ಬೆಂಗಳೂರು: ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನದಂಗಡಿ ಮಾಲೀಕನ ಮೇಲೆ ದರೋಡೆಕೋರ ಗ್ಯಾಂಗ್ ಫೈರಿಂಗ್ ಮಾಡಿ ಪರಾರಿ ಆಗಿರುವ ಘಟನೆ ಬೆಂಗಳೂರಿನ ನೆಲಮಂಗಲ ತಾಲೂಕಿನ ಡಾಬಸ್ಪೇಟೆಯಲ್ಲಿ ನಡೆದಿದೆ.
ದಾಬಸ್ಪೇಟೆಯ ಪ್ರೇಮ್ ಶಿವ ಜ್ಯುವೆಲರಿ ಅಂಗಡಿಯಲ್ಲಿ ಈ ಘಟನೆ ಸಂಭವಿಸಿದ್ದು, ದಾಳಿಯಲ್ಲಿ ಮಾಲೀಕ ಪುನ್ನಾರಾಮ್ ಗಾಯಗೊಂಡಿದ್ದಾರೆ. ಸದ್ಯ ಅವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ದೃಶ್ಯ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮೂಲಗಳ ಪ್ರಕಾರ, ಬೊಲೆರೋ ಕಾರಿನಲ್ಲಿ ಆಗಮಿಸಿದ್ದ ಐದಾರು ಜನರ ತಂಡ, ಆಭರಣ ಖರೀದಿಸುವವರಂತೆ ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ಬಂದಿದೆ. ಈ ವೇಳೆ ಚಿನ್ನಾಭರಣಗಳನ್ನು ನೋಡುವ ನೆಪದಲ್ಲಿ ಅಂಗಡಿ ಮಾಲೀಕನ ಗಮನ ಸೆಳೆದಿದೆ.
ಬಳಿಕ ಚಿನ್ನಾಭರಣಗಳನ್ನು ದರೋಡೆ ಮಾಡಲು ಯತ್ನಿಸಿದ್ದು, ಈ ವೇಳೆ ಮಾಲೀಕ ಪುನ್ನಾರಾಮ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಕೆರಳಿದ ದರೋಡೆಕೋರರು ಅವರ ಮೇಲೆ ಏಕಾಏಕಿ ಫೈರಿಂಗ್ ಮಾಡಿ ಪರಾರಿ ಆಗಿದ್ದಾರೆ.
ಅಂಗಡಿಯಲ್ಲಿ ಜೀವಂತ ಗುಂಡು ಪತ್ತೆ
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಸಾಕ್ಷ್ಯಾಧಾರಗಳನ್ನು ಕಲೆಹಾಕಿದ್ದು, ಪರಾರಿಯಾಗಿರುವ ದರೋಡೆಕೋರರ ಬಂಧನಕ್ಕೆ ಬಲೆ ಬೀಸಿದ್ದಾರೆ. ಅಂತೆಯೇ ಅಂಗಡಿ ಪರಿಶೀಲನೆ ವೇಳೆ 2 ಜೀವಂತ ಗುಂಡುಗಳು ಕೂಡ ಪತ್ತೆಯಾಗಿವೆ ಎಂದು ತಿಳಿದುಬಂದಿದೆ.