ಬೆಂಗಳೂರು: ಡಿಸಿಆರ್ಇ ಇನ್ಸ್ಪೆಕ್ಟರ್ಗೆ ಮೇಲಧಿಕಾರಿಗಳ ಕಿರುಕುಳ ಆರೋಪ ಮತ್ತು ಮಂಗಳೂರು ನಗರ ಪೊಲೀಸ್ ಕಮಿಷನರ್ ವಿರುದ್ಧ ಡಿಜಿಪಿಗೆ ಎಸ್ಪಿ ಪತ್ರ ಬರೆದಿರುವ ಕುರಿತು ವರದಿ ನೀಡುವಂತೆ ಸೂಚನೆ ನೀಡಿದ್ದೇನೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ವರದಿ ಅಗಿರುವುದನ್ನು ಗಮನಿಸಿದ್ದೇನೆ. ಡಿಸಿಆರ್ಇ ಇನ್ಸ್ಪೆಕ್ಟರ್ ಶ್ರೀನಿವಾಸ್ ಎಂಬುವರು ಸಾಕಷ್ಟು ಆರೋಪಗಳನ್ನು ಮಾಡಿದ್ದಾರೆ. ಈ ಸಂಬಂಧ ಎಸ್ಪಿ ಕಾಶಿನಾಥ್ ಪತ್ರ ಬರೆದಿದ್ದಾರೆ ಎಂದರು.
ಈ ಎರಡು ಪ್ರಕರಣಗಳ ಕುರಿತು ಡಿಜಿಪಿಯವರನ್ನು ವರದಿ ಕೇಳಿದ್ದೇನೆ. ವರದಿ ಬಳಿಕ ಸತ್ಯಾಸತ್ಯತೆಯನ್ನು ಆಧರಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಶಾಸಕ ಹ್ಯಾರಿಸ್ ಮನೆ ಮೇಲೆ ಇಡಿ ದಾಳಿ: ಇನ್ನೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶಾಸಕರಾದ ಎನ್.ಎ.ಹ್ಯಾರೀಸ್ ಅವರ ಮಕ್ಕಳ ನಿವಾಸಗಳ ಮೇಲೆ ದಾಳಿ ಕುರಿತು ಪ್ರತಿಕ್ರಿಯಿಸಿದ ಸಚಿವರು, ಯಾವ ವಿಚಾರಕ್ಕೆ ದಾಳಿ ನಡೆಸಿದ್ದಾರೆ, ಏನೆಲ್ಲ ಸಿಕ್ಕಿದೆ ಎಂಬುದನ್ನು ಇಡಿ ಅಧಿಕಾರಿಗಳು ಮಾಹಿತಿ ನೀಡಬೇಕು. ಸಾಮಾನ್ಯವಾಗಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡುತ್ತಾರೆ. ಅಲ್ಲಿಯವರೆಗೂ ಕಾಯಬೇಕು. ಇದರ ನಡುವೆ ನಾವು ಹೇಳಿಕೆಗಳನ್ನು ಕೊಟ್ಟರೆ ಅಪ್ರಸ್ತುತ ಆಗುತ್ತದೆ ಎಂದರು.
ಬಿಟ್ಕಾಯಿನ್ ಹಗರಣ ಕುರಿತಂತೆ ರಾಜ್ಯದಲ್ಲಿ ಎಸ್ಐಟಿ ರಚನೆ ಮಾಡಲಾಗಿತ್ತು. ತನಿಖೆ ಕೊನೆ ಹಂತದಲ್ಲಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವ್ಯಾಪ್ತಿ ಹೊಂದಿದೆ. ಅನೇಕ ವಿಚಾರಗಳಲ್ಲಿ ಮಾಹಿತಿಯನ್ನು ಕಲೆ ಹಾಕಿ ಅಂತಿಮ ವರದಿ ಕೊಡಬೇಕು. ಅಂತಿಮ ಹಂತದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಗತ್ಯ ಮಾಹಿತಿ ಸಿಗುವವರೆಗೂ ತನಿಖೆ ನಡೆಸುತ್ತಾರೆ. ಟೆಕ್ನಿಕಲ್ ಆಗಿರುವುದರಿಂದ ಮಾಹಿತಿಗಳನ್ನು ಕಲೆ ಹಾಕುವುದರಲ್ಲಿ ವಿಳಂಬ ಅಗಿದೆ ಎಂದು ಅನ್ನಿಸುತ್ತದೆ. ಶೀಘ್ರವಾಗಿ ಪೂರ್ಣಗೊಳಿಸಿ, ಮಧ್ಯಂತರ ಚಾರ್ಜ್ಶೀಟ್ ಸಲ್ಲಿಸಲು ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿಯವರು ಪೊಲೀಸ್ ಇಲಾಖೆಯಿಂದ ಮಾಹಿತಿ ತೆಗೆದುಕೊಂಡಿದ್ರೆ ನಾನೇನು ಹೇಳಲು ಆಗಲ್ಲ. ಅವರಿಗೆ ಮಾಹಿತಿ ತೆಗೆದುಕೊಳ್ಳಲು ಅಧಿಕಾರ ಇದೆ. ಇದೇ ವಿಚಾರದಲ್ಲಿ ಮಾಹಿತಿ ತೆಗೆದುಕೊಂಡಿರಬಹುದು. ಈ ವಿಚಾರ ಅಲ್ಲ, ಬೇರೆ ವಿಚಾರ ಇದ್ರೂ ಇಡಿಯವರೇ ಹೇಳಬೇಕಾಗುತ್ತದೆ ಎಂದರು.
