ಬೆಂಗಳೂರು: ನಗರದ ಹೃದಯಭಾಗ ರಾಜ್ಯದ ಆಡಳಿತ ಶಕ್ತಿ ಕೇಂದ್ರ ವಿಧಾನ ಸೌಧ ಮುಂದೆ ಇಂದು ಮುಂಜಾನೆಯಿಂದ TCS ವರ್ಲ್ಡ್ 10K ಮ್ಯಾರಥಾನ್ ನಡೆಯುತ್ತಿದೆ. ಸುಮಾರು 30,000ಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇರುವ ಹಿನ್ನೆಲೆ ಬೆಳಗ್ಗೆ 5 ಗಂಟೆಯಿಂದ 11 ಗಂಟೆಯವರೆಗೆ ವಿವಿಧ ರಸ್ತೆಗಳಲ್ಲಿ ಸಂಚಾರವನ್ನು ನಿರ್ಭಂಧಿಸಲಾಗಿದೆ.
ಮಾರ್ಗ ಬದಲಾವಣೆ ಜೊತೆಗೆ ನೋ-ಪಾರ್ಕಿಂಗ್ ನಿಯಮಗಳನ್ನು ಬೆಂಗಳೂರು ಟ್ರಾಫಿಕ್ ಪೊಲೀಸರು ಜಾರಿಗೊಳಿಸಿದ್ದಾರೆ. ಮ್ಯಾರಥಾನ್ RSAOI ಮೈದಾನದಿಂದ ಆರಂಭವಾಗಿ ಅಲ್ಲಿಯೇ ಮುಕ್ತಾಯವಾಗಲಿದೆ. ಕಬ್ಬನ್ ರಸ್ತೆ, ಕಾಮರಾಜ್ ರಸ್ತೆ, ರಾಜಭವನ ರಸ್ತೆ ಹಾಗೂ ಅಂಬೇಡ್ಕರ್ ರಸ್ತೆಗಳಲ್ಲಿ ಮ್ಯಾರಥಾನ್ ನಡೆಯಲಿದ್ದು, ಹಲಸೂರು, ಫ್ರೇಸರ್ ಟೌನ್ ಮತ್ತು ಶಿವಾಜಿನಗರ ಪ್ರದೇಶಗಳ ಮೂಲಕ ಸಾಗಲಿದೆ.
ಯಾವೆಲ್ಲ ರಸ್ತೆಗಳು ಬಂದ್
ಕಬ್ಬನ್ ರಸ್ತೆ: ಸಿಟಿಒ ಜಂಕ್ಷನ್ನಿಂದ ಮಣಿಪಾಲ್ ಸೆಂಟರ್ ವರೆಗೆ ಸಂಚಾರಕ್ಕೆ ಅವಕಾಶ ಇಲ್ಲ
ವಿಧಾನಸೌಧದ ಕಡೆ ಎಲ್ಲಾ ವಾಹನಗಳಿಗೆ ಸಂಪೂರ್ಣ ನಿರ್ಬಂಧ
ಇತರೆ ಮಾರ್ಗಗಳು: ಸೇಂಟ್ ಜಾನ್ಸ್ ರಸ್ತೆ (ಡಿಕನ್ಸನ್ ರಸ್ತೆದಿಂದ ವೀರಪಿಳ್ಳೈ ಸ್ಟ್ರೀಟ್), ಕಾಮರಾಜ್ ರಸ್ತೆ, ಇನ್ಫ್ಯಾಂಟ್ರಿ ರಸ್ತೆ ಹಾಗೂ ಲೇಡಿ ಕರ್ಝನ್ ರಸ್ತೆಯ ಕೆಲವು ಭಾಗಗಳು ಕ್ಲೋಸ್ ಇರಲಿವೆ.
