ಮಡಿಕೇರಿ: ಜಿಲ್ಲೆಯ ಮಡಿಕೇರಿ ತಾಲೂಕಿನ ಕಕ್ಕಬ್ಬೆ ಗ್ರಾಮದಲ್ಲಿ ಟ್ರೆಕ್ಕಿಂಗ್ಗೆ ತೆರಳಿದ್ದ ಕೇರಳ ಮೂಲದ ಯುವತಿ ನಾಪತ್ತೆಯಾಗಿ ಮೂರು ದಿನಗಳಾದರೂ ಇನ್ನೂ ಪತ್ತೆಯಾಗಿಲ್ಲ. ಎರ್ನಾಕುಲಂನಲ್ಲಿ ಐಟಿ ಉದ್ಯೋಗಿಯಾಗಿರುವ ಕೇರಳದ ಕೋಯಿಕ್ಕೋಡ್ ನಿವಾಸಿ 35 ವರ್ಷದ ಶರಣ್ಯಾ ಕಕ್ಕಬ್ಬೆ ಗ್ರಾಮದ ಹೋಂಸ್ಟೇಯೊಂದರಿಂದ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆಂದು ತೆರಳಿದ್ದಳು.
ಬೆಳಗ್ಗೆ 8.30ರ ಸುಮಾರಿಗೆ ಟ್ರೆಕ್ಕಿಂಗ್ಗೆ ತೆರಳಲು ಅರಣ್ಯ ಇಲಾಖೆಯ ಚೆಕ್ಪೋಸ್ಟ್ ಬಳಿ ಈಕೆ ಬಂದಿದ್ದಳು. ಒಬ್ಬೊಬ್ಬರನ್ನೇ ಟ್ರೆಕ್ಕಿಂಗ್ ಬಿಡದ ಕಾರಣ ಬೇರೊಂದು ಗ್ರೂಪ್ ಬಂದ ಬಳಿಕ ಅವರ ಜೊತೆ ಈಕೆಯನ್ನು ಕಳುಹಿಸಲಾಗಿತ್ತು. ಆದರೆ ಶರಣ್ಯಾ ಬೆಟ್ಟದಿಂದ ವಾಪಸ್ ಬಾರದ ಕಾರಣ, ಆಕೆಗಾಗಿ ಕಳೆದ ಮೂರು ದಿನಗಳಿಂದ ಶೋಧ ನಡೆಯುತ್ತಿದೆ.
ಬೆಳಗ್ಗೆ ಟ್ರೆಕ್ಕಿಂಗ್ಗೆಂದು ತೆರಳಿದ್ದವರು ಮಧ್ಯಾಹ್ನ 1.30ರ ವೇಳೆಗೆ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ಬಳಿ ಹಿಂದಿರುಗಬೇಕಿತ್ತು. ಹೀಗಾಗಿ ಶರಣ್ಯಾಳನ್ನು ಕರೆದೊಯ್ಯಲೆಂದು ಹೋಮ್ ಸ್ಟೇ ಮಾಲೀಕ ತಮ್ಮ ಸ್ಕೂಟಿ ಸಮೇತ ಸ್ಥಳಕ್ಕೆ ಬಂದಿದ್ದರು. ಆ ಬಳಿಕ ಶರಣ್ಯಾಗೆ ಅವರು ಕರೆ ಮಾಡಿದಾಗ ಮೊದಲು ನಾಟ್ ರೀಚೇಬಲ್ ಬಂದಿದೆ.
ಮತ್ತೆರಡು ಬಾರಿ ಪ್ರಯತ್ನಿಸಿದಾಗ ಕರೆ ಸ್ವೀಕರಿಸಿದ ಆಕೆ, ತಾನು ದಾರಿ ತಪ್ಪಿದ್ದೇನೆ ಎಂದು ಹೇಳಿದ್ದಾಳೆ. ಅಷ್ಟರಲ್ಲಿ ಫೋನ್ ಕಟ್ ಆಗಿದೆ. ಅದಾದ ಬಳಿಕ ಫೋನ್ ಮತ್ತೆ ಕನೆಕ್ಟ್ ಆಗಿಲ್ಲ. ಕೂಡಲೇ ಅವರು ವಿಷಯವನ್ನು ಅರಣ್ಯ ಇಲಾಖೆಗೆ ತಿಳಿಸಿದ್ದು, ಎಲ್ಲರೂ ಸೇರಿ ಸಂಜೆ ಬೆಟ್ಟದ ಮೇಲೆ ಹೋಗಿದ್ದಾರೆ. ಅದರೆ ಯುವತಿ ಸಿಕ್ಕಿಲ್ಲ. ಹಾಗಾಗಿ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಸಿಬ್ಬಂದಿ ಸೇರಿ ಸ್ಥಳೀಯರೆಲ್ಲರೂ ಯುವತಿಗಾಗಿ ಹುಡುಕಿದ್ದಾರೆ. ಮೂರು ದಿನಗಳಿಂದ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದರೂ ಪತ್ತೆಯಾಗಿಲ್ಲ.
