ಬೆಂಗಳೂರು: ಲಷ್ಕರ್-ಎ-ತೊಯ್ಬಾ (LeT) ಸಂಘಟನೆಯ ಉಗ್ರ ಜುನೈದ್ ಅಹ್ಮದ್ ಪತ್ತೆಗೆ ಎನ್ಐಎ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿರುವ ಬೆನ್ನಲ್ಲೇ, ಬೆಂಗಳೂರಿನ ಸಿಟಿ ಮಾರ್ಕೆಟ್ ಜಾಮಿಯಾ ಮಸೀದಿಯ ಮುಖ್ಯ ಇಮಾಮ್ ಮಕ್ಸೂದ್ ಇಮ್ರಾನ್ ರಶಾದಿ ಅವರು ಸಮುದಾಯಕ್ಕೆ ಮಹತ್ವದ ಸಂದೇಶ ನೀಡಿದ್ದಾರೆ.
ಸಮುದಾಯದ ಸದಸ್ಯರು ಬಹುಮಾನದ ಆಸೆಗಾಗಿ ಕಾಯಬಾರದು, ಬದಲಿಗೆ ದೇಶಸೇವೆಯ ಮನೋಭಾವದಿಂದ ತಲೆಮರೆಸಿಕೊಂಡಿರುವ ಉಗ್ರನ ಬಗ್ಗೆ ಮಾಹಿತಿ ನೀಡಬೇಕು ಎಂದು ಕರೆ ನೀಡಿದ್ದಾರೆ.
ಇಸ್ಲಾಂ ಧರ್ಮವು ಎಂದಿಗೂ ಭಯೋತ್ಪಾದಕ ಕೃತ್ಯಗಳನ್ನು ಅಥವಾ ಅಮಾಯಕರ ಕೊಲೆಯನ್ನು ಬೆಂಬಲಿಸುವುದಿಲ್ಲ.ಬಹುಮಾನಕ್ಕಾಗಿ ನೋಡದೆ, ಸಮಾಜಕ್ಕೆ ಹಾನಿ ಮಾಡುವವರನ್ನು ಹಿಡಿಯಲು ಸಹಕರಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಎಂದು ಹೇಳಿದ್ದಾರೆ.
ಇದೇ ವೇಳೆ ಈ ಸಂದೇಶವನ್ನು ರಾಜ್ಯದ ಎಲ್ಲಾ ಮಸೀದಿಗಳಲ್ಲಿ ಪ್ರಕಟಿಸಲಾಗುವುದೆಂದು ತಿಳಿಸಿರುವ ಅವರು, ಜುನೈದ್ ಅಹ್ಮದ್ ಸೇರಿದಂತೆ ಸಮಾಜಕ್ಕೆ ಅಪಾಯಕಾರಿಯಾದವರ ಕುರಿತು ಮಾಹಿತಿ ಸಿಕ್ಕಲ್ಲಿ ಅಧಿಕಾರಿಗಳಿಗೆ ತಿಳಿಸಲು ಸಮುದಾಯದವರಿಗೆ ಸೂಚನೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಬೆಂಗಳೂರು ಒಂದರಲ್ಲೇ ಸುಮಾರು 800 ಮಸೀದಿಗಳು ಮತ್ತು ಕರ್ನಾಟಕದಲ್ಲಿ 2,000ಕ್ಕೂ ಹೆಚ್ಚು ಮಸೀದಿಗಳಿದ್ದು, ಎನ್ಐಎ ವಿತರಿಸಿದ ಪೋಸ್ಟರ್ಗಳ ಆಧಾರದಲ್ಲಿ ಶಂಕಿತರ ಕುರಿತು ಮಾಹಿತಿ ನೀಡುವಂತೆ ಜನರಿಗೆ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದ್ದಾರೆ.