ಹ್ಯಾಕರ್ ಶ್ರೀಕಿ ಜೊತೆಗೆ ಪ್ರಭಾವಿಗಳು ಸಂಪರ್ಕ ಹೊಂದಿರುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಈ ವಿಚಾರದಲ್ಲಿ ತನಿಖೆಯಾದ್ರೆ ಎಲ್ಲವೂ ಹೊರಗೆ ಬರುತ್ತದೆ. ಯಾರೆಲ್ಲ ಸಂಪರ್ಕದಲ್ಲಿದ್ದರೂ, ಅವರ ಪಾತ್ರ ಏನು ಅನ್ನುವುದೆಲ್ಲ ಗೊತ್ತಾಗುತ್ತದೆ. ನಾವು ಮಾತಾಡುವುದಕ್ಕು, ತನಿಖೆಯಲ್ಲಿ ಗೊತ್ತಾಗುವ ವಿಚಾರಗಳು ಬೇರೆ ಬೇರೆ ಇರುತ್ತದೆ. ಅನೇಕ ಸಂದರ್ಭಗಳಲ್ಲಿ ನಾವು ರಾಜಕೀಯವಾಗಿ ಏನೇನೋ ಮಾತಾಡಿರುತ್ತೇವೆ, ಅದು ತನಿಖೆಯಲ್ಲಿ ಹೊರಬರಬೇಕಲ್ಲವೇ ಎಂದರು.
ಮುಸ್ಲಿಂ ನಾಯಕರು ಪಕ್ಷದ ವರಿಷ್ಟರಿಗೆ ಪತ್ರ ಬರೆದಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು ಸತ್ಯಾಸತ್ಯತೆಯನ್ನು ಪರಿಶೀಲನೆ ಮಾಡುತ್ತಾರೆ. ಈ ಬಗ್ಗೆ ರಾಹುಲ್ ಗಾಂಧಿ ಅವರು ಸೂಚನೆ ನೀಡುತ್ತಾರೆ. ನಾವು ಯಾವತ್ತು ಕೂಡ ಚುನಾವಣೆಗಳಲ್ಲಿ ಸ್ಪರ್ಧಿಸಲು ಮುಸ್ಲಿಂ ಸಮುದಾಯದವರಿಗೆ ಪ್ರಾಧಾನ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ಸಾಮಾನ್ಯವಾಗಿ ಕಾಂಗ್ರೆಸ್ ಪಕ್ಷದಲ್ಲಿ ಮೃತಪಟ್ಟ ಕುಟುಂಬದವರಿಗೆ ಟಿಕೆಟ್ ನೀಡುವ ಪದ್ಧತಿ ಇದೆ. ಇದನ್ನು ಬೇರೆ ರೀತಿ ಅರ್ಥೈಸಿಕೊಳ್ಳಲಾಗಿದೆ. ಮತದಾರರು ಜಾಸ್ತಿ ಇದ್ದೇವೆ ಎಂದು ಟಿಕೆಟ್ ಕೇಳಿದ್ದಾರೆ. ಅದು ಕೂಡ ತಪ್ಪಲ್ಲ. ಕಾರಣಾಂತರಗಳಿಂದ ಶಿವಶಂಕರಪ್ಪ ಅವರ ಮನೆಯವರಿಗೆ ಟಿಕೆಟ್ ಕೊಟ್ಟಿರುವುದನ್ನು ಬೇರೆ ರೀತಿ ಅರ್ಥೈಸಿಕೊಳ್ಳುವುದು ಸರಿಯಲ್ಲ. ಇದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ. ಪಕ್ಷದ ಅಧ್ಯಕ್ಷರು, ಮುಖ್ಯಮಂತ್ರಿಗಳು ಸೇರಿದಂತೆ ನಾವೆಲ್ಲ ಸರಿಪಡಿಸುತ್ತೇವೆ ಎಂದು ಹೇಳಿದರು.