ಬೆಂಗಳೂರು: ನಗರದ ಎಚ್ಎಂಟಿಗೆ ಸೇರಿದ ಭೂಮಿಯನ್ನು ಅರಣ್ಯ ಇಲಾಖೆಯು ಅಕ್ರಮವಾಗಿ ರಿಯಲ್ ಎಸ್ಟೇಟ್ ಸಂಸ್ಥೆಗಳಿಗೆ ಮಾರಾಟ ಮಾಡಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ, ಭೂಪರಿವರ್ತನೆ ಆಗದ ಅರಣ್ಯ ಭೂಮಿಯಲ್ಲಿ ರಿಯಲ್ ಎಸ್ಟೇಟ್ ದಂಧೆಗೆ ಅವಕಾಶವೇ ಇರುವುದಿಲ್ಲ. ಹೀಗಾಗಿ ಎಚ್ಡಿ ಕುಮಾರಸ್ವಾಮಿ ಆರೋಪಕ್ಕೆ ಅರ್ಥವೇ ಇಲ್ಲ ಎಂದು ಸಚಿವ ಈಶ್ವರ್ ಖಂಡ್ರೆ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಸಾರ್ವಜನಿಕ ವಲಯದ ಉದ್ಯಮವಾದ HMTಯು ಅರಣ್ಯೇತರ ಬಳಕೆಗಾಗಿ ಅಧಿಕೃತವಾಗಿ ಪರಿವರ್ತನೆಯಾಗದ ಅರಣ್ಯ ಭೂಮಿಯನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿದೆ ಮತ್ತು ನಂತರ ಆ ಭೂಮಿಯನ್ನು ರಿಯಲ್ ಎಸ್ಟೇಟ್ ಕಂಪನಿಗಳಿಗೆ ಮಾರಾಟ ಮಾಡಿದೆ ಎಂದು ಸಚಿವ ಖಂಡ್ರೆ ಆರೋಪಿಸಿದರು.
ರಿಯಲ್ ಎಸ್ಟೇಟ್ಗೆ ಅನುಕೂಲವಾಗುವಂತೆ ಅರಣ್ಯ ಇಲಾಖೆಯು ಎಚ್ಎಂಟಿ ಭೂಮಿಯನ್ನು ಅತಿಕ್ರಮಣ ಮಾಡಿದೆ ಎಂಬ ಕುಮಾರಸ್ವಾಮಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಖಂಡ್ರೆ, 'ಅರಣ್ಯ ಭೂಮಿ ಒತ್ತುವರಿಯನ್ನು ತೆರವುಗೊಳಿಸಲು ಆದೇಶ ಹೊರಡಿಸಿರುವುದರಿಂದ ಇಲ್ಲಿ ಯಾವುದೇ ರಿಯಲ್ ಎಸ್ಟೇಟ್ ಚಟುವಟಿಕೆಗೆ ಅವಕಾಶವಿಲ್ಲ. ಹಾಗಾಗಿ ಕುಮಾರಸ್ವಾಮಿ ಅವರ ಆರೋಪಗಳಿಗೆ ಯಾವುದೇ ಅರ್ಥವಿಲ್ಲ' ಎಂದು ಹೇಳಿದರು.
ಭೂ ಪರಿವರ್ತನೆ ಆಗದ ಅರಣ್ಯ ಭೂಮಿಯನ್ನು ಅತಿಕ್ರಮಣ ಮಾಡಿರುವುದು ಎಚ್ಎಂಟಿಯೇ ಹೊರತು ಅರಣ್ಯ ಇಲಾಖೆಯಲ್ಲ ಎಂದು ಸ್ಪಷ್ಟಪಡಿಸಿದರು.
'ಅರಣ್ಯ ಭೂಮಿಯ ಅತಿಕ್ರಮಣವನ್ನು ಅರಣ್ಯ ಇಲಾಖೆ ಮಾಡಿಲ್ಲ ಬದಲಿಗೆ ಅದಕ್ಕೆ HMTಯೇ ನೇರ ಹೊಣೆ. ಕರ್ನಾಟಕ ಅರಣ್ಯ ಕಾಯ್ದೆ, 1963ರ ಸೆಕ್ಷನ್ 64A ಅಡಿಯಲ್ಲಿ ಈ ಭೂಮಿಯನ್ನು ಅತಿಕ್ರಮಣದಿಂದ ತೆರವುಗೊಳಿಸಿದ ನಂತರ, ಅಲ್ಲಿ ರಿಯಲ್ ಎಸ್ಟೇಟ್ ಮಾಡಲು ಹೇಗೆ ಸಾಧ್ಯ?' ಎಂದು ಪ್ರಶ್ನಿಸಿದರು.
ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿ, ಅರಣ್ಯ ಸಚಿವರು ಅಥವಾ ಸಚಿವ ಸಂಪುಟದ ಅನುಮೋದನೆಯಿಲ್ಲದೆ ಎಚ್ಎಂಟಿ ಸ್ವಾಧೀನದಲ್ಲಿರುವ ಅರಣ್ಯ ಭೂಮಿಯನ್ನು ಡಿ-ನೋಟಿಫೈ ಮಾಡುವಂತೆ ಕೋರಿ ಕೆಲವು ಅಧಿಕಾರಿಗಳು ಈ ಹಿಂದೆ ಸುಪ್ರೀಂ ಕೋರ್ಟ್ನಲ್ಲಿ ಐಎ ಸಲ್ಲಿಸಿದ್ದರು. ಆ ಅಧಿಕಾರಿಗಳನ್ನು ಅಮಾನತುಗೊಳಿಸಲಾಯಿತು ಮತ್ತು ಶೋಕಾಸ್ ನೋಟಿಸ್ಗಳನ್ನು ನೀಡಲಾಯಿತು. ರಾಜ್ಯ ಸರ್ಕಾರವು IA ಅನ್ನು ಹಿಂಪಡೆಯಲು ಕ್ಯಾಬಿನೆಟ್ ಅನುಮೋದನೆಯನ್ನು ಪಡೆದುಕೊಂಡಿದೆ ಮತ್ತು ಜೊತೆಗೆ ನ್ಯಾಯಾಲಯದ ಮೊರೆ ಹೋಗಿದೆ ಎಂದು ಖಂಡ್ರೆ ಹೇಳಿದರು.
'ಅರಣ್ಯ ಸಂರಕ್ಷಣಾ ಕಾಯ್ದೆ, 1980 ಜಾರಿಗೆ ಬಂದ ನಂತರ, ಭೂಪರಿವರ್ತನೆ ಮಾಡದ ಯಾವುದೇ ಅರಣ್ಯ ಭೂಮಿ ಅರಣ್ಯವಾಗಿಯೇ ಮುಂದುವರಿಯುತ್ತದೆ. ಸುಪ್ರೀಂ ಕೋರ್ಟ್ ಕೂಡ ಇದನ್ನೇ ತೀರ್ಪು ನೀಡಿದೆ. ಆದ್ದರಿಂದ ಈ ಭೂಮಿ ಮುಂದೆಯೂ ಅರಣ್ಯವಾಗಿಯೇ ಉಳಿಯುತ್ತದೆ' ಎಂದರು.
ಎಚ್ಎಂಟಿ ಭೂಮಿಯಲ್ಲಿ ಯಾವುದೇ ಅರಣ್ಯವಿಲ್ಲ, ಕಟ್ಟಡಗಳಿವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ನಾನು ಸರ್ಕಾರಿ ಅಧಿಕಾರಿಗಳೊಂದಿಗೆ ಆ ಸ್ಥಳಕ್ಕೆ ವೈಯಕ್ತಿಕವಾಗಿ ಭೇಟಿ ನೀಡಿದ್ದೆ. ಎಚ್ಎಂಟಿ ಅಧಿಕಾರಿಗಳೇ ಸ್ವತಃ ತಮ್ಮನ್ನು ಹೂಗುಚ್ಛ ನೀಡಿ ಸ್ವಾಗತಿಸಿದರು. ಆ ಆವರಣಕ್ಕೆ ಪ್ರವೇಶಿಸಲು ಅವರೇ ಅವಕಾಶ ನೀಡಿದ್ದಾರೆ ಹೀಗಾಗಿ ಅದನ್ನು ಅತಿಕ್ರಮಣ ಎಂದು ಹೇಗೆ ಕರೆಯಬಹುದು? ಎಂದು ಕೇಳಿದರು.
