ಕೊಪ್ಪಳ: ಹಂಪಿ ಸಮೀಪ ವಿದೇಶಿ ಮಹಿಳೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಪ್ರವಾಸಿಗನ ಹತ್ಯೆ ಪ್ರಕರಣದ ಮೂವರು ಆರೋಪಿಗಳನ್ನು ದೋಷಿಗಳೆಂದು ಗಂಗಾವತಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ಆರೋಪಿಗಳಾದ ಮಲ್ಲೇಶ್, ಸಾಯಿ ಮತ್ತು ಶರಣಪ್ಪ ಎಂಬ ಮೂವರು ಆರೋಪಿಗಳನ್ನು ಗಂಗಾವತಿ ಜಿಲ್ಲಾ ಹೆಚ್ಚುವರಿ ನ್ಯಾಯಾಲಯವು ದೋಷಿಗಳೆಂದು ತೀರ್ಮಾನಿಸಿದ್ದು, ಶಿಕ್ಷೆಯ ಪ್ರಮಾಣವನ್ನು ಫೆಬ್ರವರಿ 16ರಂದು ವಿಚಾರಣೆ ನಡೆಸಿ, ಅಂತಿಮ ತೀರ್ಪು ಪ್ರಕಟಿಸಲಾಗುವುದು ಎಂದು ತಿಳಿಸಿದೆ.
ಹಂಪಿ ಸಮೀಪದ ಸಾಣಾಪುರದ ತುಂಗಭದ್ರಾ ಎಡದಂಡೆ ಕಾಲುವೆ ಬಳಿ 2025ರ ಮಾರ್ಚ್ 6ರಂದು ಘಟನೆ ನಡೆದಿತ್ತು.
ಅನೇಕುಂದಿ ಪ್ರದೇಶದ ಹೋಮ್ಸ್ಟೇನಲ್ಲಿ ತಂಗಿದ್ದ ಐವರು ಪ್ರವಾಸಿಗರು ಊಟದ ನಂತರ ಕಾಲುವೆ ಬಳಿ ಸಂಗೀತ ಕೇಳುತ್ತ ಕುಳಿತಿದ್ದ ವೇಳೆ ಮದ್ಯಪಾನ ಮಾಡಿ ಬಂದಿದ್ದ ಮೂವರು ಆರೋಪಿಗಳು, ದರೋಡೆ ಉದ್ದೇಶದಿಂದ ಅವರ ಬಳಿ ಬಂದಿದ್ದಾರೆ.
ಆರೋಪಿಗಳು ಮೂವರು ಪುರುಷ ಪ್ರವಾಸಿಗರ ಮೇಲೆ ಹಲ್ಲೆ ನಡೆಸಿ ಅವರನ್ನು ಕಾಲುವೆಗೆ ತಳ್ಳಿದ್ದರು. ಈ ವೇಳೆ ಇಬ್ಬರು ಮಹಿಳಾ ಪ್ರವಾಸಿಗರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಸಂತ್ರಸ್ತ ಮಹಿಳೆಯರಲ್ಲಿ ಒಬ್ಬರು ಇಸ್ರೇಲ್ ಪ್ರಜೆಯಾಗಿದ್ದರೆ, ಮತ್ತೊಬ್ಬರು ಭಾರತೀಯ ಮಹಿಳೆಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಆರೋಪಿಗಳು ನಡೆಸಿದ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಒಡಿಶಾ ಮೂಲದ ಬಿಭಾಷಾ ಎಂಬ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದ.
ಮೃತದೇಹವನ್ನು ಸುಮಾರು 24 ಗಂಟೆಗಳ ನಂತರ ಪತ್ತೆ ಹಚ್ಚಲಾಗಿತ್ತು. ಇತರ ಇಬ್ಬರು ಪ್ರವಾಸಿಗರು ಈಜಿ ದಡ ಸೇರಿ, ಪ್ರಾಣಾಪಾಯದಿಂದ ಪಾರಾಗಿದ್ದರು.
ಘಟನೆಯಲ್ಲಿ ಜರ್ಮನ್ ನಾಗರಿಕ ಡೇನಿಯಲ್ ಹಾಗೂ ಮಹಾರಾಷ್ಟ್ರ ನಿವಾಸಿ ಪಂಕಜ್ ಗಾಯಗೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣವು ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಪ್ರವಾಸಿಗರ ಸುರಕ್ಷತೆ ಕುರಿತಾಗಿ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಹೆಚ್ಚುವರಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದರು.