ಬೆಂಗಳೂರು: ಸೈಬರ್ ವಂಚನೆ ಪ್ರಕರಣವೊಂದರಲ್ಲಿ ಬ್ಯಾಂಕ್ ವಿವರ ಕಳುಹಿಸಿದ ಬೆಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ 7 ಕೋಟಿ ರೂ. ಕಳೆದುಕೊಂಡಿರುವ ಘಟನೆ ನಡೆದಿದೆ. ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ, ಆಯುಷ್ ಎನ್ನಲಾದ ವ್ಯಕ್ತಿಯೊಂದಿಗೆ ಸುಮಾರು ಒಂದು ವರ್ಷದಿಂದ ಗೆಳೆತನ ಹೊಂದಿದ್ದರು.
ಆಯುಷ್ ನವೆಂಬರ್ 2025 ರಲ್ಲಿ ಬ್ಯಾಲೆನ್ಸ್ ಇಲ್ಲದ ಕಾರಣ ತನ್ನ ಬ್ಯಾಂಕ್ ಖಾತೆಯನ್ನು ನಿರ್ಬಂಧಿಸಲಾಗಿದ್ದು, ತಾತ್ಕಾಲಿಕವಾಗಿ ತನ್ನ ಬ್ಯಾಂಕ್ ಖಾತೆಯನ್ನು ಬಳಸುವಂತೆ ವಿದ್ಯಾರ್ಥಿ ಬಳಿ ಮನವಿ ಮಾಡಿಕೊಂಡಿದ್ದಾನೆ.
ಆತನ ಮಾತನ್ನು ನಂಬಿ ವಿದ್ಯಾರ್ಥಿ, ATM ಲಿಂಕ್ ಮಾಡಿದ ಏರ್ಟೆಲ್ ಸಿಮ್ ಕಾರ್ಡ್, ನೆಟ್ ಬ್ಯಾಂಕಿಂಗ್ ಯೂಸರ್ ಐಡಿ ಮತ್ತು ಪಾಸ್ವರ್ಡ್ ಸೇರಿದಂತೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ಖಾತೆ ವಿವರಗಳನ್ನು ಹಂಚಿಕೊಂಡಿರುವುದಾಗಿ ವರದಿಯಾಗಿದೆ.
ಆಯುಷ್ ನಂತರ ವಾಟ್ಸಾಪ್ ಸಂದೇಶಗಳ ಮೂಲಕ ದಾಖಲೆಗಳ ಸ್ವೀಕೃತಿಯನ್ನು ಖಚಿತಪಡಿಸಿದ್ದಾನೆ. ತಿಂಗಳ ನಂತರ 7 ಕೋಟಿ ರೂ. ವಂಚನೆ ಪತ್ತೆಯಾಗಿದೆ. ಬಳಿಕ ವಿದ್ಯಾರ್ಥಿ ಬ್ಯಾಂಕ್ ನವರನ್ನು ಸಂಪರ್ಕಿಸಿದಾಗ ಆತನ ಖಾತೆಯ ಮೂಲಕ ಸೈಬರ್ ವಂಚನೆಗೆ ಸಂಬಂಧಿಸಿದಂತೆ ಭಾರಿ ಅನುಮಾನಾಸ್ಪದ ವಹಿವಾಟುಗಳ ಬಗ್ಗೆ ಮಾಹಿತಿ ನೀಡಿದೆ. ಖಾತೆಯ ಮೂಲಕ ಸುಮಾರು 7 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೂಡಲೇ ವಿದ್ಯಾರ್ಥಿಯ ಬ್ಯಾಂಕ್ ಖಾತೆಯನ್ನು ಬ್ಲಾಕ್ ಮಾಡಲಾಗಿದೆ. ಸೈಬರ್ ಕ್ರೈಂ ಚಟುವಟಿಕೆಗಳಿಗೆ ತನ್ನ ಖಾತೆಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಗೊತ್ತಾದ ಬಳಿಕ ವಿದ್ಯಾರ್ಥಿ ಪೊಲೀಸರನ್ನು ಸಂಪರ್ಕಿಸಿದ್ದಾನೆ.
ಈ ಸಂಬಂಧ ಉತ್ತರ ವಿಭಾಗದ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆಯುಷ್ ಮತ್ತಿತರನ್ನು ಹೆಸರಿಸಿ ಖಾತೆಯನ್ನು ಬಳಸಿಕೊಂಡು ಮೋಸದ ವಹಿವಾಟು ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.