ಬೆಂಗಳೂರು: ಇಸ್ಲಾಂ ಎಂದರೆ ಶಾಂತಿ, ಮೊಹಮದ್ ಪ್ರವಾದಿ ಎಂದರೆ ಶಾಂತಿಯ ದೂತ. ಪ್ರವಾದಿ ಅವರು, ಬಸವಣ್ಣ ಅವರಂತೆ ಶಾಂತಿ, ಸಮಾನತೆ, ಬಡತನ ಹೋಗಬೇಕು ಅಂತಾ ಹೇಳಿ ಹೋರಾಟ ಮಾಡಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದರು.
ಅರಮನೆ ಮೈದಾನದಲ್ಲಿ ಮಿಲಾದ್ ಸಮಿತಿ ಆಯೋಜಿಸಿದ್ದ "ಅಂತಾರಾಷ್ಟ್ರೀಯ ಮಿಲಾದುನ್ನಬೀ ಸಮಾವೇಶ"ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪರಧರ್ಮ ಸಹಿಷ್ಣುತೆ ಸಂವಿಧಾನದ ಮೂಲ ಆಶಯವಾಗಿದ್ದು ಸಂವಿಧಾನದ ಪಾಲನೆಯೇ ನಮ್ಮೆಲ್ಲರ ಗುರಿಯಾಗಲಿ. ಪ್ರವಾದಿಯವರ ಬೋಧನೆಗಳು ಮಾನವ ಇತಿಹಾಸದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದವು. ಅವರು ಸಮಸ್ತ ಮಾನವಕೋಟಿಗೆ ನ್ಯಾಯ, ಸಮಾನತೆ ಮತ್ತು ಧಾರ್ಮಿಕ ಸೌಹಾರ್ದದ ಮಾರ್ಗಗಳನ್ನು ತೋರಿಸಿದರು. ಬಸವಣ್ಣನವರ ನೇತೃತ್ವದ ಶರಣ ಚಳವಳಿಯೂ ಕೂಡ ಮಾನವ ಕುಲ ಒಂದೇ ಎನ್ನುವ ಮೌಲ್ಯವನ್ನೇ ಸಾರಿತ್ತು ಎಂದು ಹೇಳಿದರು.
ಪ್ರವಾದಿಗಳು ಶಾಂತಿಯ ಧೂತರು. ಇಡೀ ಮಾನವ ಕುಲ ಶಾಂತಿಗಾಗಿ, ಪರಸ್ಪರತೆ, ಸಹೋದರತ್ವಕ್ಕಾಗಿ ಕೆಲಸ ಮಾಡಬೇಕು ಎನ್ನುವುದು ಪ್ರವಾದಿಗಳ ಬೋಧನೆಯಾಗಿದೆ. ನಮ್ಮ ಸಂವಿಧಾನದ ಮೂಲ ಆಶಯ ಕೂಡ ಭ್ರಾತೃತ್ವ ಮತ್ತು ಪರಧರ್ಮ ಸಹಿಷ್ಣುತೆಯೇ ಆಗಿದೆ. ಆದ್ದರಿಂದ ಸಂವಿಧಾನವನ್ನು ಆಚರಿಸುವುದು, ಪಾಲಿಸುವುದು ನಮ್ಮೆಲ್ಲರ ಗುರಿಯಾಗಲಿ ಎಂದು ತಿಳಿಸಿದರು.