲಕ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ನಟ ಬಾಲಕೃಷ್ಣ ಕುಟುಂಬಕ್ಕೆ ಇತ್ತೀಚಿಗೆ ಶಾಕ್ ನೀಡಿದ್ದ ರಾಜ್ಯ ಸರ್ಕಾರ ಅಭಿಮಾನ್ ಸ್ಟುಡಿಯೋಗಾಗಿ ನೀಡಿದ್ದ ಜಾಗವನ್ನು ಅರಣ್ಯ ಭೂಮಿ ಎಂದು ಘೋಷಣೆ ಮಾಡಿದೆ.
ಆದರೆ ಸರ್ಕಾರದ ಆದೇಶ ಲೆಕ್ಕಿಸದೇ ಕಾನೂನು ಹೋರಾಟಕ್ಕೆ ಮುಂದಾಗುವುದಾಗಿ ಬಾಲಣ್ಣನ ಪುತ್ರಿ ಗೀತಾ ಬಾಲಿ ಹೇಳಿದ್ದಾರೆ. ಇದರಿಂದ ಮತ್ತೆ ಸಮಾಧಿ ಆಗುತ್ತದೆ ಎಂದು ಕನಸು ಕಂಡಿದ್ದ ಡಾ. ವಿಷ್ಣುವರ್ಧನ್ ಅಭಿಮಾನಿಗಳಿಗೆ ಮತ್ತೆ ನಿರಾಸೆಯಾಗಿದೆ.
ಹೌದು. ಚಿತ್ರರಂಗದ ಚಟುವಟಿಕೆಗಳಿಗೆ ಪೂರಕವಾಗಲಿ, ಚಿತ್ರರಂಗದವರಿಗೆ ಶೂಟಿಂಗ್ಗೆ ಸಹಾಯಕವಾಗಲಿ ಎಂಬ ಉದ್ದೇಶದಿಂದ ಹಿರಿಯನಟ ಬಾಲಕೃಷ್ಣ ಅವರು ಬೆಂಗಳೂರಿನಲ್ಲಿ ಸ್ಟುಡಿಯೋ ನಿರ್ಮಾಣ ಮಾಡಬೇಕು ಎಂದಾಗ ಸರ್ಕಾರ ಕೂಡಾ ಸಾಥ್ ನೀಡಿ 20 ಎಕರೆ ಜಾಗವನ್ನ ನೀಡಿತ್ತು. ಜಮೀನು ನೀಡುವ ವೇಳೆ ಕೆಲವು ಷರತ್ತುಗಳನ್ನ ವಿಧಿಸಲಾಗಿತ್ತು. ಆ ನಿಯಮಗಳು ಈಗ ಉಲ್ಲಂಘನೆಯಾಗಿದೆ ಎಂದು ಅರಣ್ಯ ಇಲಾಖೆ ಮತ್ತೆ ಆ ಜಮೀನನ್ನು ಹಿಂಪಡೆಯಲು ಆದೇಶಿಸಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದೆ.
ಈ ಹಿಂದೆ ನಿಯಮ ಉಲ್ಲಂಘನೆ ಆಗದೇ ಇರೋದು ಈಗ ಹೇಗೆ ಸಾಧ್ಯ: ಈ ಬೆನ್ನಲ್ಲೇ ಬಾಲಣ್ಣ ಪುತ್ರಿ ಗೀತಾ ಬಾಲಿ ಆ ಜಾಗವನ್ನು ನಾನು ಬಿಟ್ಟು ಕೊಡಲು ಸಿದ್ದವಿಲ್ಲ. ಕಾನೂನು ರೀತಿಯಲ್ಲಿ ಹೋರಾಟ ಮಾಡುತ್ತೇನೆ. 2003 ರಲ್ಲೇ 10 ಎಕರೆ ಮಾರಾಟವಾದ ವೇಳೆ ನಿಯಮ ಉಲ್ಲಂಘನೆ ಆಗದೇ ಇರೋದು ಈಗ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಣ್ಯ ಇಲಾಖೆಗೆ 10 ಎಕರೆ ವಿಸ್ತೀರ್ಣದ ಅಭಿಮಾನ್ ಸ್ಟುಡಿಯೋ ಭೂಮಿಯನ್ನು ಮರಳಿ ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ನಿರ್ದೇಶಿಸಿದೆ ಎಂಬ ಸುದ್ದಿ ನನಲ್ಲಿ ಆಘಾತ ಮೂಡಿಸಿದೆ. ಕಾನೂನು ಬದ್ಧವಾಗಿ ಸರ್ಕಾರಕ್ಕೆ ಈ ಕ್ರಮ ಜರುಗಿಸಲು ಯಾವುದೇ ರೀತಿಯ ಹಕ್ಕಿಲ್ಲ ಎಂದು ಹೇಳಿದರು.
ಸರ್ಕಾರ ಅಥವಾ ಅರಣ್ಯ ಇಲಾಖೆಯು ನನ್ನ ತಂದೆಯ ಸ್ಟುಡಿಯೋ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಯಾವುದೇ ಕಾನೂನುಬದ್ಧ ಹಕ್ಕನ್ನು ಹೊಂದಿಲ್ಲ ಎಂಬುದನ್ನು ದೃಢೀಕರಿಸುವ ದಾಖಲೆಗಳೊಂದಿಗೆ ಸರ್ಕಾರ ಮತ್ತು ಸಾರ್ವಜನಿಕರ ಗಮನಕ್ಕೆ ತರಲು ಉದ್ದೇಶಿಸಿದ್ದೇನೆ. 10 ಎಕರೆ ಮಾರಾಟದಲ್ಲಿ ಫಲಾನುಭವಿಗಳು ವಿಕಸನಗೊಳ್ಳುತ್ತಿದ್ದಾರೆ ಎಂದರು.
10 ಎಕರೆ ಜಾಗ ಮಾರಾಟಕ್ಕೆ ಸರ್ಕಾರದ ಕೈವಾಡ: ಈ ಮೊದಲು ಅಭಿಮಾನ್ ಸ್ಟುಡಿಯೋದ 10 ಎಕರೆ ಜಾಗವನ್ನು ಮಾರಾಟ ಮಾಡಲಾಗಿತ್ತು. ಆ ಕುರಿತು ಪ್ರತಿಕ್ರಿಯಿಸಿದ ಗೀತಾ ಬಾಲಿ, ಆ‘ಜಾಗ ಮಾರಾಟಕ್ಕೆ ಆಗಿನ ಸರ್ಕಾರವೇ ಕೈ ಜೋಡಿಸಿತ್ತು. ನಾನು ಮಾರಾಟ ಮಾಡಿಕೊಂಡಿಲ್ಲ. ಅದು ಸರ್ಕಾರದ ಕೈವಾಡ. 2003ರಲ್ಲಿ ಅವ್ಯವಹಾರ ನಡೆದಿದೆ ಎಂಬುದನ್ನು ಬಹಿರಂಗವಾಗಿ ಹೇಳುತ್ತೇನೆ ಎಂದರು.