'ಎಚ್ಎಂಟಿ ವಶದಲ್ಲಿರುವ ಭೂಮಿಯ ಪೈಕಿ 280 ಎಕರೆ ಪ್ರದೇಶದಲ್ಲಿ ಈಗಲೂ ಅರಣ್ಯ ಸ್ವರೂಪದ ನೆಡುತೋಪಿದೆ. ಪಕ್ಕದಲ್ಲಿರುವ ಪಾಳುಬಿದ್ದ ಕಟ್ಟಡಗಳಲ್ಲಿ ಸಿನಿಮಾ, ಧಾರಾವಾಹಿ ಶೂಟಿಂಗ್ ನಡೆಯುತ್ತಿದೆ. ಅರಣ್ಯ ಭೂಮಿಯನ್ನು HMT ಅಕ್ರಮವಾಗಿ ವಾಣಿಜ್ಯ ಉದ್ದೇಶಗಳಿಗೆ ಬಳಸುತ್ತಿದೆ. ಅದು 165 ಎಕರೆ ಭೂಮಿಯನ್ನು ಕೇವಲ ₹300 ಕೋಟಿಗೆ ಮಾರಾಟ ಮಾಡಿದೆ. ಕುಮಾರಸ್ವಾಮಿ ಈ ಸ್ಥಳಕ್ಕೆ ಭೇಟಿ ನೀಡಿ ಎಲ್ಲವನ್ನೇೂ ಪರಿಶೀಲಿಸಲಿ' ಎಂದು ಸವಾಲೆಸೆದರು.
'7 ಕೋಟಿ ಕನ್ನಡಿಗರ ಆಸ್ತಿ'
HMT ಅರಣ್ಯ ಭೂಮಿ '7 ಕೋಟಿ ಕನ್ನಡಿಗರ ಆಸ್ತಿ' ಎಂದು ಕರೆದ ಖಂಡ್ರೆ, ಇದು ಬೆಂಗಳೂರಿಗೆ ಪ್ರಮುಖ ಹಸಿರು ಶ್ವಾಸತಾಣವಾಗಿದೆ. ಲಾಲ್ಬಾಗ್ ಮತ್ತು ಕಬ್ಬನ್ ಪಾರ್ಕ್ಗಿಂತ ದೊಡ್ಡದಾದ 444 ಎಕರೆ ಪ್ರದೇಶದಲ್ಲಿ ಜೀವವೈವಿಧ್ಯ ಉದ್ಯಾನವನ್ನು ನಿರ್ಮಿಸುವುದು ನಮ್ಮ ಗುರಿಯಾಗಿತ್ತು. ಇದನ್ನು ಸಾರ್ವಜನಿಕವಾಗಿ ಘೋಷಿಸಲಾಗಿತ್ತು. ಕುಮಾರಸ್ವಾಮಿ ರಿಯಲ್ ಎಸ್ಟೇಟ್ ವ್ಯವಹಾರಗಳ ಆರೋಪ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಖಂಡ್ರೆ ತಿಳಿಸಿದರು.
ರಾಜ್ಯಕ್ಕೆ ಬೆಳಕು ನೀಡಲು ತಮ್ಮ ಭೂಮಿ ಕಳೆದುಕೊಂಡ ಶರಾವತಿ ಸಂತ್ರಸ್ತರಿಗೆ ಇನ್ನೂ ಭೂಮಿಯ ಹಕ್ಕು ನೀಡಲು ಸಾಧ್ಯವಾಗಿಲ್ಲ. ಏಕೆಂದರೆ, ಅವರಿಗೆ 1950ರ ದಶಕದಲ್ಲಿ ಅರಣ್ಯ ಭೂಮಿ ಮಂಜೂರು ಮಾಡುವಾಗ ಭೂ ಪರಿವರ್ತನೆ ಮಾಡಿರಲಿಲ್ಲ. ನಂತರ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ವಿಧಾನಮಂಡಲದಲ್ಲಿ ಚರ್ಚಿಸಿ ಡಿನೋಟಿಫೈ ಮಾಡಲಾಗಿತ್ತು. ಆದರೆ ನ್ಯಾಯಾಲಯ 1980ರ ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿ ಬಳಿಕ ಇದಕ್ಕೆ ಅವಕಾಶವಿಲ್ಲ ಎಂದು ಹೇಳಿದೆ' ಎಂದು ತಿಳಿಸಿದರು.
'ಈ ಪರಿಸ್ಥಿತಿಯನ್ನು ಗಮನಿಸಿದರೆ, HMT ರಿಯಲ್ ಎಸ್ಟೇಟ್ ಸಂಸ್ಥೆಗಳು ಮತ್ತು ಇತರರಿಗೆ ಭೂಮಿಯನ್ನು ಮಾರಾಟ ಮಾಡುವುದು ಕಾನೂನುಬಾಹಿರವಾಗಿದೆ' ಎಂದು ಅವರು ಹೇಳಿದರು.