ದಾವಣಗೆರೆ: ಪಶ್ಚಿಮ-ಏಷ್ಯಾ ಯುದ್ಧದಿಂದಾಗಿ ತೈಲ ಆಮದಿನ ಮೇಲೆ ಭಾರೀ ಪರಿಣಾಮ ಬೀರಿದೆ. ಈ ಮಧ್ಯೆ ರಾಜ್ಯದಲ್ಲಿ ಸಿಲಿಂಡರ್, ಆಟೋ ಗ್ಯಾಸ್ ಗಾಗಿ ಗ್ರಾಹಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಸಿಲಿಂಡರ್ ಮತ್ತು ಆಟೋ ಗ್ಯಾಸ್ ಸಮಸ್ಯೆ ವಿಚಾರವಾಗಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ K.H. ಮುನಿಯಪ್ಪ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಎಲ್ಪಿಜಿ ಸಿಲಿಂಡರ್ ಕೇಂದ್ರದ ಸಮಸ್ಯೆ, ಅಗತ್ಯಕ್ಕೆ ತಕ್ಕಂತೆ ಪೂರೈಸುತ್ತಿಲ್ಲ. ಈ ವಿಚಾರವಾಗಿ ಜನತೆಗೆ ಕೇಂದ್ರ ಸರ್ಕಾರ ಪೂರೈಸುತ್ತಿಲ್ಲ ಎಂದು ಹೇಳುವುದನ್ನು ಬಿಟ್ಟು, ಸಚಿವರು ಕೇಂದ್ರ ಸರ್ಕಾರದ ಓಲೈಕೆ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಲಕ್ಷ್ಮಣ್ ಆರೋಪಿಸಿದ್ದಾರೆ. ಆಟೋ ಗ್ಯಾಸ್ ಸಿಗದೆ ಆಟೋ ಚಾಲಕರು ಬಂಕ್ಗಳಲ್ಲಿಯೇ ಮಲಗುವ ಪರಿಸ್ಥತಿ ನಿರ್ಮಾಣವಾಗಿದೆ. ನೀವು ಪದೇ ಪದೇ ಸಭೆಗಳನ್ನು ಮಾಡುತ್ತಿದ್ದರೇ ಅವರೆಲ್ಲ ರಾಜ್ಯ ಸರ್ಕಾರವೇ ಸಿಲಿಂಡರ್ ಪೂರೈಸ್ತಿದೆ ಎಂದು ತಿಳಿಯುತ್ತಾರೆ. ಅದು ರಾಜ್ಯ ಸರ್ಕಾರದ ಮೇಲೆ ವ್ಯತಿರೀಕ್ತ ಭಾವನೆ ಮೂಡುವಂತೆ ಮಾಡುತ್ತದೆ.
ನೀವು ಹಿರಿಯ ಸಚಿವರಾಗಿದ್ದು ಏಳು ಬಾರಿ ಸಂಸದರಾಗಿ ಆಯ್ಕೆಯಾಗಿದ್ದೀರಾ. ನೀವು ಪದೇ ಪದೇ ಅಧಿಕಾರಿಗಳ ಜೊತೆ ಸಭೆ ಮಾಡುವುದನ್ನು ಬಿಟ್ಟು ಬಾಯಿ ಮುಚ್ಚಿಕೊಂಡು ಇದ್ದರೆ ಚಂದ ಎಂದು ಲಕ್ಷ್ಮಣ್ ಹೇಳಿದ್ದಾರೆ.