ಭಟ್ಕಳ: ದೇಶದಾದ್ಯಂತ ಎಲ್ಪಿಜಿ ಗ್ಯಾಸ್ ಕೊರತೆ ತೀವ್ರವಾಗುತ್ತಿದ್ದು, ಸಾಮಾನ್ಯ ಜನತೆ ಸಂಕಷ್ಟ ಅನುಭವಿಸುತ್ತಿದ್ದಾರೆ. ದಿನ ಬೆಳಗಾದರೆ ಗ್ಯಾಸ್ ಏಜೆನ್ಸಿಗಳ ಮುಂದೆ ಗ್ರಾಹಕರು ಸರತಿ ಸಾಲಿನಲ್ಲಿ ನಿಂತು ಸಿಲಿಂಡರ್ ಪಡೆಯಲು ಪರದಾಡುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ.
ಇದೇ ವೇಳೆ ಭಟ್ಕಳದಲ್ಲಿ ನವ ದಂಪತಿಗೆ ಸಂಬಂಧಿಕರೊಬ್ಬರು ಎಲ್ಪಿಜಿ ಸಿಲಿಂಡರ್ ಉಡುಗೊರೆಯಾಗಿ ನೀಡಿದ ಘಟನೆ ಭಾರೀ ಸಂಚಲನ ಮೂಡಿಸಿದೆ. ವಿವೇಕ್ ಮಹಾಲೆ ಮತ್ತು ನಾಗಸಂಧ್ಯಾ ಶಾಂತಿ ಅವರಿಗೆ ಎಲ್ಪಿಜಿ ಸಿಲಿಂಡರ್ ಉಡುಗೊರೆಯಾಗಿ ನೀಡಲಾಗಿದೆ.
ಆದರೆ ಗ್ಯಾಸ್ ಸಿಲಿಂಡರ್ ಅನ್ನು ಉಡುಗೊರೆಯಾಗಿ ನೀಡುವುದನ್ನು ಜನರು ಫೋಟೋ ತೆಗೆದು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪೋಸ್ಟ್ ಮಾಡಿದ ನಂತರ ದಂಪತಿಗೆ ಸಂಕಷ್ಟ ಎದುರಾಗಿದೆ. ತಾಲ್ಲೂಕು ಆಡಳಿತವು ವರನಿಗೆ ನೋಟಿಸ್ ನೀಡಿದೆ.
ಉತ್ತರ ಕನ್ನಡದಲ್ಲಿ ಎಲ್ಪಿಜಿ ಸಿಲಿಂಡರ್ಗಳ ತೀವ್ರ ಕೊರತೆ ಕಂಡುಬಂದಿದ್ದು ತಾಲ್ಲೂಕು ಆಡಳಿತವು ವಿವರಣೆ ಕೋರಿ ವರನಿಗೆ ನೋಟಿಸ್ ಕಳುಹಿಸಿದೆ ಎಂದು ದಂಪತಿಯ ಸಂಬಂಧಿಕರು ತಿಳಿಸಿದ್ದಾರೆ. ಮದುವೆ ನಂತರ ವರ ತಿರುಪತಿಗೆ ಹೋಗಿದ್ದಾರೆ. ಆದರೆ ಸುದ್ದಿ ತಲುಪಿದ ನಂತರ ಅವರು ಅಸಮಾಧಾನಗೊಂಡಿದ್ದಾರೆ ಎಂದು ಸಂಬಂಧಿಕರೊಬ್ಬರು ಹೇಳಿದರು.
ಭಟ್ಕಳ ತಹಶೀಲ್ದಾರ್ ನಾಗೇಂದ್ರ ಕೊಲಶೆಟ್ಟಿ ಅವರು ಮದುವೆಯಲ್ಲಿ ಎಲ್ಪಿಜಿ ಸಿಲಿಂಡರ್ ಉಡುಗೊರೆಯಾಗಿ ನೀಡಿದ ಬಗ್ಗೆ ತಾನು ಎಂದಿಗೂ ಕೇಳಿಲ್ಲ ನಮಗೆ ಆಶ್ಚರ್ಯವಾಗಿದೆ ಎಂದು ಹೇಳಿದ್ದಾರೆ.
ಭಟ್ಕಳ ತಾಲ್ಲೂಕಿನಲ್ಲಿ ಎಲ್ಪಿಜಿ ಸಿಲಿಂಡರ್ಗಳ ಕೊರತೆಯಿಲ್ಲ. ಆದರೆ ಗ್ಯಾಸ್ ಸಿಲಿಂಡರ್ ಗಿಫ್ಟ್ ಮಾಡಲು ಸಾಧ್ಯವಿಲ್ಲ ಮತ್ತು ಮಾಡಬಾರದು. ಈ ಸಂಬಂಧ ನಾನು ಆಹಾರ ನಿರೀಕ್ಷಕರಿಂದ ವರದಿ ಕೇಳಿದ್ದೇನೆ. ಆಹಾರ ನಿರೀಕ್ಷಕರು ಇಂದು ವರದಿಯನ್ನು ಕಳುಹಿಸುತ್ತಾರೆ. ಇದೇ ವರದಿಯನ್ನು ಕಾರವಾರದ ಜಿಲ್ಲಾಡಳಿತಕ್ಕೆ ಕಳುಹಿಸಲಾಗುವುದು ಎಂದು ಅವರು ಟಿಎನ್ಐಇಗೆ ತಿಳಿಸಿದರು.