ಮಂಗಳೂರು: ದಕ್ಷಿಣ ಕನ್ನಡದಲ್ಲಿ ಸುರಿಯುತ್ತಿರುವ ಭಾರಿ ಮಳೆ ನಾನಾ ಅವಾಂತರಗಳನ್ನು ಸೃಷ್ಟಿ ಮಾಡಿದ್ದು, ಮಂಗಳೂರಿನಲ್ಲಿ ಮನೆಯ ಗೋಡೆ ಕುಸಿದು ಮೂವರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಗೋರಿಯಲ್ಲಿ ಭಾರಿ ಮಳಗೆ, ಹಂಚಿನ ಮನೆ ಹಾಗೂ ಗೋಡೆ ಕುಸಿದು ನಿದ್ರೆ ಮಾಡುತ್ತಿದ್ದ ಮೂವರು ಮೃತಪಟ್ಟಿದ್ದಾರೆ. ಮೃತರನ್ನು ಒಬ್ಬ ಮಹಿಳೆ ಇಬ್ಬರು ಬಾಲಕಿಯರು ಎಂದು ಗುರುತಿಸಲಾಗಿದೆ.
ಮೃತರನ್ನು ಅನಾಮಿಕ ಚೌರಾಸಿಯ (7), ತನು (3) ಮತ್ತು ಶಾಂತ (35) ಎಂದು ಗುರುತಿಸಲಾಗಿದೆ. ಅಲ್ಕಾ (14), ಅನುಷಾ (11) ಮತ್ತು ಬಾಲಕೃಷ್ಣ (48) ಎಂಬುವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾಲ್ ಬಾಬು ಹಾಗೂ ಅವರ ಪತ್ನಿ ಇಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದೆ. ಇದರಿಂದಾಗಿ ಬುಧವಾರ ಮುಂಜಾನೆ 4.45 ರಿಂದ 5 ಗಂಟೆ ಸುಮಾರಿಗೆ ಮಣ್ಣು ಕುಸಿದ ಪರಿಣಾಮ ಘಟನೆ ನಡೆದಿದೆ.
ಒಟ್ಟು ನಾಲ್ಕು ಕುಟುಂಬ ಬಾಡಿಗೆ ಮನೆಯಲ್ಲಿ ಕಂಕನಾಡಿ ಗ್ರಾಮದ, ಕಂಕನಾಡಿ ಪೊಲೀಸ್ ಠಾಣಾ ಹಿಂಭಾಗದಲ್ಲಿ ಕಳೆದ 20 ವರ್ಷಗಳಿಂದ ವಾಸ ಮಾಡುತ್ತಿದ್ದರು. ಈ ಪೈಕಿ ಬಿಹಾರ ಮೂಲದವರು ಸಹ ಇದ್ದರು. ಲಾಲ್ ಬಾಬು ಹಾಗೂ ಅವರ ಪತ್ನಿ ಇಂದು ಹಾಗೂ ಅನುಷಾ, ಅಲ್ಕಾ, ಅನಾಮಿಕ ಚೌರಾಸಿಯ, ಪರಿ ಜೊತೆ 20 ವರ್ಷದಿಂದ ಇದೇ ಪ್ರದೇಶದಲ್ಲಿ ವಾಸವಾಗಿದ್ದರು.
ಮತ್ತೊಂದು ಮನೆಯಲ್ಲಿದ್ದ ಬಾಲಕೃಷ್ಣ ಹಾಗೂ ಶಾಂತಾ ದಂಪತಿ ಸುಮಾರು ಎಂಟು ತಿಂಗಳಿನಿಂದ ಅಲ್ಲಿ ವಾಸವಾಗಿದ್ದರು. ಇದರಲ್ಲಿ ಶಾಂತ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸಿಎಚ್ ಮಾತನಾಡಿ, ರಕ್ಷಣಾ ಸಿಬ್ಬಂದಿ ಆರಂಭದಲ್ಲಿ ಲಾಲ್ಬಾಬು (37), ಅವರ ಪತ್ನಿ ಇಂದು (34) ಮತ್ತು ಅವರ ಇಬ್ಬರು ಹೆಣ್ಣುಮಕ್ಕಳನ್ನು ಹೊರತೆಗೆದು ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಿದರು.
ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಮಕ್ಕಳು ನಂತರ ಸಾವನ್ನಪ್ಪಿದರು. ಮೃತ ಬಾಲಕಿಯರನ್ನು ಅನಾಮಿಕಾ ಮತ್ತು ಪರಿ ಎಂದು ಗುರುತಿಸಲಾಗಿದೆ. ಅಲ್ಕಾ ಹಾಗೂ ಅನುಷ್ಕಾರನ್ನು ರಕ್ಷಿಸಲಾಗಿದೆ, ಮತ್ತೊಂದು ಮನೆಯಲ್ಲಿದ್ದ ಶಾಂತಾ ಅವರು ಮೃತಪಟ್ಟಿದ್ದಾರೆ ಎಂದು ಮಾಹಿತಿ ಕೊಟ್ಟರು.