ಸಂಚಾರಕ್ಕೆ ಪರ್ಯಾಯ ಮಾರ್ಗಗಳು
ಕ್ವೀನ್ಸ್ ರಸ್ತೆಯಿಂದ ವಾಹನಗಳು ಬಾಳೆಕುಂದ್ರಿ ಜಂಕ್ಷನ್ ಮಾರ್ಗವಾಗಿ ಕನ್ನಿಂಗ್ಹ್ಯಾಮ್ ರಸ್ತೆ ಮೂಲಕ ಚಾಲುಕ್ಯ ಸರ್ಕಲ್ನಿಂದ ಮೆಜೆಸ್ಟಿಕ್/ಸಿಟಿ ಮಾರ್ಕೆಟ್ ಕಡೆ ಸಂಚರಿಸಬೇಕು
ಶಿವಾಜಿನಗರ ಬಸ್ ನಿಲ್ದಾಣದಿಂದ ಮೆಜೆಸ್ಟಿಕ್/ಕೆ.ಆರ್. ಮಾರ್ಕೆಟ್ ಕಡೆಗೆ ಹೋಗುವ ಬಸ್ಗಳು ವೆಂಕಟಸ್ವಾಮಿ ನಾಯ್ಡು ರಸ್ತೆ ಮತ್ತು ಕನ್ನಿಂಗ್ಹ್ಯಾಮ್ ರಸ್ತೆಯ ಮೂಲಕ ಸಾಗುವುದು
ಎಂಜಿ ರಸ್ತೆದಿಂದ ಹಲಸೂರು ಕಡೆಗೆ ಹೋಗುವವರು ವೆಬ್ಸ್ ಜಂಕ್ಷನ್, ಟ್ರಿನಿಟಿ ಜಂಕ್ಷನ್ ಮತ್ತು ಸ್ವಾಮಿ ವಿವೇಕಾನಂದ ರಸ್ತೆ ಬಳಸಿ ಸಾಗಬೇಕು
ಭಾರಿ ವಾಹನಗಳಿಗೆ ಸಿಬಿಡಿ ಪ್ರದೇಶಕ್ಕೆ ಪ್ರವೇಶವಿಲ್ಲ. ಹಳೆ ಮದ್ರಾಸ್ ರಸ್ತೆಯಿಂದ ಬರುವವರು ಎನ್ಜಿಇಎಫ್ ಜಂಕ್ಷನ್, ಸುರಂಜನ್ ದಾಸ್ ರಸ್ತೆ ಮೂಲಕ ಓಲ್ಡ್ ಏರ್ಪೋರ್ಟ್ ರಸ್ತೆಗೆ ಹೋಗಬೇಕು
ಕಸ್ತೂರ್ ಬಾ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ ಮತ್ತು ಕಬ್ಬನ್ ಪಾರ್ಕ್ ಸುತ್ತಮುತ್ತ ನೋ-ಪಾರ್ಕಿಂಗ್ ಜೋನ್ ಆಗಿರುತ್ತದೆ. ಮ್ಯಾರಥಾನ್ನಲ್ಲಿ ಭಾಗವಹಿಸುವವರು ಮತ್ತು ಪ್ರೇಕ್ಷಕರು ಯುಬಿ ಸಿಟಿ, ಶಿವಾಜಿನಗರ ಬಸ್ ನಿಲ್ದಾಣ ಅಥವಾ ಚರ್ಚ್ ಸ್ಟ್ರೀಟ್ನ ಶೋಭಾ ಮಾಲ್ನಲ್ಲಿ ಪಾವತಿಸಬಹುದಾದ ಪಾರ್ಕಿಂಗ್ ಸೌಲಭ್ಯವನ್ನು ಬಳಸಬಹುದು. ಎಂಎಸ್ ಬಿಲ್ಡಿಂಗ್ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲೂ ಅಧಿಕೃತ ಪಾರ್ಕಿಂಗ್ ವ್ಯವಸ್ಥೆ ಇರಲಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಭಾನುವಾರ ಬೆಳಗ್ಗೆ 3.30ರಿಂದ ನಮ್ಮ ಮೆಟ್ರೋ ಸೇವೆಗಳು ಆರಂಭವಾಗಲಿವೆ ಎಂದು ಘೋಷಿಸಿದೆ. ನಗರ ಕೇಂದ್ರದಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ನಾಗರಿಕರು ಮೆಟ್ರೋ ಅಥವಾ ಸಾರ್ವಜನಿಕ ಸಾರಿಗೆ ಸೇವೆಗಳನ್ನು ಬಳಸುವಂತೆ ಟ್ರಾಫಿಕ್ ಪೊಲೀಸರು ಬಲವಾಗಿ ಮನವಿ ಮಾಡಿದ್ದಾರೆ.
ನಾಗರಿಕರು ಹಿಡಿಶಾಪ
ಅಗತ್ಯ ಕೆಲಸಗಳಿಗೆ ಇಂದು ಈ ಮಾರ್ಗದಲ್ಲಿ ಸಂಚರಿಸುವವರು ಟ್ರಾಫಿಕ್ ನಿಯಮ ಬದಲಾವಣೆ ಗೊತ್ತಿಲ್ಲದೆ
ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ವಾಹನವನ್ನು ಎಲ್ಲೆಂದರಲ್ಲಿ ದೂರರದಲ್ಲಿ ನಿಲ್ಲಿಸಿ ನಡೆದುಕೊಂಡು ಹೋಗಬೇಕಾದ ಅನಿವಾರ್ಯತೆ ಉಂಟಾಯಿತು. ವಾಹನ ಪಾರ್ಕಿಂಗ್ ಎಲ್ಲಿ ಮಾಡಬೇಕೆಂದು ಗೊತ್ತಾಗದೆ ನಾಗರಿಕರು ಪರದಾಡಿದ ಪ್ರಸಂಗ ಕೂಡ ನಡೆಯಿತು.