ಬೆಂಗಳೂರು: ಗೌರವ ಡಾಕ್ಟರೇಟ್ (honorary doctorates) ನೀಡುವ ಕುರಿತು ಡಾ. ಮನಮೋಹನ್ ಸಿಂಗ್ ಬೆಂಗಳೂರು ಸಿಟಿ ವಿಶ್ವವಿದ್ಯಾಲಯ ಕೈಗೊಂಡ ನಿರ್ಧಾರ ವಿವಾದಕ್ಕೆ ಕಾರಣವಾಗಿದೆ. ಐದನೇ ಘಟಿಕೋತ್ಸವ ಸಮಾರಂಭದಲ್ಲಿ ಪ್ರಕಟಿಸಿದ ಆಯ್ಕೆ ಪಟ್ಟಿಗೆ ವಿರೋಧ ವ್ಯಕ್ತವಾಗುತ್ತಿದೆ.
ಈ ವರ್ಷ ವಿಶ್ವವಿದ್ಯಾಲಯವು ಒಟ್ಟು 14 ಮಂದಿಯ ಹೆಸರನ್ನು ಶಿಫಾರಸು ಮಾಡಿದ್ದು, ಅಂತಿಮವಾಗಿ ಆರು ಮಂದಿಗೆ ಗೌರವ ಡಾಕ್ಟರೇಟ್ ನೀಡಲು ಆಯ್ಕೆ ಮಾಡಲಾಗಿದೆ.
ಕ್ರಿಕೆಟ್ ಕ್ಷೇತ್ರದಲ್ಲಿ ಬಿ.ಕೆ. ವೆಂಕಟೇಶ್ ಪ್ರಸಾದ್, ಸಂಗೀತ ಕ್ಷೇತ್ರದಲ್ಲಿ ಅರ್ಜುನ್ ಜನ್ಯ, ಶಿಕ್ಷಣ ಕ್ಷೇತ್ರದಲ್ಲಿ ಟಿ.ಕೆ. ನಾರಾಯಣಪ್ಪ ಮತ್ತು ಡಾ. ಮೋಹನ್ ಆಳ್ವ, ಕ್ರೀಡಾ ಆಡಳಿತದಲ್ಲಿ ಡಾ. ಕೆ. ಗೋವಿಂದರಾಜ್ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ಬಿ.ಎಂ. ಫಾರೂಕ್ ಹೆಸರುಗಳು ಅಂತಿಮಗೊಂಡಿವೆ.
ಆದರೆ, ಈ ಆಯ್ಕೆ ಕುರಿತು ಸಿಂಡಿಕೇಟ್ ಸದಸ್ಯರಲ್ಲೇ ಅಸಮಾಧಾನ ವ್ಯಕ್ತವಾಗಿದ್ದು, ಕೆಲವು ಸದಸ್ಯರು ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆದು ಸಮಾರಂಭ ಬಹಿಷ್ಕಾರ ಮಾಡುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಈ ನಡುವೆ ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕೊರತೆ ಇದೆ ಎಂಬ ಆರೋಪಗಳೂ ಕೂಡ ಕೇಳಿಬರುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿದ ಕುಲಪತಿ ರಮೇಶ್ ಬಿ ಅವರು, "ಅಂತಹ ಯಾವುದೇ ಅಸಮಾಧಾನವಿಲ್ಲ, ಆದರೆ ಗೌರವ ಡಾಕ್ಟರೇಟ್ಗೆ ಜನರನ್ನು ಆಯ್ಕೆ ಮಾಡಲು ಪಾರದರ್ಶಕ ಪ್ರಕ್ರಿಯೆಯನ್ನು ಅನುಸರಿಸಲು ಸಿಂಡಿಕೇಟ್ ಸದಸ್ಯರಿಂದ ನಮಗೆ ಸಲಹೆಗಳು ಬಂದಿವೆ. ನಾವು ಕೆಲವು ಶಿಷ್ಟಾಚಾರಗಳನ್ನು ಅನುಸರಿಸುತ್ತೇವೆ ಮತ್ತು ಮುಂದಿನ ಶೈಕ್ಷಣಿಕ ವರ್ಷದಿಂದ ಅವುಗಳನ್ನು ಜಾರಿಗೆ ತರುತ್ತೇವೆ ಎಂದು ಹೇಳಿದ್ದಾರೆ.
ಆಯ್ಕೆ ಪ್ರಕ್ರಿಯೆಯಲ್ಲಿ ರಾಜ್ಯಪಾಲರ ಕಚೇರಿಯ ಪ್ರತಿನಿಧಿ, ಸಿಂಡಿಕೇಟ್ ಸದಸ್ಯರು ಹಾಗೂ ವಿಷಯ ತಜ್ಞರು ಭಾಗಿಯಾಗಿದ್ದಾರೆ. ಯಾವುದೇ ಪಕ್ಷ ಅಥವಾ ಮಂತ್ರಿಗಳಿಂದ ರಾಜಕೀಯ ಒತ್ತಡವಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.
ಇದರ ಜೊತೆಗೆ, ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಗೌರವ ಡಾಕ್ಟರೇಟ್ ನೀಡುವ ಕ್ರಮವನ್ನು ಏಕರೂಪಗೊಳಿಸಲು ಮಾನದಂಡಗಳನ್ನು ರೂಪಿಸುವ ಬಗ್ಗೆ ಚರ್ಚೆ ನಡೆದಿದ್ದು, ಈ ಕುರಿತು ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಮತ್ತು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳನ್ನು (SOPs) ರೂಪಿಸುವುದಾಗಿ ತಿಳಿಸಿರುವುದಾಗಿ ಕುಲಪತಿಗಳು ಹೇಳಿದರು.