ಬೆಂಗಳೂರು: ಖ್ಯಾತ ನಟ ಪ್ರಕಾಶ್ ರಾಜ್ ಅವರಿಗೆ ಚುನಾವಣಾ ಆಯೋಗ ದೊಡ್ಡ ಶಾಕ್ ನೀಡಿದೆ. ಬೆಂಗಳೂರಿನ ಮತದಾರರ ಪಟ್ಟಿಯಿಂದ ಅವರ ಹೆಸರನ್ನು ಕೈಬಿಡಲಾಗಿದ್ದು, ಈ ಕುರಿತು ನಟ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಈ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಅವರು, ‘ಎಸ್ಐಆರ್ ಬಳಿಕ ಬೆಂಗಳೂರಿನ ಮತದಾರರ ಪಟ್ಟಿಯಿಂದ ನನ್ನ ಹೆಸರು ಅಳಿಸಲಾಗಿದೆ. ನನ್ನ ಮತದಾನದ ಹಕ್ಕನ್ನು ಮರಳಿ ಪಡೆಯಲು ಮುಂದಿನ ಪ್ರಕ್ರಿಯೆ ಏನು ಎಂಬುದನ್ನು ನೋಡುತ್ತೇನೆ ಎಂದು ಹೇಳಿದ್ದಾರೆ.
“ಸ್ನೇಹಿತರೇ, ನಿಮಗೆ ಒಂದು ಜೋಕ್ ಹೇಳಬೇಕು. ಎಸ್ಐಆರ್ ಬಳಿಕ ಬೆಂಗಳೂರಿನ ಮತದಾರರ ಪಟ್ಟಿಯಿಂದ ಮತದಾನದ ಹಕ್ಕು ಕಳೆದುಕೊಂಡಿರುವ 65 ಲಕ್ಷ ಮತದಾರರಲ್ಲಿ ನಾನೂ ಒಬ್ಬನಾಗಿದ್ದೇನೆ. ಚೆನ್ನಾಗಿದೆ ಅಲ್ಲವೇ?...
ನಾನು ಈ ಕ್ಷೇತ್ರದಲ್ಲೇ ಹುಟ್ಟಿದ್ದೇನೆ. ಇಲ್ಲೇ ವಾಸಿಸಿದ್ದೇನೆ. ಇಲ್ಲಿಯೇ ಶಾಲೆ, ಕಾಲೇಜು ಹಾಗೂ ರಂಗಭೂಮಿಯಲ್ಲಿ ನಡೆಸಿದ್ದೇನೆ. ನಿಮ್ಮ ಮಾಹಿತಿಗಾಗಿ ಹೇಳುವುದಾದರೆ, ಇದೇ ಕ್ಷೇತ್ರದಿಂದ ನಾನು ಲೋಕಸಭೆ ಅಭ್ಯರ್ಥಿಯೂ ಆಗಿದ್ದೆ.
ಇದು ಒಳ್ಳೆಯ ಜೋಕ್. ಆಟ ಶುರುವಾಗಿದೆ. ನನ್ನ ಮತದಾರರ ಗುರುತಿನ ಚೀಟಿಯನ್ನು ಮರಳಿ ಪಡೆಯಲು ಯಾವ ಪ್ರಕ್ರಿಯೆ ಅನುಸರಿಸಬೇಕು ಎಂಬುದನ್ನು ನೋಡೋಣ. ಆಟ ಮುಂದುವರಿಯಲಿ ಎಂದು ಹೇಳಿದ್ದಾರೆ.
ಕೆಲವರು ತಮಗೆ ಮತ ಹಾಕುವುದಿಲ್ಲ ಎಂಬ ಕಾರಣಕ್ಕೆ ಕೆಲವು ನಾಗರಿಕರ ಮತದಾನದ ಹಕ್ಕನ್ನು ನಿರಾಕರಿಸಲು ಅಧಿಕಾರವನ್ನು ಬಳಸಬಹುದು. ಆದರೆ, ಅಂತಿಮವಾಗಿ ಅಧಿಕಾರದಿಂದ ಕೆಳಗಿಳಿಸುವ ಜನರ ಶಕ್ತಿಯನ್ನು ತಡೆಯಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಜಾರ್ಖಂಡ್ನಲ್ಲಿ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್: ಪ್ರಕಾಶ್ ರಾಜ್ ಖಂಡನೆ
ಇದೇ ವೇಲೆ ಮತದಾರರ ಪಟ್ಟಿ ವಿವಾದದ ನಡುವೆಯೇ ಜಾರ್ಖಂಡ್ನ ರಾಜಧಾನಿ ರಾಂಚಿಯಲ್ಲಿ ವಿಧಾನಸಭೆ ಸಮೀಪ ಪ್ರತಿಭಟನೆ ನಡೆಸುತ್ತಿದ್ದ JPSC ಹಾಗೂ JSSC ಆಕಾಂಕ್ಷಿಗಳ ವಿರುದ್ಧ ಪೊಲೀಸರು ನಡೆಸಿದ ಕ್ರಮವನ್ನೂ ಪ್ರಕಾಶ್ ರಾಜ್ ಖಂಡಿಸಿದ್ದಾರೆ.
ಪ್ರತಿಭಟನಾಕಾರರ ಮೇಲೆ ಪೊಲೀಸರು ಅಶ್ರುವಾಯು ಪ್ರಯೋಗಿಸುತ್ತಿರುವುದು ಹಾಗೂ ಲಾಠಿ ಬೀಸುತ್ತಿರುವುದಾಗಿ ಕಾಣಿಸುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಏಕೆ.. ಏಕೆ.. ಏಕೆ? ಈ ಕ್ರೌರ್ಯವನ್ನು ಇನ್ನು ಮುಂದೆ ಸಹಿಸಲು ಸಾಧ್ಯವಿಲ್ಲ. ಇದು ದುರಹಂಕಾರದ ಅಧಿಕಾರವನ್ನು ಕೆಳಗಿಳಿಸಲು ಮಾತ್ರ ಕಾರಣವಾಗಲಿದೆ,” ಎಂದು #justasking ಹ್ಯಾಶ್ಟ್ಯಾಗ್ ಬಳಸಿ ಬರೆದಿದ್ದಾರೆ.
ರಾಜ್ಯದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆ ಮುಂದುವರಿದಿದ್ದು, ಎಸ್ಐಆರ್ ಅಡಿಯಲ್ಲಿ ಹೆಸರು ಅಥವಾ ವಿವರಗಳ ಕುರಿತು ಆಕ್ಷೇಪಣೆ ಇರುವ ಮತದಾರರು ತಮ್ಮ ಮಾಹಿತಿಯನ್ನು ಪರಿಶೀಲಿಸಿ, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.