ನಕ್ಸಲ್ ನಿಗ್ರಹ ಪಡೆಯಿಂದ ಹುಡುಕಾಟ
ತಾಡಿಯಂಡಮೋಳ್ನಲ್ಲಿ ಟ್ರೆಕ್ಕಿಂಗ್ ವೇಳೆ ಮಹಿಳೆ ಕಾಣೆಯಾಗಿರುವ ರಹಸ್ಯ ಇನ್ನೂ ಭೇದವಾಗದಿರುವ ಹಿನ್ನೆಲೆಯಲ್ಲಿ, ಶೋಧ ಕಾರ್ಯಾಚರಣೆಗೆ ನಕ್ಸಲ್ ನಿಗ್ರಹ ಪಡೆಯನ್ನು (ANF) ಅಧಿಕಾರಿಗಳು ಕಾರ್ಯಾಚರಣೆಗೆ ಸೇರಿಸಿಕೊಂಡಿದ್ದಾರೆ. ತಾಡಿಯಂಡಮೋಳ್ ಟ್ರೇಲ್ನ ಸಂಪೂರ್ಣ ಪ್ರದೇಶವನ್ನು ಶೋಧ ತಂಡ ತಪಾಸಣೆ ನಡೆಸುತ್ತಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.
ಕೊಚ್ಚಿ ಮೂಲದ ಸಾಫ್ಟ್ವೇರ್ ವೃತ್ತಿಪರರಾದ ಶರಣ್ಯ ಜಿ.ಎಸ್ (36ವ) ಅವರು ಏಪ್ರಿಲ್ 2ರಂದು ತಾಡಿಯಂಡಮೋಳ್ ಬೆಟ್ಟದಲ್ಲಿ ಕಾಣೆಯಾಗಿದ್ದಾರೆ. ಯವಕಪಾಡಿ ಎಂಬ ಹೋಂಸ್ಟೇನಲ್ಲಿ ತಂಗಿದ್ದ ಅವರು, ಏಪ್ರಿಲ್ 2ರಂದು ಮಧ್ಯಾಹ್ನ ಹೋಂಸ್ಟೇ ಮಾಲೀಕರಿಗೆ ಕರೆ ಮಾಡಿ ತಾನು ದಾರಿ ತಪ್ಪಿದ್ದರಿಂದ ತಡವಾಗಬಹುದು ಎಂದು ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಆ ಕರೆ ನಂತರ ಅವರ ಮೊಬೈಲ್ ನೆಟ್ವರ್ಕ್ ವ್ಯಾಪ್ತಿಯಿಂದ ಹೊರಬಂದಿದೆ.
ನಿನ್ನೆ ಶೋಧ ಕಾರ್ಯವನ್ನು ವಿಸ್ತರಿಸಿ ಅರಣ್ಯ ಸಿಬ್ಬಂದಿ, ಪೊಲೀಸರು ಮತ್ತು ಸ್ಥಳೀಯರನ್ನು ಒಳಗೊಂಡ ಐದು ತಂಡಗಳನ್ನು ರಚಿಸಲಾಗಿದೆ. ಕಾರ್ಯಾಚರಣೆಯನ್ನು ತೀವ್ರಗೊಳಿಸಲು ಎಎನ್ಎಫ್ ತಂಡವನ್ನೂ ನಿಯೋಜಿಸಲಾಗಿದೆ. ಮಡಿಕೇರಿ ವಿಭಾಗೀಯ ಅರಣ್ಯಾಧಿಕಾರಿ (DCF) ಅಭಿಷೇಕ್ ಅವರು, ತಾಡಿಯಂಡಮೋಳ್ ಬೆಟ್ಟದ ಒಂದು ಭಾಗದಲ್ಲಿ ಜನವಸತಿ ಇರುವುದರಿಂದ ಟ್ರೆಕ್ಕಿಂಗ್ ಸಾಮಾನ್ಯವಾಗಿ ಅಲ್ಲಿ ಆರಂಭವಾಗುತ್ತದೆ. ಇನ್ನೊಂದು ಭಾಗವು ದಟ್ಟ ಅರಣ್ಯ ಪ್ರದೇಶವಾಗಿದ್ದು ‘ಪಟ್ಟಿಘಾಟ್ ರಿಸರ್ವ್ ಫಾರೆಸ್ಟ್’ ಎಂದು ಕರೆಯಲಾಗುತ್ತದೆ ಎಂದು ವಿವರಿಸಿದರು.
ಶರಣ್ಯ ಅವರ ಸಹೋದರ ಶ್ಯಾಮ್ ತಾಡಿಯಂಡಮೋಳ್ ಮಡಿಕೇರಿಗೆ ಆಗಮಿಸಿದ್ದಾರೆ. ಕಳೆದ ಎರಡು ತಿಂಗಳಿನಿಂದ ಅವರು ತಮ್ಮ ನಾದಾಪುರಂ ಮನೆಯವರಿಗೆ ಹೋಗಿರಲಿಲ್ಲ, ಕೊಡಗು ಪ್ರವಾಸದ ಬಗ್ಗೆ ಕುಟುಂಬಕ್ಕೆ ಮಾಹಿತಿ ನೀಡಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.