ಬೆಂಗಳೂರು: ಲಕ್ಷ್ಮಿ ದೇವತೆ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಆರ್ಯವರ್ಧನ ಗುರೂಜಿ ವಿರುದ್ಧ ದೂರು ನೀಡಲಾಗಿದೆ.
ಬೆಂಗಳೂರಿನ ಶಂಕರಪುರಂ ಪೊಲೀಸ್ ಠಾಣೆಗೆ ಕರ್ನಾಟಕ ಗೋರಕ್ಷಕರ ಸೇನೆ ದೂರು ನೀಡಿದ್ದು ಗುರೂಜಿ ಹೇಳಿಕೆಯಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಹೀಗಾಗಿ ೇಆರ್ಯವರ್ಧನ ಗುರೂಜಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಲಾಗಿದೆ.
ಸಂದರ್ಶನವೊಂದರಲ್ಲಿ ಲಕ್ಷ್ಮಿ ದೇವರ ಬಗ್ಗೆ ಗುರೂಜಿ ಹೇಳಿಕೆ ನೀಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಆರ್ಯವರ್ಧನ ಗುರೂಜಿ ಹೇಳಿಕೆ ವೈರಲ್ ಆಗಿದೆ. ದೂರಿನಲ್ಲಿ, ಅವರು ಮಾನವ ದೇಹದ ಒಂದು ಅಂಗವನ್ನು ಉಲ್ಲೇಖಿಸಿ ಪೂಜೆ ಮಾಡಬೇಕು ಎಂಬ ಅರ್ಥ ಬರುವಂತೆ ಮಾತನಾಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಶಂಕರಪುರಂ ಠಾಣೆಗೆ ಗೋ ರಕ್ಷಕರ ಸೇನೆ ದೂರು ನೀಡಿದೆ. ದೂರು ಸ್ವೀಕರಿಸಿದ ಶಂಕರಪುರಂ ಠಾಣೆ ಪೊಲೀಸರು ವಿಡಿಯೋ ಪರಿಶೀಲನೆ ನಡೆಸಿದ್ದಾರೆ.
ಶಂಕರಪುರಂ ಪೊಲೀಸರು ಆರ್ಯವರ್ಧನ್ ಗುರೂಜಿಗೆ ವಿಚಾರಣೆಗೆ ಹಾಜರಾಗುವಂತೆ ಮೌಖಿಕವಾಗಿ ಸೂಚನೆ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಈ ವಿವಾದಕ್ಕೆ ಸಂಬಂಧಿಸಿದಂತೆ ಆರ್ಯವರ್ಧನ್ ಗುರೂಜಿ ಕಡೆಯಿಂದ ಯಾವುದೇ ಸ್ಪಷ್ಟನೆ ಬಂದಿಲ್ಲ.