ಬೆಂಗಳೂರು: ಮೊಬೈಲ್ ಫೋನ್ ಕಳ್ಳತನದ ಕುರಿತಾದ ದೂರು ದಾಖಲಿಸುವಲ್ಲಿ ವಿಳಂಬವಾದ ಕಾರಣಕ್ಕೆ ಆಕ್ರೋಶಗೊಂಡ ವ್ಯಕ್ತಿಯೊಬ್ಬ ಬೆಂಗಳೂರು ನಗರ ರೈಲ್ವೆ ಪೊಲೀಸ್ ಠಾಣೆಯೊಳಗೆ 28 ವರ್ಷದ ಮಹಿಳಾ ಪೊಲೀಸ್ ಪೇದೆಯೊಬ್ಬರ ಮೇಲೆ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಆಗಸ್ಟ್ 26 ರಂದು ಬೆಳಿಗ್ಗೆ ಸುಮಾರು 5.10 ರ ಸುಮಾರಿಗೆ ಈ ಘಟನೆ ನಡೆದಿದೆ.
ಪೊಲೀಸ್ ಠಾಣೆಗೆ ಬಂದ ಆರೋಪಿ, ಪ್ಲಾಟ್ಫಾರ್ಮ್ ಸಂಖ್ಯೆ 5 ರಲ್ಲಿ ಚಾರ್ಜಿಂಗ್ಗೆ ಇಟ್ಟಿದ್ದ ತನ್ನ ಮೊಬೈಲ್ ಫೋನ್ ಕಳ್ಳತನವಾಗಿದೆ ಎಂದು ಪೇದೆ ಶಿಲ್ಪಾ ಡಿ. ಅವರಿಗೆ ತಿಳಿಸಿದ್ದಾನೆ. ಠಾಣಾಧಿಕಾರಿ ಬರುವವರೆಗೆ ಸ್ವಲ್ಪ ಸಮಯ ಕಾಯುವಂತೆ ಶಿಲ್ಪಾ ಅವರು ಆತನಿಗೆ ಹೇಳಿದ್ದಾರೆ. ನಂತರ ಆರೋಪಿಯು ಮತ್ತೆ ಠಾಣೆಗೆ ಬಂದು, ಪೇದೆ ಒಬ್ಬರೇ ಇರುವುದನ್ನು ಗಮನಿಸಿ, ತನ್ನ ದೂರು ಯಾಕೆ ಸ್ವೀಕರಿಸಿಲ್ಲ ಎಂದು ಹಿಂದಿಯಲ್ಲಿ ಪ್ರಶ್ನಿಸಿ, ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿರುವುದಾಗಿ ಎಫ್ ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.
ಬಳಿಕ ಆತ ಭಾರಿ ಬ್ಯಾರಿಕೇಡ್ ಚಕ್ರಕ್ಕೆ ಅಳವಡಿಸಿದ್ದ ಕಬ್ಬಿಣದ ರಾಡ್ ತೆಗೆದುಕೊಂಡು, ಶಿಲ್ಪಾ ಅವರ ತಲೆಯ ಮೇಲೆ ಆರು-ಏಳು ಬಾರಿ ಹೊಡೆದು ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಶಿಲ್ಪಾ ಅವರು ಸಹಾಯಕ್ಕಾಗಿ ಕೂಗಿಕೊಂಡಾಗ, ಠಾಣಾಧಿಕಾರಿ ಮತ್ತು ಮತ್ತೊಬ್ಬ ಮಹಿಳಾ ಪೇದೆ ಅವರ ನೆರವಿಗೆ ಧಾವಿಸಿದ್ದಾರೆ. ಸಹಾಯಕ ಸಬ್-ಇನ್ಸ್ಪೆಕ್ಟರ್ ಒಬ್ಬರು ಆರೋಪಿ ಪರಾರಿಯಾದ ದಿಕ್ಕಿನಲ್ಲಿ ಆತನನ್ನು ಹಿಂಬಾಲಿಸಿದರಾದರೂ, ತಕ್ಷಣಕ್ಕೆ ಆತನನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.
ಶಿಲ್ಪಾ ಅವರನ್ನು ಆರಂಭದಲ್ಲಿ ಪ್ರಥಮ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ರಾಜಾಜಿನಗರದ ಸುಗುಣ ಆಸ್ಪತ್ರೆಗೆ ದಾಖಲಿಸಲಾಯಿತು. ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅವರ ದೂರಿನ ಆಧಾರದ ಮೇಲೆ, ಬೆಂಗಳೂರು ನಗರ ರೈಲ್ವೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 109 (ಕೊಲೆ ಯತ್ನ) ಮತ್ತು ಸೆಕ್ಷನ್ 132 (ಸಾರ್ವಜನಿಕ ಸೇವಕರೊಬ್ಬರು ತಮ್ಮ ಕರ್ತವ್ಯ ನಿರ್ವಹಿಸದಂತೆ ತಡೆಯಲು ಹಲ್ಲೆ ಅಥವಾ ಕ್ರಿಮಿನಲ್ ಬಲ ಪ್ರಯೋಗ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಜೇಂದ್ರ ಎಂದು ಗುರುತಿಸಲಾದ ಆರೋಪಿಯನ್ನು ಇದೀಗ ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.