ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಮ್ಮೆ ಬೈಕ್ ಟ್ಯಾಕ್ಸಿಗಳ ವಿರುದ್ಧ ಸಾರಿಗೆ ಇಲಾಖೆ (RTO) ಸಮರ ಸಾರಿದೆ. ನಿಯಮ ಉಲ್ಲಂಘಿಸಿ ರಸ್ತೆಗಿಳಿದಿದ್ದ ಬರೋಬ್ಬರಿ 263 ಬೈಕ್ ಟ್ಯಾಕ್ಸಿಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಹೈಕೋರ್ಟ್ ಆದೇಶದ ಬಳಿಕ ಕಳೆದ ಏಳು ತಿಂಗಳಿನಿಂದ ಶಾಂತವಾಗಿದ್ದ ಆರ್ಟಿಒ ಅಧಿಕಾರಿಗಳು, ಇದೀಗ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತಿದ್ದಂತೆ ಏಕಾಏಕಿ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.
ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಸಂಪೂರ್ಣ ನಿಷೇಧ ಇಲ್ಲದಿದ್ದರೂ, ಅಗತ್ಯ ವಾಣಿಜ್ಯ ಸಾರಿಗೆ ಪರವಾನಗಿ ಇಲ್ಲದೆ ಸೇವೆ ನೀಡುವುದು ಕಾನೂನುಬಾಹಿರವಾಗಿದೆ.
ಕರ್ನಾಟಕ ಹೈಕೋರ್ಟ್ 2026ರ ಜನವರಿಯಲ್ಲಿ ಬೈಕ್ ಟ್ಯಾಕ್ಸಿ ಸೇವೆಗೆ ಅನುಮತಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ ಬಳಿಕ ಈ ಕಾರ್ಯಾಚರಣೆಯನ್ನು ಮತ್ತೆ ಆರಂಭಿಸಲಾಗಿದೆ.
ಸಾರಿಗೆ ಇಲಾಖೆ ಅಧಿಕಾರಿಗಳ ಪ್ರಕಾರ, ಈ ವಿಶೇಷ ಕಾರ್ಯಾಚರಣೆ ಒಂದು ವಾರದವರೆಗೆ ಮುಂದುವರಿಯಲಿದ್ದು, ಬಳಿಕ ಅದರ ಪ್ರಗತಿಯನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಅಪರ ಸಾರಿಗೆ ಆಯುಕ್ತೆ ಓಂಕಾರೇಶ್ವರಿ ಮಾತನಾಡಿ, "ಹೈಕೋರ್ಟ್ ಆದೇಶದ ಬಳಿಕ ಹೊಸ ನೀತಿ ರೂಪಿಸುವ ಅಗತ್ಯವಿತ್ತು. ಈಗ ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿದೆ. ಈ ನಡುವೆ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಂದ ನಿರಂತರ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದೇವೆ ಎಂದು ತಿಳಿಸಿದ್ದಾರೆ.
2026ರ ಜನವರಿಯಲ್ಲಿ ನೀಡಿದ್ದ ತೀರ್ಪಿನಲ್ಲಿ ಹೈಕೋರ್ಟ್, ದ್ವಿಚಕ್ರ ವಾಹನ ಎಂಬ ಕಾರಣಕ್ಕೆ ಮೋಟಾರ್ಸೈಕಲ್ಗಳಿಗೆ ಒಪ್ಪಂದ ಸಾರಿಗೆ (ಕಾಂಟ್ರಾಕ್ಟ್ ಕ್ಯಾರೇಜ್) ಪರವಾನಗಿ ನಿರಾಕರಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು.
ಮೋಟಾರು ವಾಹನ ಕಾಯ್ದೆಯಡಿ ಮೋಟಾರ್ಸೈಕಲ್ಗಳನ್ನೂ ಸಾರಿಗೆ ವಾಹನಗಳೆಂದು ಗುರುತಿಸಲಾಗಿದ್ದು, ಅವು ಪರವಾನಗಿಗೆ ಅರ್ಹವಾಗಿವೆ ಎಂದು ವಿಭಾಗೀಯ ಪೀಠ ಸ್ಪಷ್ಟಪಡಿಸಿತ್ತು.
ಇದೇ ವೇಳೆ, ಬೈಕ್ ಟ್ಯಾಕ್ಸಿ ಸೇವೆಗಳು ತಮ್ಮ ಜೀವನೋಪಾಯಕ್ಕೆ ಹೊಡೆತ ನೀಡುತ್ತಿವೆ ಎಂದು ಆಟೋ ಹಾಗೂ ಟ್ಯಾಕ್ಸಿ ಸಂಘಗಳು ನಿರಂತರವಾಗಿ ವಿರೋಧ ವ್ಯಕ್ತಪಡಿಸುತ್ತಿವೆ.
ಬೈಕ್ ಟ್ಯಾಕ್ಸಿಗಳಿಗೆ ಸಂಪೂರ್ಣ ನಿಷೇಧ ಹೇರಿದರೆ ಅದು ಸಂವಿಧಾನ ನೀಡಿರುವ ವ್ಯಾಪಾರ ಅಥವಾ ವೃತ್ತಿ ನಡೆಸುವ ಹಕ್ಕಿನ ಮೇಲೆ ಅಸಮಂಜಸ ನಿರ್ಬಂಧವಾಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.
ಆದರೆ, ಅಸ್ತಿತ್ವದಲ್ಲಿರುವ ಕಾನೂನು ಚೌಕಟ್ಟಿನಡಿ ಪರವಾನಗಿ ನೀಡಲು ಷರತ್ತುಗಳನ್ನು ವಿಧಿಸುವ ಹಾಗೂ ಸೇವೆಯನ್ನು ನಿಯಂತ್ರಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿದೆ. ಆದರೆ, ಕೇವಲ ದ್ವಿಚಕ್ರ ವಾಹನ ಎಂಬ ಕಾರಣಕ್ಕೆ ಪರವಾನಗಿ ಅರ್ಜಿಯನ್ನು ತಿರಸ್ಕರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತ್ತು.