ತುಮಕೂರು: ದೇಶದ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು, ನ್ಯಾಯಾಂಗದಲ್ಲಿ ಸಮಗ್ರ ಸುಧಾರಣೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ತುಮಕೂರಿನ ಸೂಫಿಯಾ ಕಾನೂನು ಕಾಲೇಜಿನ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪ್ರತಿ ವರ್ಷ ಸಾವಿರಾರು ಕಾನೂನು ಪದವೀಧರರು ಹೊರಬರುತ್ತಿದ್ದರೂ, ನ್ಯಾಯಾಲಯಗಳಲ್ಲಿ ಬಾಕಿ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ ಎಂದು ಹೇಳಿದರು.
"ಭಾರತದಲ್ಲಿ 1,500ಕ್ಕೂ ಹೆಚ್ಚು ಕಾನೂನು ಕಾಲೇಜುಗಳಿದ್ದು, ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ಕಾನೂನು ಪದವಿ ಪಡೆದು ವಕೀಲ ವೃತ್ತಿಗೆ ಬರುತ್ತಿದ್ದಾರೆ. ಆದರೂ ನ್ಯಾಯಾಲಯಗಳಲ್ಲಿ ಬಾಕಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಪ್ರಕರಣಗಳ ತ್ವರಿತ ವಿಲೇವಾರಿಗೆ ನ್ಯಾಯಾಂಗದಲ್ಲಿ ಸುಧಾರಣೆ ಅನಿವಾರ್ಯವಾಗಿದೆ" ಎಂದು ತಿಳಿಸಿದರು.
ಸಂವಿಧಾನದ ಪೀಠಿಕೆಯಲ್ಲಿ ಸಮಾನತೆಗೆ ಅತ್ಯಂತ ಮಹತ್ವ ನೀಡಲಾಗಿದ್ದರೂ, ಅದು ಕಾನೂನು ಹಾಗೂ ಸಮಾಜದಲ್ಲಿ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ಜಾರಿಯಾಗಿದೆ ಎಂಬುದರ ಬಗ್ಗೆ ಗಂಭೀರ ವಿಶ್ಲೇಷಣೆ ಅಗತ್ಯವಿದೆ ಎಂದರು.
ಕಾನೂನು ಪದವೀಧರರಿಗೆ ಸಲಹೆ ನೀಡಿದ ಅವರು, ನಿರಂತರ ಅಧ್ಯಯನದ ಮೂಲಕ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಹಾಗೂ ಸಮರ್ಥ ವಕೀಲರಾಗಿ ಬೆಳೆಯಬೇಕು ಎಂದು ಕರೆ ನೀಡಿದರು.
"ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳಲ್ಲಿ ಕೆಲವೇ ಕೆಲವು ವಕೀಲರನ್ನು ಹೆಚ್ಚಿನ ವ್ಯಾಜ್ಯಗಾರರು ಆಯ್ಕೆ ಮಾಡುತ್ತಾರೆ. ಅವರು ಕಾನೂನಿನ ಆಳವಾದ ಜ್ಞಾನ ಮತ್ತು ಪರಿಣಾಮಕಾರಿ ವಾದ ಮಂಡನೆಯ ಮೂಲಕ ಜನರ ವಿಶ್ವಾಸ ಗಳಿಸಿದ್ದಾರೆ. ಹೊಸ ತಲೆಮಾರಿನ ವಕೀಲರೂ ಅದೇ ಮಟ್ಟದ ಪರಿಣತಿ ಸಾಧಿಸಲು ಪ್ರಯತ್ನಿಸಬೇಕು" ಎಂದು ಹೇಳಿದರು.
ಭಾರತದ ಕಾನೂನು ಕ್ಷೇತ್ರ ಅಂತರರಾಷ್ಟ್ರೀಯ ಮಟ್ಟದಲ್ಲೂ ತನ್ನ ಪ್ರಭಾವವನ್ನು ವಿಸ್ತರಿಸುತ್ತಿದ್ದು, ಭಾರತೀಯ ಕಾನೂನು ತಜ್ಞರು ಜಾಗತಿಕ ವೇದಿಕೆಗಳಲ್ಲಿ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ, ಸೈಬರ್ ಅಪರಾಧಗಳು ದೊಡ್ಡ ಸವಾಲಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ, ಅವುಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಕಾನೂನು ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಹಕಾರ ಸಚಿವ ಕೆ.ಎನ್. ರಾಜಣ್ಣ, ನ್ಯಾಯಾಂಗ ಮತ್ತು ವಕೀಲರ ವಲಯದಲ್ಲಿ ನಡೆಯುತ್ತಿರುವ ಕೆಲವು ಬೆಳವಣಿಗೆಗಳಿಂದ ಜನರ ವಿಶ್ವಾಸ ಕುಗ್ಗುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು.
"ನಾವು ಹಿಂದೆ ನ್ಯಾಯಾಲಯಕ್ಕೆ ಹೋಗುವಾಗ ಕಕ್ಷಿದಾರರು ತಮ್ಮ ಚಪ್ಪಲಿಗಳನ್ನು ಹೊರಗಿಟ್ಟು, ಕೈ ಮುಗಿದು, ನ್ಯಾಯದೇವತೆಯ ದೇವಾಲಯ ಎಂಬ ಭಾವನೆಯೊಂದಿಗೆ ಅಪಾರ ಭಕ್ತಿ ಮತ್ತು ಗೌರವದಿಂದ ಒಳಗೆ ಪ್ರವೇಶಿಸುತ್ತಿದ್ದರು. ಇಂದು ಆ ಗೌರವ ಕಡಿಮೆಯಾಗುತ್ತಿದೆ ಎಂದು ಹೇಳಿದರೆ ಅದು ತಪ್ಪಾಗುವುದಿಲ್ಲ" ಎಂದು ಹೇಳಿದರು.
ನ್ಯಾಯಾಲಯ ಎನ್ನುವುದು ನ್ಯಾಯದೇವತೆಯ ದೇವಾಲಯವಾಗಿದ್ದು, ಅದರ ಘನತೆ, ಪಾವಿತ್ರ್ಯ ಮತ್ತು ಗೌರವವನ್ನು ಉಳಿಸಿಕೊಳ್ಳಲು ಸಮಾಜದ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ಕರೆ ನೀಡಿದರು.